LPG ಒತ್ತಡ ತಗ್ಗಿಸಲು ಸೀಮೆಎಣ್ಣೆ ಮರುಪೂರೈಕೆಗೆ ಕೇಂದ್ರ ಸರಕಾರ ನಿರ್ಧಾರ | ಪೆಟ್ರೋಲ್ ಬಂಕ್ ಗಳ ಮೂಲಕ ವಿತರಣೆ
60 ದಿನಗಳಿಗೆ ನಿಯಮ ಸಡಿಲಿಕೆ; ಪ್ರತೀ ಜಿಲ್ಲೆಯ ಎರಡು ಬಂಕ್ ಗಳ ಮೂಲಕ ವಿತರಣೆಗೆ ಸಿದ್ಧತೆ
ಸಾಂದರ್ಭಿಕ ಚಿತ್ರ (AI)
ಹೊಸದಿಲ್ಲಿ: ಪಶ್ಚಿಮ ಏಷ್ಯಾದ ಉದ್ವಿಗ್ನತೆಯಿಂದ ಜಾಗತಿಕ ಇಂಧನ ಸರಬರಾಜಿನಲ್ಲಿ ಉಂಟಾದ ಅನಿಶ್ಚಿತತೆಯ ನಡುವೆ, LPG ಪೂರೈಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸೀಮೆಎಣ್ಣೆ (SKO) ಪೂರೈಕೆಯನ್ನು ತಾತ್ಕಾಲಿಕವಾಗಿ ಮರುಪ್ರಾರಂಭಿಸಲು ನಿರ್ಧರಿಸಿದೆ.
ಈ ಸಂಬಂಧ ಮಾರ್ಚ್ 29ರಂದು ಹೊರಡಿಸಿದ ಗೆಜೆಟ್ ಅಧಿಸೂಚನೆಯಲ್ಲಿ, 60 ದಿನಗಳ ಅವಧಿಗೆ ಸೀಮೆಎಣ್ಣೆ ಪೂರೈಕೆ ಹಾಗೂ ವಿತರಣೆಗೆ ಸಂಬಂಧಿಸಿದ ನಿಯಮಗಳನ್ನು ಸಡಿಲಿಸಲಾಗಿದೆ. ಆಯ್ದ ಪೆಟ್ರೋಲ್ ಬಂಕ್ ಗಳ ಮೂಲಕ ಮನೆ ಬಳಕೆಗೆ ಸೀಮೆಎಣ್ಣೆ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪೆನಿಗಳು (OMCs) ಸೀಮೆಎಣ್ಣೆ ಪೂರೈಕೆಯನ್ನು ಹಂತ ಹಂತವಾಗಿ ನಿಲ್ಲಿಸಿದ್ದ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾರ್ವಜನಿಕ ವಿತರಣೆ ವ್ಯವಸ್ಥೆ (PDS) ಅಡಿಯಲ್ಲಿ ಸೀಮೆಎಣ್ಣೆ ಪೂರೈಕೆಯನ್ನು ಮರುಪ್ರಾರಂಭಿಸಲು ಅನುಮತಿ ನೀಡಲಾಗಿದೆ.
ಪರಿಷ್ಕೃತ ನಿಯಮಾವಳಿಗಳ ಪ್ರಕಾರ, ಪ್ರತಿ ಜಿಲ್ಲೆಯಲ್ಲಿನ ಸಾರ್ವಜನಿಕ ವಲಯದ ತೈಲ ಸಂಸ್ಥೆಗಳ ಎರಡು ಪೆಟ್ರೋಲ್ ಬಂಕ್ ಗಳನ್ನು ಗುರುತಿಸಲಾಗುತ್ತದೆ. ಇವುಗಳಲ್ಲಿ ತಲಾ 2,500 ಲೀಟರ್ ಗಳವರೆಗೆ ಸೀಮೆಎಣ್ಣೆಯನ್ನು ಸಂಗ್ರಹಿಸಿ, ಮನೆ ಬಳಕೆಗೆ ವಿತರಿಸಲು ಅವಕಾಶ ಕಲ್ಪಿಸಲಾಗಿದೆ.
LPG ಪೂರೈಕೆಯಲ್ಲಿ ಉಂಟಾಗಿರುವ ಅಡಚಣೆಗಳನ್ನು ಮನಗಂಡು, ಮನೆಗಳಿಗೆ ಅಡುಗೆ ಹಾಗೂ ಬೆಳಕಿಗೆ ಅಗತ್ಯವಾದ ಇಂಧನ ನಿರಂತರವಾಗಿ ದೊರೆಯುವಂತೆ ಮಾಡುವುದೇ ಈ ಕ್ರಮದ ಉದ್ದೇಶವಾಗಿದೆ ಎಂದು ಕೇಂದ್ರ ತಿಳಿಸಿದೆ.
ವೇಗವಾದ ವಿತರಣೆಗೆ ಅನುಕೂಲವಾಗುವಂತೆ ಪೆಟ್ರೋಲಿಯಂ ನಿಯಮಗಳು–2002 ಅಡಿಯಲ್ಲಿ ಡೀಲರ್ ಗಳು ಮತ್ತು ಸಾಗಣೆದಾರರಿಗೆ ಕೆಲವು ಪರವಾನಗಿ ಷರತ್ತುಗಳಿಂದ ವಿನಾಯಿತಿ ನೀಡಲಾಗಿದೆ. ಆದಾಗ್ಯೂ, ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (PESO) ನಿಗದಿಪಡಿಸಿರುವ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ.
ಪೆಟ್ರೋಲಿಯಂ ಕಾಯ್ದೆ–1934 ಮತ್ತು ನಿಯಮಗಳು–2002 ಅಡಿಯಲ್ಲಿ ಅಸಾಧಾರಣ ಸಂದರ್ಭಗಳಲ್ಲಿ ಸರ್ಕಾರಕ್ಕೆ ನಿಯಮ ಸಡಿಲಿಕೆ ನೀಡುವ ಅಧಿಕಾರವಿದ್ದು, ಅದನ್ನು ಬಳಸಿಕೊಂಡೇ ಈ ತಾತ್ಕಾಲಿಕ ಕ್ರಮ ಜಾರಿಗೆ ತರಲಾಗಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಈ ವ್ಯವಸ್ಥೆ ಮನೆ ಬಳಕೆಗೆ ಮಾತ್ರ ಅನ್ವಯವಾಗಿದ್ದು, ಅಡುಗೆ ಮತ್ತು ದೀಪಕ್ಕಾಗಿ ಬಳಸುವ ಸೀಮೆಎಣ್ಣೆಗೆ ಸೀಮಿತವಾಗಿದೆ. ಅಧಿಸೂಚನೆ ತಕ್ಷಣದಿಂದಲೇ ಜಾರಿಗೆ ಬಂದಿದ್ದು, 60 ದಿನಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ಮಾನ್ಯವಾಗಿರುತ್ತದೆ.
ದಿಲ್ಲಿಯ NCT, ಚಂಡೀಗಢ, ಹರ್ಯಾ ಣ, ಪಂಜಾಬ್, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು, ಪುದುಚೇರಿ, ಆಂಧ್ರ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ರಾಜಸ್ಥಾನ, ಉತ್ತರ ಪ್ರದೇಶ, ಗೋವಾ, ಗುಜರಾತ್, ಉತ್ತರಾಖಂಡ, ಲಕ್ಷದ್ವೀಪ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ತೆಲಂಗಾಣ, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಮಧ್ಯಪ್ರದೇಶ ಹಾಗೂ ಸಿಕ್ಕಿಂ ನಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ.