ಮೆದುಳು ನಿಷ್ಕ್ರಿಯಗೊಂಡ ಕೇರಳದ ಯೋಧನಿಂದ 7 ಜನರಿಗೆ ಜೀವದಾನ; ಸಿಎಂ ಪ್ರಶಂಸೆ
ರಾಹುಲ್ ರಾಜೀವ್ | Image Source: X
ತಿರುವನಂತಪುರ: ಕೊಲ್ಲಂ ಮೂಲದ ಯೋಧರೋರ್ವರ ಅಂಗಾಂಗ ದಾನದಿಂದ ಏಳು ಜನರಿಗೆ ಮರುಜೀವ ಸಿಕ್ಕಿದ್ದು, ಅವರ ನಿಸ್ವಾರ್ಥ ಸೇವೆಯನ್ನು ಕೇರಳ ಮುಖ್ಯಮಂತ್ರಿ ವಿ.ಡಿ.ಸತೀಶನ್ ಶನಿವಾರ ಪ್ರಶಂಸಿಸಿದ್ದಾರೆ.
ಇಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯೋಧ ರಾಹುಲ್ ರಾಜೀವ್ (30) ಮೆದುಳು ನಿಷ್ಕ್ರಿಯಗೊಂಡಿತ್ತು ಎಂದು ಮೂಲಗಳು ತಿಳಿಸಿವೆ.
ಹಿಮಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದ ಯೋಧ ರಾಹುಲ್ ರಾಜೀವ್ ತನ್ನ ನಿಧನದ ಬಳಿಕ ಕೇರಳ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (ಕೆ-ಸೊಟ್ಟೊ) ಮೂಲಕ ತಮ್ಮ ಅಂಗಾಂಗಗಳನ್ನು ದಾನ ಮಾಡಿದ್ದಾರೆ ಎಂದು ಸತೀಶನ್ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಅಗತ್ಯವುಳ್ಳ ರೋಗಿಗಳಿಗೆ ಕಸಿಗಾಗಿ ಅಂಗಾಂಗಗಳನ್ನು ಸಕಾಲದಲ್ಲಿ ಸಾಗಿಸಲು ತಿರುವನಂತಪುರದಿಂದ ತಿರುವಲ್ಲದವರೆಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡುವಲ್ಲಿ ಶ್ರಮಿಸಿದ ಕೇರಳ ಪೊಲೀಸರ ಕಾರ್ಯವನ್ನೂ ಅವರು ಶ್ಲಾಘಿಸಿದ್ದಾರೆ.
ರಾಹುಲ್ ಅವರ ಕರುಣೆಯ ಪರಂಪರೆಯು ಎಂದೆಂದಿಗೂ ಕೇರಳಕ್ಕೆ ಸ್ಫೂರ್ತಿಯಾಗಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದು, ದುಃಖತಪ್ತ ಕುಟುಂಬಕ್ಕೆ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ.