Fact Check | ನೇಪಾಳದಲ್ಲಿ ಹಿಂದೂಗಳ ಹತ್ಯೆ ಕುರಿತು ಪೋಸ್ಟ್‌ಕಾರ್ಡ್ ಕನ್ನಡದ ವೈರಲ್ ಪೋಸ್ಟ್ ಸುಳ್ಳು

Update: 2026-08-05 22:04 IST

Facebook | Postcard ಕನ್ನಡ


ಹೊಸದಿಲ್ಲಿ: ನೇಪಾಳದಲ್ಲಿ ಮುಸ್ಲಿಮರು ಹಿಂದೂಗಳನ್ನು ಹತ್ಯೆ ಮಾಡಲು ಆರಂಭಿಸಿದ್ದು, ಇಬ್ಬರು ಹಿಂದೂಗಳನ್ನು ಕೊಲ್ಲಲಾಗಿದೆ ಎಂದು ಪೋಸ್ಟ್‌ಕಾರ್ಡ್ ಕನ್ನಡ ಪ್ರಕಟಿಸಿರುವ ವೈರಲ್ ಸಾಮಾಜಿಕ ಜಾಲತಾಣದ ಪೋಸ್ಟ್ ಸುಳ್ಳು ಎಂದು ʼವಾರ್ತಾ ಭಾರತಿʼ ನಡೆಸಿದ ಫ್ಯಾಕ್ಟ್‌ ಚೆಕ್ ನಲ್ಲಿ ತಿಳಿದುಬಂದಿದೆ. ನೇಪಾಳವನ್ನು ಪುನಃ ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕು ಎಂಬ ಪೋಸ್ಟ್‌ ನಲ್ಲಿನ ಆಗ್ರಹಕ್ಕೂ ಯಾವುದೇ ಅಧಿಕೃತ ದಾಖಲೆಗಳಲ್ಲಿ ಅಥವಾ ವಿಶ್ವಾಸಾರ್ಹ ಸುದ್ದಿ ವರದಿಗಳಲ್ಲಿ ದೃಢೀಕರಣ ದೊರೆತಿಲ್ಲ.

ಫ್ಯಾಕ್ಟ್‌ ಚೆಕ್ ಪ್ರಕಾರ, ನೇಪಾಳದ ಸುನ್ಸಾರಿ ಜಿಲ್ಲೆಯಲ್ಲಿ ಕೋಮು ಉದ್ವಿಗ್ನತೆ ಮತ್ತು ಘರ್ಷಣೆ ನಡೆದಿರುವುದು ನಿಜ. ಆದರೆ, ಮುಸ್ಲಿಮರು ಹಿಂದೂಗಳನ್ನು ಹತ್ಯೆ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಲಭ್ಯವಾಗಿಲ್ಲ. ಬದಲಾಗಿ, ಹಿಂಸಾಚಾರವನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ದೃಢಪಟ್ಟ ಸಾವುಗಳು ಸಂಭವಿಸಿವೆ.

ಪೋಸ್ಟ್‌ಕಾರ್ಡ್ ಕನ್ನಡ ಪ್ರಕಟಿಸಿದ ವೈರಲ್ ಗ್ರಾಫಿಕ್‌ ನಲ್ಲಿ, "ನೇಪಾಳದಲ್ಲಿ ಮುಸ್ಲಿಮರು ಹಿಂದೂಗಳನ್ನು ಕೊಲ್ಲಲು ಆರಂಭಿಸಿದ್ದಾರೆ. ಇಬ್ಬರು ಹಿಂದೂಗಳನ್ನು ಕೊಲ್ಲಲಾಗಿದೆ. ಆದ್ದರಿಂದ ನೇಪಾಳವನ್ನು ಪುನಃ ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕು" ಎಂದು ಹೇಳಲಾಗಿದೆ. ಆದರೆ, ಈ ಹೇಳಿಕೆಗಳನ್ನು ಯಾವುದೇ ಅಧಿಕೃತ ದಾಖಲೆಗಳು ಅಥವಾ ವಿಶ್ವಾಸಾರ್ಹ ಸುದ್ದಿ ವರದಿಗಳು ದೃಢೀಕರಿಸುವುದಿಲ್ಲ ಎಂದು ಫ್ಯಾಕ್ಟ್‌ ಚೆಕ್ ತಿಳಿಸಿದೆ.

ರಾಯಿಟರ್ಸ್ ವರದಿ ಪ್ರಕಾರ, ಸುನ್ಸಾರಿ ಜಿಲ್ಲೆಯ ದೇವಾಂಗಂಜ್‌ ನಲ್ಲಿ ಹಿಂದೂ ಧಾರ್ಮಿಕ ಕಾರ್ಯಕ್ರಮದ ವೇಳೆ ಜೋರಾಗಿ ಸಂಗೀತ ಪ್ರಸಾರ ಮತ್ತು ಧಾರ್ಮಿಕ ಧ್ವಜಗಳ ಪ್ರದರ್ಶನಕ್ಕೆ ಸಂಬಂಧಿಸಿದ ವಿವಾದದಿಂದ ಕೋಮು ಉದ್ವಿಗ್ನತೆ ಉಂಟಾಯಿತು. ನಂತರ ಕಲ್ಲು ತೂರಾಟ ಹಾಗೂ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಲವು ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಗೊಳಿಸಿದರು.

ಹಿಂಸಾತ್ಮಕ ಗುಂಪನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದಾಗ ಇಬ್ಬರು ಮೃತಪಟ್ಟರು. ಬಳಿಕ ನೆರೆಯ ಸಿರಾಹಾ ಜಿಲ್ಲೆಯಲ್ಲಿ ನಡೆದ ಸಂಬಂಧಿತ ಅಶಾಂತಿಯ ವೇಳೆ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದರು. ಈ ಮೂರು ಮೃತ್ಯುಗಳು ಅಧಿಕೃತವಾಗಿ ದಾಖಲಾಗಿದ್ದು, ಅವು ಪೊಲೀಸ್ ಕ್ರಮದ ವೇಳೆ ಸಂಭವಿಸಿವೆ ಎಂದು ವರದಿಗಳು ತಿಳಿಸಿವೆ.

ನೇಪಾಳ ಪೊಲೀಸ್ ವಕ್ತಾರ ಅಬಿ ನಾರಾಯಣ್ ಕಫ್ಲೆ, ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಹಿಂಸಾಚಾರದ ಬಳಿಕ ಸರ್ಕಾರ ಪೀಡಿತ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಗೊಳಿಸಿದ್ದು, ಪೊಲೀಸ್ ಗುಂಡಿನ ದಾಳಿ ಕುರಿತು ತನಿಖೆ ಆರಂಭಿಸಿದೆ. ಮೃತರ ಕುಟುಂಬಗಳಿಗೆ ಪರಿಹಾರವನ್ನೂ ಘೋಷಿಸಿದೆ.

ಪೋಸ್ಟ್‌ಕಾರ್ಡ್ ಕನ್ನಡವು ಮಹೇಶ್ ವಿಕ್ರಮ್ ಹೆಗ್ಡೆ ಸ್ಥಾಪಿಸಿರುವ ಕನ್ನಡದ ಬಲಪಂಥೀಯ ಸುದ್ದಿ ಪೋರ್ಟಲ್ ಆಗಿದ್ದು, ಈ ಹಿಂದೆ ಹಲವು ಬಾರಿ ತಪ್ಪು ಮಾಹಿತಿ ಪ್ರಕಟಿಸಿರುವ ಆರೋಪಗಳನ್ನು ಎದುರಿಸಿದೆ ಎಂದು ಉಲ್ಲೇಖಿಸಲಾಗಿದೆ. ಈ ಪ್ರಕರಣದಲ್ಲಿಯೂ, ಅಧಿಕೃತ ದಾಖಲೆಗಳು ಅಥವಾ ವಿಶ್ವಾಸಾರ್ಹ ಸುದ್ದಿ ವರದಿಗಳಿಂದ ದೃಢೀಕರಿಸದ ಹೇಳಿಕೆಯನ್ನು ಪೋಸ್ಟ್‌ಕಾರ್ಡ್ ಕನ್ನಡ ಪ್ರಕಟಿಸಿದೆ ಎಂದು ʼವಾರ್ತಾ ಭಾರತಿʼ ಮಾಡಿರುವ ಫ್ಯಾಕ್ಟ್ ಚೆಕ್ ವೇಳೆ ತಿಳಿದು ಬಂದಿದೆ.

ಸುನ್ಸಾರಿ ಜಿಲ್ಲೆಯಲ್ಲಿ ಕೋಮು ಘರ್ಷಣೆಗಳು ನಡೆದಿರುವುದು ನಿಜ. ಆದರೆ, ಮುಸ್ಲಿಮರು ಹಿಂದೂಗಳನ್ನು ಹತ್ಯೆ ಮಾಡಿದ್ದಾರೆ ಅಥವಾ ಹೆಚ್ಚಿನ ಸಂಖ್ಯೆಯ ಹಿಂದೂಗಳನ್ನು ಕೊಂದಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ದೃಢಪಟ್ಟಿರುವ ಸಾವುಗಳು ಪೊಲೀಸ್ ಗುಂಡಿನ ದಾಳಿಗೆ ಸಂಬಂಧಿಸಿವೆ. ಆದ್ದರಿಂದ, ವೈರಲ್ ಪೋಸ್ಟ್ ಸಾವುಗಳ ಕಾರಣ ಮತ್ತು ಹಿಂಸಾಚಾರದ ಸ್ವರೂಪವನ್ನು ತಪ್ಪಾಗಿ ಪ್ರತಿನಿಧಿಸುವ ತಪ್ಪು ಮಾಹಿತಿಯಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News