ಮೋದಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಮಾಜಿ ಅಭಿಮಾನಿ ಮಧು ಕೀಶ್ವರ್
ಪ್ರಧಾನಿ ಮೋದಿ (PTI) / ಮಧು ಪೂರ್ಣಿಮಾ ಕೀಶ್ವರ್ (X)
ಹೊಸದಿಲ್ಲಿ : “ಮೋದಿಯವರೊಂದಿಗೆ ಆತ್ಮೀಯತೆಯಿಂದಾಗಿ ಸಂಸದರು ಮತ್ತು ಮಂತ್ರಿಗಳಾಗಿ ಆಯ್ಕೆಯಾದ ಮಹಿಳೆಯರ ಹೆಸರುಗಳು ಸಂಘಪರಿವಾರದ ವಲಯಗಳಲ್ಲಿ ಪಿಸುಗುಟ್ಟಲಾಗುತ್ತಿತ್ತು. ಇದರಿಂದಲೇ ನಾನು ಮುಂಚಿತವಾಗಿಯೇ ಅಂತರ ಕಾಯ್ದುಕೊಂಡೆ,” ಎಂದು ಹಿಂದುತ್ವವಾದಿ ಚಿಂತಕಿ ಮಧು ಪೂರ್ಣಿಮಾ ಕೀಶ್ವರ್ ಹೇಳಿದ್ದಾರೆ.
ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಸುಬ್ರಮಣಿಯನ್ ಸ್ವಾಮಿ ಅವರು ಪಾಡ್ ಕಾಸ್ಟೊಂದರಲ್ಲಿ ಮೋದಿ ಕುರಿತು ನೀಡಿದ್ದಾರೆನ್ನಲಾದ ಹೇಳಿಕೆಗಳ ವಿಡಿಯೋವನ್ನು ಮರು ಹಂಚಿಕೊಂಡು ಕೀಶ್ವರ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಪ್ರಸಾರವಾದ ಪಾಡ್ ಕಾಸ್ಟ್ ನಲ್ಲಿ ಸುಬ್ರಮಣಿಯನ್ ಸ್ವಾಮಿ, “ಮೋದಿಯವರೊಂದಿಗೆ 'ಆತ್ಮೀಯ ಸಂಬಂಧ' ಹೊಂದಿದ್ದ ಕಾರಣದಿಂದ ಮೂರು ಅಥವಾ ನಾಲ್ಕು ಮಹಿಳೆಯರು ಸಂಸದರಾಗಿದ್ದಾರೆ; ಅವರಲ್ಲಿ ಒಬ್ಬರು ಸಚಿವರಾಗಿದ್ದಾರೆ. ಅವರ ಹೆಸರುಗಳನ್ನು ನಾನು ಹೇಳಬಲ್ಲೆ,” ಎಂದು ಗಂಭೀರ ಆರೋಪ ಮಾಡಿದ್ದರು.
ಈ ವೇಳೆ ನಿರೂಪಕರು ಎಪ್ಸ್ಟೀನ್ ಪ್ರಕರಣದ ದಾಖಲೆಗಳಲ್ಲಿ ಭಾರತೀಯರ ಹೆಸರುಗಳ ಕುರಿತು, “ಅದಲ್ಲಿರುವ ಹೆಸರುಗಳನ್ನು ನೋಡಿ ನನಗೆ ಆಶ್ಚರ್ಯ ಹಾಗೂ ದುಃಖವಾಯಿತು. ನಾವು ಹೀಗಿಲ್ಲ,” ಎಂದು ಹೇಳಿದಾಗ, ಸ್ವಾಮಿ “ನನಗೂ ದುಃಖವಾಯಿತು. ಆದರೆ ನಮ್ಮ ದೇಶದಲ್ಲಿಯೂ ಇಂತಹ ಘಟನೆಗಳು ನಡೆಯುತ್ತವೆ,” ಎಂದು ಪ್ರತಿಕ್ರಿಯಿಸಿದ್ದರು.
“ಎಪ್ಸ್ಟೀನ್ ತನ್ನದೇ ಜಾಲವನ್ನು ನಡೆಸುತ್ತಿದ್ದ. ಅದು ಜಿಬಿ ರಸ್ತೆ(ದಿಲ್ಲಿಯ ರೆಡ್ ಲೈಟ್ ಪ್ರದೇಶ)ಯಂತಿತ್ತು. ಅಲ್ಲಿ ಯಾರು ಯಾರು ಹೋಗಿದ್ದರು ಎಂಬ ದೀರ್ಘ ಪಟ್ಟಿಯಿದೆ. ಆದರೆ ಅದನ್ನು ಬಿಟ್ಟು ಮೊದಲು ದೊಡ್ಡ ವ್ಯಕ್ತಿಯನ್ನು ಗಮನಿಸೋಣ,” ಎಂದು ಹೇಳಿದ್ದರು.
ಈ ಪಾಡ್ ಕ್ಯಾಸ್ಟ್ ನ ವೀಡಿಯೊ ‘ಎಕ್ಸ್’ನಲ್ಲಿ 1.4 ಮಿಲಿಯನ್ ಗಿಂತ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ದೀರ್ಘವಾದ ಪೋಸ್ಟ್ ನಲ್ಲಿ ಕೀಶ್ವರ್ ಹಲವು ಆರೋಪಗಳನ್ನು ಮಾಡಿದ್ದಾರೆ.
ಹಿಂದುತ್ವವಾದಿ ಚಿಂತಕಿ ಮಧು ಪೂರ್ಣಿಮಾ ಕಿಶ್ವರ್ ಅವರ ಆರೋಪಗಳು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ.
“ಮೇ 2014ರಲ್ಲಿ ಮೋದಿ ಅಧಿಕಾರ ವಹಿಸಿಕೊಂಡ ಬಳಿಕ ನಾನು ಅವರಿಂದ ದೂರವಿದ್ದೆ. ನನ್ನ ಪುಸ್ತಕದ ಪ್ರತಿಯನ್ನು ನೇರವಾಗಿ ನೀಡದೆ, ಅವರ ನೆಚ್ಚಿನ ಅಧಿಕಾರಿ ಭರತ್ ಲಾಲ್ ಮೂಲಕ ಸಹಿ ಮಾಡದ ಪ್ರತಿಯನ್ನು ಕಳುಹಿಸಿದ್ದೆ,” ಎಂದು ಅವರು ಹೇಳಿದ್ದಾರೆ.
“ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ವಿಶೇಷ ಸೇವೆಗಳನ್ನು ಒದಗಿಸಿದವರ ಬಗ್ಗೆ, ಹರ್ದೀಪ್ ಪುರಿ ಮತ್ತು ಎಸ್. ಜೈಶಂಕರ್ ಸಚಿವರಾದ ನಂತರ ಗೌಪ್ಯವಾಗಿ ಚರ್ಚೆಗಳು ನಡೆಯುತ್ತಿದ್ದವು,” ಎಂದು ಅವರು ಉಲ್ಲೇಖಿಸಿದ್ದಾರೆ.
“2014ರಲ್ಲಿ ಅಮೆರಿಕ ಪ್ರವಾಸದ ವೇಳೆ ಸಹ ಅವರ ವೈಯಕ್ತಿಕ ಜೀವನದ ಬಗ್ಗೆ ಹಲವು 'ಮಾತುಗಳು' ಕೇಳಿಬಂದವು,” ಎಂದು ಕೀಶ್ವರ್ ತಿಳಿಸಿದ್ದಾರೆ.
“12ನೇ ತರಗತಿ ಪಾಸ್ ಆಗಿರುವ ಸ್ಮೃತಿ ಇರಾನಿ ಅವರನ್ನು ಶಿಕ್ಷಣ ಸಚಿವೆಯಾಗಿ ನೇಮಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಯಿತು. ಮಾನಸಿ ಸೋನಿ ಸಂಬಂಧಿತ ಪ್ರಕರಣ ಸುಪ್ರೀಂ ಕೋರ್ಟ್ ಗೆ ತಲುಪಿತ್ತು. ಅದರ ದಾಖಲೆಗಳ ಪ್ರತಿಗಳನ್ನು ಮೋದಿಯ ಆಪ್ತರೊಬ್ಬರು ನನಗೆ ನೀಡಿದ್ದರು,” ಎಂದು ಹೇಳಿದ್ದಾರೆ.
“ಗುಜರಾತ್ನ ಕೆಲವರು ಸೇರಿದಂತೆ ಮೋದಿಯ ಆಪ್ತರು, ಅವರು ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯರೊಂದಿಗೆ ಹೊಂದಿದ್ದ ಸಂಬಂಧಗಳ ಕುರಿತು ಅಸಹ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದರು. ಮೋದಿ ಪ್ರಚಾರಕ ಹಾಗೂ ಬಿಜೆಪಿ ಪದಾಧಿಕಾರಿಯಾಗಿದ್ದ ಕಾಲದಲ್ಲಿಯೂ ಇಂತಹ ವರದಿಗಳು ಕೇಳಿಬಂದಿದ್ದವು,” ಎಂದು ಅವರು ಬರೆದಿದ್ದಾರೆ.
“ಈ ಕಾರಣದಿಂದ ಮೋದಿ ಭಾಗವಹಿಸುವ ಸಾಧ್ಯತೆಯಿದ್ದ ಕಾರ್ಯಕ್ರಮಗಳನ್ನು, ಮದುವೆ ಸಮಾರಂಭಗಳನ್ನೂ ನಾನು ತಪ್ಪಿಸುತ್ತಿದ್ದೆ. ಈ ವಿಚಾರಗಳು ನನಗೆ ಭಾರೀ ಆಘಾತ ನೀಡಿದವು. 2014ರಲ್ಲಿ ಅದು ನನ್ನ ಆರೋಗ್ಯದ ಮೇಲೆ ಪರಿಣಾಮ ಬೀರಿತು. 2015ರಲ್ಲಿ ಚೇತರಿಸಿಕೊಳ್ಳಲು ಕೊಯಮತ್ತೂರಿನಲ್ಲಿ 21 ದಿನ ಆಯುರ್ವೇದ ಚಿಕಿತ್ಸೆ ಪಡೆದಿದ್ದೆ,” ಎಂದು ಕಿಶ್ವರ್ ಹೇಳಿದ್ದಾರೆ.
ಇದೇ ವೇಳೆ, “ಈ ವಿಷಯಗಳನ್ನು ನಾನು ಹಿರಿಯ ಆರೆಸ್ಸೆಸ್ ಬುದ್ಧಿಜೀವಿಯೊಬ್ಬರೊಂದಿಗೆ ಹಂಚಿಕೊಂಡಾಗ, ಅವರ ವೈಯಕ್ತಿಕ ಜೀವನ ನಮಗೇಕೆ? ಎಂದು ಅವರು ಪ್ರಶ್ನಿಸಿದರು,” ಎಂದು ಕೀಶ್ವರ್ ಆಘಾತ ವ್ಯಕ್ತಪಡಿಸಿದ್ದಾರೆ.
“ಅಶ್ಲೀಲ ವಿಡಿಯೋ ಹರಡುವ ಅಮಿತ್ ಮಾಳವೀಯರನ್ನು ಬಿಜೆಪಿ ಸಾಮಾಜಿಕ ಮಾಧ್ಯಮ ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವುದು ಪಕ್ಷದ ಉನ್ನತ ನಾಯಕತ್ವದ ಪಕ್ಷಪಾತ ನಿಲುವಿನ ಉದಾಹರಣೆ” ಎಂದು ಅವರು ಟೀಕಿಸಿದ್ದಾರೆ.
“ನಾಯಕತ್ವದ ಕೆಲವು ನಡೆಗಳು ದೇಶದ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂಬ ಭಾವನೆ ನನಗೆ ಮೊದಲ ಅವಧಿಯಲ್ಲೇ ಮೂಡಿತ್ತು. ಲೈಂಗಿಕ ಭ್ರಷ್ಟಾಚಾರದಂತಹ ವಿಷಯಗಳಲ್ಲಿ ರಾಜಿ ಮಾಡಿಕೊಂಡವರು ಬ್ಲ್ಯಾಕ್ ಮೇಲ್ ಗೆ ಒಳಗಾಗುವ ಸಾಧ್ಯತೆ ಇದೆ. ಈ ಕುರಿತು ಶೀಘ್ರದಲ್ಲೇ ಪುರಾವೆ ನೀಡುತ್ತೇನೆ” ಎಂದು ಮಧು ಪೂರ್ಣಿಮಾ ಕೀಶ್ವರ್ ಹೇಳಿದ್ದಾರೆ.
ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ. ಕೆಲವರು “ಗಂಭೀರ ಆರೋಪಗಳು; ತನಿಖೆ ಅಗತ್ಯ” ಎಂದು ಅಭಿಪ್ರಾಯಪಟ್ಟರೆ, ಇನ್ನು ಕೆಲವರು “ಇದು ರಾಜಕೀಯ ಪ್ರೇರಿತ ಚಾರಿತ್ರ್ಯ ಹತ್ಯೆ” ಎಂದು ಟೀಕಿಸಿದ್ದಾರೆ.
ಈ ಕುರಿತು ಬಿಜೆಪಿ ಅಥವಾ ಕೇಂದ್ರ ಸರ್ಕಾರದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಂದಿಲ್ಲ.
This explains why I kept a safe distance from Modi from the time he assumed power in May 2014. I did not even go to gift him a copy of my book on him. Just sent an unsigned copy through his favourite bureaucrat Bharat Lal!
— Madhu Purnima Kishwar (@madhukishwar) March 25, 2026
The names of women who were made MPs and ministers by… https://t.co/vgboxAndqq