'ಕಾಕ್ರೋಚ್' ಪ್ರತಿಭಟನೆಗೂ ಮುನ್ನ ಮೂವರು ವಕ್ತಾರರನ್ನು ನೇಮಿಸಿದ CJP
ಹೊಸದಿಲ್ಲಿ, ಜೂ. 3: ವಿಡಂಬನಾತ್ಮಕ ಆನ್ಲೈನ್ ಸಮೂಹವಾಗಿ ಪ್ರಾರಂಭವಾದ ಕಾಕ್ರೋಚ್ ಜನತಾ ಪಾರ್ಟಿ (CJP) ‘ಪ್ರತಿಭಟನಾ ಚಳುವಳಿಯ ಪರವಾಗಿ ಸಾರ್ವಜನಿಕರು ಮತ್ತು ಮಾಧ್ಯಮಗಳೊಂದಿಗೆ ಮಾತನಾಡಲು’ ಮೂವರು ವಕ್ತಾರರನ್ನು ನೇಮಕ ಮಾಡಿರುವುದಾಗಿ ಬುಧವಾರ ಘೋಷಿಸಿದೆ.
‘ತನಿಖಾ ಪತ್ರಕರ್ತ ಸೌರವ್ ದಾಸ್ ಮುಖ್ಯ ವಕ್ತಾರರಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಅವರೊಂದಿಗೆ ರಾಜಕೀಯ ಸಂಶೋಧಕಿ, ಲೇಖಕಿ ಮತ್ತು ಚಲನಚಿತ್ರ ನಿರ್ಮಾಪಕಿ ವಿಜೇತ ದಹಿಯಾ ಹಾಗೂ ಅಶುತೋಷ್ ರಾಂಕಾ ಅವರು ಕೂಡ ವಕ್ತಾರರಾಗಿ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಸಿಜೆಪಿ ತನ್ನ ಸಾಮಾಜಿಕ ಮಾಧ್ಯಮ ಖಾತೆ ‘ಎಕ್ಸ್’ನಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಭಾರತದ ರಾಜಕೀಯ ಸಂಕಥನವನ್ನು ಬದಲಾಯಿಸಲು ಸಿಜೆಪಿ ಬದ್ಧವಾಗಿದೆ. ಇದನ್ನು ಹೊಸ ಪೀಳಿಗೆಯ ನಾಯಕರು ಮುನ್ನಡೆಸಲಿದ್ದಾರೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ದಿಲ್ಲಿಯ ಇಂಡಿಯಾ ಗೇಟ್ನಲ್ಲಿ 2025ರ ನವೆಂಬರ್ನಲ್ಲಿ ನಡೆದ ಮಾಲಿನ್ಯ ವಿರೋಧಿ ಪ್ರತಿಭಟನೆಯನ್ನು ಮುನ್ನಡೆಸಿದವರಲ್ಲಿ ಸೌರವ್ ದಾಸ್ ಕೂಡ ಒಬ್ಬರಾಗಿದ್ದರು ಎಂದು ಈ ಸಮೂಹ ತಿಳಿಸಿದೆ.
ಈ ಮೂವರು ಚಳುವಳಿಯನ್ನು ಬಲಪಡಿಸಲಿದ್ದಾರೆ. ದಾಸ್ ಅವರು ಹೊಣೆಗಾರಿಕೆ ಆಧಾರಿತ ಸಂದೇಶಗಳನ್ನು ರವಾನಿಸಲಿದ್ದಾರೆ. ದಹಿಯಾ ಅವರು ನಾಗರಿಕ ಸಮಾಜದೊಂದಿಗಿನ ಒಡನಾಟದ ನೇತೃತ್ವ ವಹಿಸಲಿದ್ದಾರೆ. ರಾಂಕಾ ಅವರು ವಿದ್ಯಾವಂತ ಯುವಕರು ಮತ್ತು ತಂತ್ರಜ್ಞಾನ ವೃತ್ತಿಪರರ ನಡುವೆ ಈ ಸಮೂಹದ ಆಕರ್ಷಣೆಯನ್ನು ಬಲಪಡಿಸಲು ಶ್ರಮಿಸಲಿದ್ದಾರೆ.
ನಿರುದ್ಯೋಗಿ ಯುವಕರ ಕುರಿತು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೇಳಿಕೆಗಳ ವಿರುದ್ಧದ ಆಕ್ರೋಶದ ನಂತರ ಈ ತಿಂಗಳು ಸಿಜೆಪಿ ವೇದಿಕೆಯನ್ನು ಪ್ರಾರಂಭಿಸಲಾಯಿತು. ಇದು ಈಗ ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಾಮಾಜಿಕ ಮಾಧ್ಯಮ ಚಳುವಳಿಗಳಲ್ಲಿ ಒಂದಾಗಿದೆ. ಸಿಜೆಪಿ ಮುಖ್ಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಬೆಂಬಲಿಗರನ್ನು ಹೊಂದಿದ್ದು, ಭಾರತದ ಶಿಕ್ಷಣ ವಲಯದಲ್ಲಿನ ಪರೀಕ್ಷಾ ಅಕ್ರಮಗಳು ಮತ್ತು ಹೊಣೆಗಾರಿಕೆಯ ವೈಫಲ್ಯಗಳ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶವನ್ನು ಒಗ್ಗೂಡಿಸುತ್ತಿದೆ.