ಸೌರವ್ ಗಂಗುಲಿ ದಂಪತಿಗೆ ಕೊಲೆ ಬೆದರಿಕೆ: ದೂರು ದಾಖಲು

Update: 2026-08-11 07:06 IST

ಕೊಲ್ಕತ್ತಾ: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ ಅಧ್ಯಕ್ಷ ಸೌರವ್ ಗಂಗುಲಿ ಮತ್ತು ಅವರ ಪತ್ನಿ ಡೋನಾ ಗಂಗೂಲಿ ಅವರಿಗೆ ಕೊಲೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸ್ ದೂರು ದಾಖಲಾಗಿದೆ.

ಕಳೆದ ಸುಮಾರು ಆರು ತಿಂಗಳಿಂದ ಗಂಗುಲಿ ಅವರ ಹೆಸರಿಗೆ ಹಲವು ಬೆದರಿಕೆ ಪತ್ರಗಳು ಬರುತ್ತಿದ್ದವು ಎನ್ನಲಾಗಿದೆ. ಆರಂಭದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಸೋಮವಾರ ಅವರ ಕಚೇರಿಗೆ ಬಂದ ಎರಡು ಪತ್ರಗಳಲ್ಲಿ ಗಂಗುಲಿ ದಂಪತಿಯನ್ನು ಕೊಲ್ಲುವುದಾಗಿ ಹಾಗೂ ಅವರ ಆಪ್ತರಿಗೆ ಹಾನಿ ಮಾಡುವುದಾಗಿ ಸ್ಪಷ್ಟ ಬೆದರಿಕೆ ಹಾಕಲಾಗಿತ್ತು.

ಈ ಹಿನ್ನೆಲೆಯಲ್ಲಿ ಗಂಗುಲಿ ಅವರ ಮ್ಯಾನೇಜರ್ ದಕ್ಷಿಣ ಕೊಲ್ಕತ್ತಾದ ಠಾಕೂರ್ಪುಕುರ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದಾರೆ.

ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ಆರಂಭಿಸಿದ್ದು, ಪತ್ರಗಳ ಮೂಲ, ಅವುಗಳನ್ನು ಕಳುಹಿಸಿದ ವಿಧಾನ ಹಾಗೂ ಕೊರಿಯರ್ ಜಾಡನ್ನು ಪರಿಶೀಲಿಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಉತ್ತರ 24 ಪರಗಣ ಜಿಲ್ಲೆಯ ಬೆಲ್ಘರಿಯಾದ ವ್ಯಕ್ತಿಯೊಬ್ಬರು ಕೊರಿಯರ್ ಮೂಲಕ ಪತ್ರಗಳನ್ನು ಕಳುಹಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಪತ್ರ ಕಳುಹಿಸಲು ಬಳಸಲಾಗಿದೆ ಎನ್ನಲಾದ ಸಿಮ್ ಕಾರ್ಡ್‌ನ ಚಲನವಲನಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಜೊತೆಗೆ, ಪಾರ್ಸೆಲ್‌ಗೆ ಸಂಬಂಧಿಸಿದ ವಿವರಗಳನ್ನು ಪಡೆಯಲು ಕೊರಿಯರ್ ಏಜೆನ್ಸಿಯನ್ನು ಸಂಪರ್ಕಿಸಲಾಗಿದೆ.

“ದೂರನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಆರಂಭಿಸಿದ್ದೇವೆ. ಪತ್ರಗಳ ಮೂಲ ಮತ್ತು ಕೊರಿಯರ್ ಜಾಡನ್ನು ಪರಿಶೀಲಿಸಿ, ಕಾರಣರಾದ ವ್ಯಕ್ತಿಯನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News