ಕಾಂಗ್ರೆಸ್ ನಲ್ಲಿ ರಾಜ್ಯಗಳ ಉಸ್ತುವಾರಿಗಳ ಬದಲಾವಣೆ | ಪಂಜಾಬ್ ಗೆ ಸಚಿನ್ ಪೈಲಟ್; ಸುರ್ಜೇವಾಲಾಗೆ ಗುಜರಾತ್ ನ ಹೆಚ್ಚುವರಿ ಹೊಣೆ, ಅಸ್ಸಾಂಗೆ ಬಘೇಲ್
ಮಂಗಳೂರಿನ ಪಿ.ವಿ. ಮೋಹನ್ ಅವರಿಗೆ ಆಂಧ್ರಪ್ರದೇಶದ ಉಸ್ತುವಾರಿ
ಸಚಿನ್ ಪೈಲಟ್ , ಸುರ್ಜೇವಾಲಾ, ಭೂಪೇಶ್ ಬಘೇಲ್, ಪಿ.ವಿ. ಮೋಹನ್
ಹೊಸದಿಲ್ಲಿ: ಮುಂಬರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಶನಿವಾರ ವಿವಿಧ ರಾಜ್ಯಗಳ ಉಸ್ತುವಾರಿಗಳಲ್ಲಿ ಬದಲಾವಣೆ ಮಾಡಿದೆ.
ಸಚಿನ್ ಪೈಲಟ್ ಅವರನ್ನು ಪಂಜಾಬ್ ನ ನೂತನ AICC ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಕರ್ನಾಟಕದ ಜೊತೆಗೆ ಗುಜರಾತ್ ನ ಉಸ್ತುವಾರಿಯನ್ನೂ ವಹಿಸಲಾಗಿದೆ. ಇದುವರೆಗೆ ಪಂಜಾಬ್ ನ ಉಸ್ತುವಾರಿ ವಹಿಸಿದ್ದ ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಅಸ್ಸಾಂನ ಉಸ್ತುವಾರಿಯಾಗಿ ನೇಮಿಸಲಾಗಿದೆ.
ಕರ್ನಾಟಕದ ವಿಧಾನ ಪರಿಷತ್ ಸದಸ್ಯ ಪಿ.ವಿ. ಮೋಹನ್ ಅವರಿಗೆ ಆಂಧ್ರಪ್ರದೇಶದ ಉಸ್ತುವಾರಿ ವಹಿಸಲಾಗಿದೆ.
ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿರುವ ಈ ಬದಲಾವಣೆಗಳನ್ನು AICC ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಪ್ರಕಟಿಸಿದರು.
ಪಂಜಾಬ್ ನಲ್ಲಿ ವಿಧಾನಸಭಾ ಚುನಾವಣೆ 2027ರ ಆರಂಭದಲ್ಲಿ ನಡೆಯಲಿದೆ. ಗುಜರಾತ್ ನಲ್ಲಿ ಮುಂದಿನ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳಿಗೆ ಪಕ್ಷವು ಹೊಸ ಜವಾಬ್ದಾರಿಗಳನ್ನು ವಹಿಸಿದೆ.
ಪಂಜಾಬ್ ನಲ್ಲಿ ಮಾಜಿ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ (PCC) ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರ ಬಣಗಳ ನಡುವೆ ತೀವ್ರ ಗುಂಪುಗಾರಿಕೆ ನಡೆಯುತ್ತಿರುವ ಸಂದರ್ಭದಲ್ಲಿ ಪೈಲಟ್ ಅವರ ನೇಮಕ ಮಹತ್ವ ಪಡೆದಿದೆ.
ಜುಲೈನಲ್ಲಿ ನಡೆದ ಪಕ್ಷದ ಪುನರ್ರಚನೆಯಲ್ಲಿ ಚನ್ನಿ ಅವರನ್ನು ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ವಾರಿಂಗ್ ಅವರನ್ನು PCC ಅಧ್ಯಕ್ಷರಾಗಿ ಮುಂದುವರಿಸಲಾಗಿತ್ತು. ಈ ನಿರ್ಧಾರದ ಬಳಿಕ ಪಂಜಾಬ್ ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಬಹಿರಂಗವಾಗಿ ಕಾಣಿಸಿಕೊಂಡಿತ್ತು.
ಕೇರಳದಲ್ಲಿ ಹಿರಿಯ ಚುನಾವಣಾ ವೀಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಪೈಲಟ್ ಅವರನ್ನು ಪಂಜಾಬ್ ನ ಉಸ್ತುವಾರಿಯಾಗಿ ನೇಮಿಸುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿದೆ ಎನ್ನಲಾಗಿದೆ. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು.
ಪಂಜಾಬ್ ಕಾಂಗ್ರೆಸ್ ನಲ್ಲಿನ ಗುಂಪುಗಾರಿಕೆಯು ಪಕ್ಷದ ವರ್ಚಸ್ಸಿನ ಮೇಲೂ ಪರಿಣಾಮ ಬೀರಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಉದ್ದೇಶಿಸಿದ್ದ ರಾಜಕೀಯ ಯಾತ್ರೆಯೂ ಇದರಿಂದ ಹಿನ್ನಡೆಯಾಗಿತ್ತು.
ಕರ್ನಾಟಕದಲ್ಲಿ ನಾಯಕತ್ವದ ಸುಗಮ ಪರಿವರ್ತನೆ ಪ್ರಕ್ರಿಯೆಯಲ್ಲಿ ಸುರ್ಜೇವಾಲಾ ಪ್ರಮುಖ ಪಾತ್ರ ವಹಿಸಿದ್ದರು. ಸಿದ್ದರಾಮಯ್ಯ ಅವರ ಬಳಿಕ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸುವ ಪ್ರಕ್ರಿಯೆಯಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಗುಜರಾತ್ ನ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ ಎನ್ನಲಾಗಿದೆ.
ಗುಜರಾತ್ ನ ಉಸ್ತುವಾರಿ ವಹಿಸಿದ್ದ ಮುಕುಲ್ ವಾಸ್ನಿಕ್ ಅವರು AICC ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ.
► ಇತರ ರಾಜ್ಯಗಳಲ್ಲೂ ಬದಲಾವಣೆ
ಜಾರ್ಖಂಡ್ ನ ಲೋಕಸಭಾ ಸದಸ್ಯ ಸುಖದೇವ್ ಭಗತ್ ಅವರನ್ನು ಛತ್ತೀಸ್ಗಢದ AICC ಉಸ್ತುವಾರಿಯಾಗಿ ನೇಮಿಸಲಾಗಿದೆ.
ಸಿರಿವೆಲ್ಲಾ ಪ್ರಸಾದ್ ಅವರನ್ನು ಮಹಾರಾಷ್ಟ್ರದ ಉಸ್ತುವಾರಿಯಾಗಿ ನೇಮಿಸಲಾಗಿದೆ.
ನಿರ್ಗಮಿತ ಪ್ರಧಾನ ಕಾರ್ಯದರ್ಶಿಗಳು ಮತ್ತು ಉಸ್ತುವಾರಿಗಳ ಸೇವೆಗೆ ಕಾಂಗ್ರೆಸ್ ನಾಯಕತ್ವವು ಧನ್ಯವಾದ ಸಲ್ಲಿಸಿದೆ.
ಈ ವರ್ಷದ ಆರಂಭದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಬಳಿಕ ಜಿತೇಂದ್ರ ಸಿಂಗ್ ರಾಜೀನಾಮೆ ನೀಡಿದ್ದರು. ಮಹಾರಾಷ್ಟ್ರದ ಉಸ್ತುವಾರಿ ವಹಿಸಿದ್ದ ರಮೇಶ್ ಚೆನ್ನಿತ್ತಲ ಅವರು ಬಳಿಕ ಕೇರಳದ ಗೃಹ ಸಚಿವರಾದರು.
ಮಹಾರಾಷ್ಟ್ರದ AICC ಉಸ್ತುವಾರಿ ವಹಿಸಿದ್ದ ಮಾಣಿಕ್ಕಂ ಟ್ಯಾಗೋರ್ ಅವರನ್ನು ತಮಿಳುನಾಡಿನ ನೂತನ PCC ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.