ರಾಘವ್ ಚಡ್ಡಾ | Photo Credit : PTI
ಚಂಡೀಗಢ, ಸೆ. 3: ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (SIR) ಅಡಿಯಲ್ಲಿ ಸಿದ್ಧಪಡಿಸಿರುವ ಪಂಜಾಬ್ ನ ಕರಡು ಮತದಾರರ ಪಟ್ಟಿಯಿಂದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರ ಹೆಸರು ಅಳಿಸಲಾಗಿದೆ. ಅವರ ಹೆಸರನ್ನು ‘ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ’ ಎಂದು ಗುರುತಿಸಲಾಗಿದ್ದು, ಇದನ್ನು ‘ರಾಜಕೀಯ ಸೇಡು’ ಎಂದು ಚಡ್ಡಾ ಆರೋಪಿಸಿದ್ದಾರೆ.
ಆಗಸ್ಟ್ 13ರಂದು ಪ್ರಕಟಿಸಲಾದ ‘ಅನುಪಸ್ಥಿತ, ಸ್ಥಳಾಂತರಗೊಂಡ, ಮೃತ ಮತ್ತು ನಕಲಿ’ (ASDD) ಪಟ್ಟಿಯಲ್ಲಿ ಚಡ್ಡಾ ಅವರ ಹೆಸರೂ ಇದೆ. ಅವರ ಹೆಸರಿನ ವಿರುದ್ಧ ‘ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ’ ಎಂಬ ಕಾರಣ ದಾಖಲಿಸಲಾಗಿದೆ.
SIR ಪೂರ್ವದ ಮತದಾರರ ಪಟ್ಟಿಯಲ್ಲಿದ್ದ ಸುಮಾರು ಶೇ 9.7ರಷ್ಟು ಮತದಾರರು, ಅಂದರೆ 20.66 ಲಕ್ಷ ಮಂದಿಯ ಹೆಸರುಗಳನ್ನು ಕರಡು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಪಟ್ಟಿಯಲ್ಲಿ ಚಡ್ಡಾ ಅವರ ಹೆಸರೂ ಸೇರಿದೆ.
ತಮ್ಮ ಮತದಾರರ ಗುರುತಿನ ಚೀಟಿ ಮೊಹಾಲಿಯಲ್ಲಿ ನೋಂದಣಿಯಾಗಿದೆ ಎಂದು ಹೇಳಿರುವ ಚಡ್ಡಾ, ತಮ್ಮನ್ನು ‘ಸ್ಥಳಾಂತರಗೊಂಡವರು’ ಎಂದು ಏಕೆ ಗುರುತಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ. ಮತದಾರರ ಪಟ್ಟಿಗಳು ಇನ್ನೂ ಕರಡು ಹಂತದಲ್ಲಿವೆ. SIR ಮಾರ್ಗಸೂಚಿಗಳ ಅಡಿ ಒದಗಿಸಿರುವ ಪರಿಹಾರ ಕ್ರಮಗಳನ್ನು ತಾವು ಈಗಾಗಲೇ ಪಡೆಯುತ್ತಿರುವುದಾಗಿಯೂ ಅವರು ಹೇಳಿದ್ದಾರೆ.
‘ಇದು ಕೇವಲ ಗುಮಾಸ್ತರ ತಪ್ಪಿನಂತೆ ಕಾಣುತ್ತಿಲ್ಲ. ಇದು ರಾಜಕೀಯ ಸೇಡಿನ ಸ್ಪಷ್ಟ ಪ್ರಕರಣ’ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ಸುದೀರ್ಘ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
‘ಭ್ರಷ್ಟ ಎಎಪಿಯನ್ನು ತೊರೆದಾಗಿನಿಂದ ಅದರ ನಾಯಕತ್ವ ಕೋಪದಿಂದ ಉರಿಯುತ್ತಿದೆ’ ಎಂದು ಚಡ್ಡಾ ಹೇಳಿದ್ದಾರೆ. ಪಕ್ಷವನ್ನು ತೊರೆದವರ ವಿರುದ್ಧ ಪಂಜಾಬ್ ಪೊಲೀಸ್ ಮತ್ತು ರಾಜ್ಯದ ಆಡಳಿತ ಯಂತ್ರವನ್ನು ಬಳಸಲಾಗುತ್ತಿದೆ ಎಂದೂ ದೂರಿದ್ದಾರೆ.
‘ಮೌನವಾಗಿರಲು ನಿರಾಕರಿಸಿದ ನಮ್ಮ ವಿರುದ್ಧ ಪಂಜಾಬ್ ಪೊಲೀಸ್ ಮತ್ತು ಪಂಜಾಬ್ ಸರ್ಕಾರದ ಆಡಳಿತ ಯಂತ್ರವನ್ನು ಎಎಪಿ ಬಳಸುತ್ತಿದೆ. ಎಎಪಿ ತೊರೆದು ಬಿಜೆಪಿಗೆ ಸೇರಿದ ಇತರ ರಾಜ್ಯಸಭಾ ಸಂಸದರನ್ನೂ ಪಂಜಾಬ್ ಸರ್ಕಾರ ಗುರಿಯಾಗಿಸಿಕೊಂಡಿದೆ. ನನ್ನ ಹೆಸರನ್ನು ತಪ್ಪಾಗಿ ವರ್ಗೀಕರಿಸಿರುವುದು ಆ ರಾಜಕೀಯ ಸೇಡಿನ ಇತ್ತೀಚಿನ ಕೃತ್ಯ’ ಎಂದು ಅವರು ಹೇಳಿದ್ದಾರೆ.
ಸಂಸದರು ಮತ್ತು ಶಾಸಕರು ಸೇರಿದಂತೆ ಜನಪ್ರತಿನಿಧಿಗಳಿಗಾಗಿ ‘ರಕ್ಷಿತ ಪಟ್ಟಿ’ ರಚಿಸುವ ಎಸ್ಐಆರ್ ಮಾರ್ಗಸೂಚಿಯಲ್ಲಿನ ನಿಬಂಧನೆಯನ್ನು ತಮ್ಮ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಉಲ್ಲಂಘಿಸಲಾಗಿದೆ ಎಂದು ಚಡ್ಡಾ ಆರೋಪಿಸಿದ್ದಾರೆ. ಪಂಜಾಬ್ನ ಕರಡು ಮತದಾರರ ಪಟ್ಟಿಗಳು ಆಡಳಿತಾರೂಢ ಎಎಪಿಯ ‘ಖಾಸಗಿ ಆಸ್ತಿಯಲ್ಲ’ ಎಂದೂ ಅವರು ಹೇಳಿದ್ದಾರೆ.
ಎಪ್ರಿಲ್ ನಲ್ಲಿ ಬಿಜೆಪಿಗೆ ಸೇರ್ಪಡೆ
37 ವರ್ಷದ ಚಡ್ಡಾ ಅವರು 2022ರಲ್ಲಿ ಪಂಜಾಬ್ನಿಂದ ಎಎಪಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಈ ವರ್ಷದ ಏಪ್ರಿಲ್ನಲ್ಲಿ ಎಎಪಿ ತೊರೆದು ಇತರ ಆರು ರಾಜ್ಯಸಭಾ ಸದಸ್ಯರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಪಕ್ಷ ತೊರೆಯುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಅವರು, ಎಎಪಿ ತನ್ನ ತತ್ವಗಳು, ಮೌಲ್ಯಗಳು ಮತ್ತು ನೈತಿಕತೆಯಿಂದ ಸಂಪೂರ್ಣವಾಗಿ ದೂರ ಸರಿದಿದೆ ಎಂದು ಹೇಳಿದ್ದರು. ಆದರೆ, ಚಡ್ಡಾ ‘ಅವಕಾಶವಾದಿ’ ಎಂದು ಎಎಪಿ ಆರೋಪಿಸಿತ್ತು. ಪ್ರಮುಖ ರಾಜಕೀಯ ಹೋರಾಟಗಳು ಮತ್ತು ಪ್ರತಿಭಟನೆಗಳಲ್ಲಿ ಅವರ ಗೈರುಹಾಜರಿಯನ್ನೂ ಪಕ್ಷ ಪ್ರಶ್ನಿಸಿತ್ತು.
ಸೆ. 12ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ಎಸ್ಐಆರ್ಗೆ ಸಂಬಂಧಿಸಿದ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸೆ. 12ರವರೆಗೆ ಅವಕಾಶವಿದೆ. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 2026ರಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.
ರಾಜ್ಯಸಭಾ ಸದಸ್ಯತ್ವಕ್ಕೆ ಪರಿಣಾಮವಿಲ್ಲ
ಪಂಜಾಬ್ ಮತದಾರರ ಪಟ್ಟಿಯಿಂದ ಚಡ್ಡಾ ಅವರ ಹೆಸರು ಅಳಿಸಲಾಗಿರುವುದರಿಂದ ಅವರು ಪಂಜಾಬ್ನಿಂದ ರಾಜ್ಯಸಭಾ ಸದಸ್ಯರಾಗಿ ಮುಂದುವರಿಯುವ ಅರ್ಹತೆಗೆ ಯಾವುದೇ ಪರಿಣಾಮ ಬೀರುವುದಿಲ್ಲ. ರಾಜ್ಯಸಭಾ ಅಭ್ಯರ್ಥಿಯು ತಾವು ಪ್ರತಿನಿಧಿಸುವ ರಾಜ್ಯದಲ್ಲೇ ಮತದಾರರಾಗಿ ನೋಂದಾಯಿಸಿರಬೇಕು ಎಂಬ ನಿಯಮವನ್ನು 2003ರಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ತೆಗೆದುಹಾಕಲಾಗಿದೆ.