ರಾಜಕಾರಣ ಎನ್ನುವ ಸಂಭವನೀಯ ಕಲೆ ಮತ್ತು ಉತ್ಪಾದಿತ ಸಮ್ಮತಿ

ರಾಜಕೀಯ ತಜ್ಞರು ಹೇಳಿದಂತೆ ಜನತೆಯಿಂದ, ಜನ ಸಾಮಾನ್ಯರ ಸರಕಾರ ಎನ್ನುವ ಪ್ರಜಾಪ್ರಭುತ್ವದ ಮೂಲ ಆಶಯವು ಬದಲುಗೊಂಡು ಜನತೆಗಾಗಿ ಸರಕಾರ ಎಂಬುದು ಪ್ರತಿಯೊಬ್ಬರು ಒಪ್ಪಿತ ಮಿಥ್ಯೆಯಾಗಿದೆ. ನಾವೆಲ್ಲ ನಂಬಿಕೆಯಿಟ್ಟಿದ್ದ ನ್ಯಾಯಾಂಗವೂ ಈ ಪ್ರಕ್ರಿಯೆಯಲ್ಲಿ ನಿರಂಕುಶ ಪ್ರಭುತ್ವದ ದಾಳಿಗೆ ಶರಣಾಗಿಬಿಟ್ಟಿದೆ ಎನ್ನುವ ವರದಿಗಳು ಕಳವಳಕಾರಿಯಾಗಿದೆ. ಜನಪ್ರಿಯ ನಾಯಕನೊಬ್ಬ ಚುನಾವಣಾ ಕಣದಾಚೆಗೂ ತಾನು ಜನರ ನಿಜದ ಪ್ರತಿನಿಧಿ ಎಂದು ಘೋಷಿಸಿದಾಗ ಆತ ಧ್ವಂಸಗೊಳಿಸುವ ಶಕ್ತಿಕೇಂದ್ರವನ್ನು ಹುಟ್ಟು ಹಾಕುತ್ತಿದ್ದಾನೆ ಎಂದೇ ಅರ್ಥ. ಈ ಜನಪ್ರಿಯತೆಯು ಮೋದಿ ಮಾದರಿಯ ನಾಯಕರಿಗೆ ಕ್ಷಿಪ್ರ ಗತಿಯಲ್ಲಿ ಅಧಿಕಾರವನ್ನು ಕಬ್ಜ ಮಾಡಿಕೊಳ್ಳಲು ಕಾರಣವಾಗುತ್ತದೆ.

Update: 2023-11-29 05:20 GMT

ಪ್ರೊ. ಪ್ರದೀಪ್ ಚಿಬ್ಬರ್ ಮತ್ತು ಪ್ರೊ. ನಸೀಮುಲ್ಲ ಅವರು ಈ ನಿರಂಕುಶ ಪ್ರಭುತ್ವದ ಕುರಿತು ಫಿಲಿಪ್ಫೀನ್ಸ್ ನ ರೋಡ್ರಿಗೋ ಡುಟೆರ್ಟೆ, ಟರ್ಕಿಯ ಎರ್ದೊಗಾನ್, ಹಂಗೆರಿಯ ವಿಕ್ಟೋರ್ ಒರ್ಬನ್, ಯುಎಸ್ಎಯ ಟ್ರಂಪ್, ಭಾರತದ ಮೋದಿಯಂತಹ ಬಲಪಂಥೀಯ ನಾಯಕರು ಜನಪ್ರಿಯತೆ ಮತ್ತು ತಮ್ಮ ವ್ಯಕ್ತಿತ್ವದ ಮೂಲಕ ಚುನಾವಣೆಯನ್ನು ಗೆಲ್ಲುತ್ತಿದ್ದಾರೆ. ಒಂದು ಕಾಲದಲ್ಲಿ ತಮ್ಮದು ಎಂತಹ ಅಸಾಧಾರಣ ದೇಶವಾಗಿತ್ತು ಎನ್ನುವ ಕಥನವನ್ನು ಮುಂದಿಡುವ ಈ ‘ಆತಂಕಗೊಳಿಸುವ ಜನಪ್ರಿಯ ನಾಯಕರು’ (Apprehensive populists) ತಮ್ಮ ವಾಕ್ಚಾತುರ್ಯದ ಮೂಲಕ ಭೀತಿ ಮತ್ತು ಹಾನಿಗೆ ಒತ್ತು ಕೊಡುತ್ತಾರೆ. ಅಲ್ಪಸಂಖ್ಯಾತರು, ವಲಸೆಗಾರರು ಮತ್ತು ಇಲ್ಲಿನ ಮೂಲ ನಿವಾಸಿಗಳು ಇವರೆಲ್ಲರಿಂದ ತಮ್ಮ ದೇಶದ ಹಿಂದಿನ ಹೆಗ್ಗಳಿಕೆಗೆ ಭಂಗ ಬಂದಿದೆ ಎಂದು ಭೀತಿ ಹುಟ್ಟಿಸುತ್ತಾರೆ. ಟ್ರಂಪ್ ಮತ್ತು ಒರ್ಬನ್ರಂತಹವರು ತಮ್ಮ ದೇಶದ ಗಡಿಗಳನ್ನು ಮುಕ್ತಗೊಳಿಸಿದರೆ ದೇಶವು ಅಪಾರವಾದ ಹಾನಿಗೆ ಒಳಗಾಗಬೇಕಾಗುತ್ತದೆ, ಸಾಂಪ್ರದಾಯಿಕ ಸಂಸ್ಕೃತಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಅಥವಾ ಹಿಂದಿನ ಶ್ರೇಣೀಕರಣವನ್ನು ಮರಳಿ ಸ್ಥಾಪಿಸಲು ಸಾಧ್ಯವಾಗುವುದಿಲ್ಲ. ಗಡಿಯಾರದ ಮುಳ್ಳನ್ನು ಹಿಂದಕ್ಕೆ ತಿರುಗಿಸುವುದರ ಮೂಲಕ ತಮ್ಮ ದೇಶವನ್ನು ಮತ್ತೆ ಅಪ್ರತಿಮಗೊಳಿಸುವ ಯೋಜನೆಗಳನ್ನು ಪ್ರಾರಂಭಿಸಬೇಕು ಎನ್ನುವ ಸಂದೇಶ ಕೊಡುತ್ತಾರೆ. ಈ ‘ಮಹತ್ವಾಕಾಂಕ್ಷೆ ಜನಪ್ರಿಯ ನಾಯಕರು’ ದೇಶದ ಉಜ್ವಲ ಭವಿಷ್ಯಕ್ಕಾಗಿ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ಹೇಳುತ್ತಾರೆ. ಇವರ ಪ್ರಕಾರ ದೇಶವು ಒಂದೇ, ಏಕರೂಪಿ ಸಮುದಾಯವನ್ನು ಒಳಗೊಂಡಿರಬೇಕು ಮತ್ತು ತಮ್ಮನ್ನು ಅನುಸರಿಸಿದರೆ ಮಾತ್ರ ದೇಶಕ್ಕೆ ಉತ್ತಮ ಭವಿಷ್ಯವಿದೆ ಎಂದು ಸಂದೇಶ ಕೊಡುತ್ತಾರೆ. ಈ ಮಾದರಿಯ ಮಹತ್ವಾಕಾಂಕ್ಷೆ ರಾಜಕಾರಣವು ಮೋದಿಯವರ ಆದ್ಯತೆ, ಯೋಜನೆಯಾಗಿದೆ. ಮೋದಿ ‘‘ಏಕರೂಪಿ, ಒಂದೇ ಭಾರತದ ಏಳಿಗೆಗಾಗಿ ಎಲ್ಲಾ ಭಾರತೀಯರು ಒಂದಾಗಿ ಕೆಲಸ ಮಾಡಬೇಕು ಮತ್ತು ಇದು ತಮ್ಮ ಸರಕಾರದ ಏಕೈಕ ಗುರಿಯಾಗಿದೆ’’ ಎಂದೇ ಪದೇ ಪದೇ ಹೇಳುತ್ತಿರುತ್ತಾರೆ. ಇದನ್ನು ಮುಂದುವರಿಸಿ ಹೇಳುವುದಾದರೆ ಮೋದಿಯವರ ‘ಒಂದು ದೇಶ ಒಂದು ಚುನಾವಣೆ, ಒಂದು ದೇಶ ಒಂದು ಭಾಷೆ, ಒಂದು ದೇಶ ಒಂದು ಸಂಸ್ಕೃತಿ’ ಮುಂತಾದ ಹೇಳಿಕೆಗಳು ಭವಿಷ್ಯದಲ್ಲಿ ಚಾತುರ್ವರ್ಣ ವ್ಯವಸ್ಥೆಯನ್ನು ಜಾರಿಗೊಳಿಸಲು ಬರೆದ ಮುನ್ನುಡಿಯಂತಿವೆ. ಇಲ್ಲಿ ಆರೆಸ್ಸೆಸ್ ಮೋದಿಯವರೊಂದಿಗೆ ಕೈ ಜೋಡಿಸಿರುವುದರಿಂದ ಇದರ ಪರಿಣಾಮವು ಟರ್ಕಿ, ಹಂಗೇರಿ ಮುಂತಾದ ದೇಶಗಳಿಗಿಂತ ಹೆಚ್ಚು ಆತಂಕಕಾರಿಯಾಗಿದೆ.

ಮಹತ್ವಾಕಾಂಕ್ಷಿ ಜನಪ್ರಿಯ ನಾಯಕರಾದ ನರೇಂದ್ರ ಮೋದಿಯವರ ಆಡಳಿತದಲ್ಲಿ ಮೇಲಿನ ಭೀತಿಗೆ ಒತ್ತು ಕೊಟ್ಟು ಅಧಿಕಾರ ಬಲಪಡಿಸಿಕೊಳ್ಳುವ ‘ಆತಂಕಗೊಳಿಸುವ ಜನಪ್ರಿಯ ನಾಯಕರ’ ಅಂಶಗಳಿವೆ. ಕಳೆದ ಒಂಭತ್ತು ವರ್ಷಗಳಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರವು ಮುಸ್ಲಿಮ್ ಸಮುದಾಯವನ್ನು ಕೇಂದ್ರವಾಗಿಟ್ಟುಕೊಂಡು ಅವರಿಂದ ದೇಶದ ಭದ್ರತೆಗೆ ಧಕ್ಕೆ ಇದೆ ಎನ್ನುವ ಭೀತಿ ಸೃಷ್ಟಿಸಿ ತ್ರಿವಳಿ ವಿಚ್ಛೇದನ ಮಸೂದೆ, ಕಾನೂನುಬಾಹಿರ ಚಟುವಟಿಕೆ (ನಿಗ್ರಹ) ಮಸೂದೆಗಳಾದ ಯುಎಪಿಎ (ತಿದ್ದುಪಡಿ), ಸಿಎಎ ಮಸೂದೆಗಳಿಗೆ ತಮಗಿರುವ ದೈತ್ಯ ಸದೃಶ್ಯ ಬಹುಮತದ ಮೂಲಕ ಸಂಸತ್ತಿನಲ್ಲಿ ಅನುಮೋದನೆ ಪಡೆದುಕೊಂಡುಬಿಟ್ಟರು. ರಾಷ್ಟ್ರೀಯ ನಾಗರಿಕರ ನೋಂದಣಿ ಮಸೂದೆ (ಎನ್ಆರ್ಎ)ಯ ಮೂಲಕ ಇಲ್ಲಿನ ಮುಸ್ಲಿಮರು ಯಾವತ್ತಿಗೂ ಹೊರಗಿನವರು ಅವರಿಗೆ ಇಲ್ಲಿ ಸ್ಥಳವಿಲ್ಲ ಎನ್ನುವ ಶಾಸನವನ್ನು ಜಾರಿಗೊಳಿಸಿದರು. ೨೦೨೪ರ ಚುನಾವಣೆ ಹತ್ತಿರವಾಗುತ್ತಿರುವಂತೆ ಮರಳಿ ಸಿಎಎ ವಿವಾದಕ್ಕೆ ಜೀವ ತುಂಬಿ ‘‘ಮಾರ್ಚ್ ೨೦೨೪ರ ಒಳಗೆ ಸಿಎಎ ಕಾಯ್ದೆಗೆ ಕಾನೂನು ಚೌಕಟ್ಟು ಪೂರ್ಣಗೊಳಿಸಲಾಗುವುದು’’ ಎಂದು ಕೇಂದ್ರದ ಗೃಹ ಖಾತೆಯ ರಾಜ್ಯ ಮಂತ್ರಿ ಅಜಯ ಕುಮಾರ್ ಮಿಶ್ರಾ ಹೇಳುತ್ತಿದ್ದಾರೆ. ಅಂದರೆ ಇವರ ಮೂಲಕ ಗೃಹ ಮಂತ್ರಿ ಅಮಿತ್ ಶಾ ಮತ್ತು ಮೋದಿ ಹಾಗೂ ಇವರ ಮೂಲಕ ಆರೆಸ್ಸೆಸ್ ಮಾತನಾಡುತ್ತಿದ್ದಾರೆ. ೨೨, ಜನವರಿ ೨೦೨೪ರಂದು ವಿವಾದಿತ ರಾಮ ಮಂದಿರದ ಉದ್ಘಾಟನೆ ಇದೆ. ನಂತರ ಸಿಎಎ ಹೀಗೆ ನಿರಂತರವಾಗಿ ಮುಸ್ಲಿಮ್ ವಿರೋಧಿ ಭಾವನೆ ಪ್ರಚೋದಿಸುವಂತಹ ಯೋಜನೆಗಳಿವೆ. ಇದೆಲ್ಲವೂ ‘ಜನಪ್ರಿಯತೆ, ಮಹತ್ವಾಕಾಂಕ್ಷೆ’ಯ ಮುಖವಾಡದಲ್ಲಿ ಭೀತಿ ಹುಟ್ಟಿಸುವ ಕಾರ್ಯ ತಂತ್ರಗಳಾಗಿವೆ.

ಕಳೆದ ಎಪ್ಪತ್ತು ವರ್ಷಗಳಲ್ಲಿ ಕಾಶ್ಮೀರದಲ್ಲಿನ ಅನಿಶ್ಚಿತತೆ, ಭಯೋತ್ಪಾದನೆ, ಗಲಭೆಗಳಿಂದ ಸಂಪೂರ್ಣ ಹತಾಶರಾಗಿದ್ದ ಬಹುಸಂಖ್ಯಾತರ ಟೊಳ್ಳು ದೇಶಪ್ರೇಮವನ್ನು ಬಳಸಿಕೊಂಡು ಕಾಶ್ಮೀರಕ್ಕೆ ಸ್ವಾಯತ್ತತೆ ಕೊಡುವ ೩೭೦ ಕಲಮನ್ನು ರದ್ದುಗೊಳಿಸಿದರು ಮತ್ತು ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನೇ ಕಿತ್ತುಕೊಳ್ಳಲಾಯಿತು. ಇದನ್ನೂ ಭೀತಿ ಹುಟ್ಟಿಸಿ, ಆಂತಕ ಸೃಷ್ಟಿಸುವುದರ ಮೂಲಕ ಸಾಧಿಸಿಕೊಳ್ಳಲಾಯಿತು. ಮಣಿಪುರದಲ್ಲಿ ಕಳೆದ ಮೂರು ತಿಂಗಳಿಂದ ಜನಾಂಗೀಯ ಗಲಭೆಗಳು, ವ್ಯವಸ್ಥಿತ ಹತ್ಯಾಕಾಂಡಗಳು ನಡೆಯುತ್ತಿದ್ದರೂ ಸಂಘ ಪರಿವಾರವು ಮೂಲ ನಿವಾಸಿಗಳಾದ ಕುಕಿ ಆದಿವಾಸಿ ಸಮುದಾಯವನ್ನು ಹೊರಗಿನವರು ಮತ್ತು ನುಸುಳುಕೋರರು, ಇವರಿಂದ ಆಗುತ್ತಿರುವ ಸಂಘರ್ಷ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಈ ಭೀತಿಯನ್ನು ನಿರಂತರವಾಗಿ ಜೀವಂತವಾಗಿಡಲು ಅಫ್ಸಾ ಕಾಯ್ದೆಯನ್ನು (ಸಶಸ್ತ್ರ ಪಡೆಗಳಿಗೆ ಪರಮಾಧಿಕಾರವನ್ನು ಕೊಡುವ ಕರಾಳ ಕಾಯ್ದೆ) ಪ್ರಯೋಗಿಸಲು ಅಗತ್ಯವಾದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಬ್ರಿಟಿಷರ ಕಾಲದ ವಸಾಹುತುಶಾಹಿ ಕಾನೂನುಗಳೆಂದು ೧೫೦ ವರ್ಷಗಳಷ್ಟು ಹಳೆಯದಾದ ‘ರಾಜದ್ರೋಹ ಕಾಯ್ದೆಗಳನ್ನು’ ಸಂಪೂರ್ಣವಾಗಿ ಬದಲಾಯಿಸಿದ್ದೇವೆ ಎಂದು ಹೇಳುತ್ತಲೇ ಅದರ ಹಿಂದಿ ಅವತರಣಿಕೆಯಂತಿರುವ ‘ಭಾರತೀಯ ನ್ಯಾಯ ಸಂಹಿತೆ ಮಸೂದೆ’ಗಳನ್ನು ಜಾರಿಗೊಳಿಸಲು ಮುಂದಾಗಿದ್ದಾರೆ. ಇದು ಸಹ ಜನರಲ್ಲಿ ಭೀತಿಯ ಭಾವನೆಯನ್ನು ಹುಟ್ಟಿಸುವ, ಆ ಮೂಲಕ ಕರಾಳ ಶಾಸನವನ್ನು ಮಾನವ ಹಕ್ಕುಗಳ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರ ಮೇಲೆ ಪ್ರಯೋಗಿಸುವ ತಂತ್ರಗಾರಿಕೆ. ಇದೇ ಸಂದರ್ಭದಲ್ಲಿ ಮೋದಿಯವರು ‘ಸಂವಿಧಾನಬದ್ಧ ಹಕ್ಕುಗಳಲ್ಲ, ಬದಲಿಗೆ ಕರ್ತವ್ಯಗಳು’ ಎನ್ನುವ ಪ್ರತಿಗಾಮಿ ಕಥನ ಸೃಷ್ಟಿಸುತ್ತಾರೆ.

ಆದರೆ ವಿರೋಧ ಪಕ್ಷಗಳ ನಿಷ್ಕ್ರಿಯತೆ, ಗೊಂದಲಗಳು, ಸ್ವಾರ್ಥ ಮತ್ತು ಬಹುಪಾಲು ಮಾಧ್ಯಮಗಳ ಗುಲಾಮಗಿರಿಯು ಮೋದಿ-ಶಾ ಜೋಡಿಯ ಸುಗಮ ಹಾದಿಗೆ ಕಾರಣವಾಗಿದ್ದು ವಾಸ್ತವ. ಈ ಅನಿಶ್ಚಿತತೆ ಮತ್ತು ನಿರ್ವಾತ ಪರಿಸ್ಥಿತಿಯನ್ನು ಬಳಸಿಕೊಂಡು ಮೋದಿ-ಶಾ-ಆರೆಸ್ಸೆಸ್ನಂತಹ ‘ಮಹತ್ವಾಕಾಂಕ್ಷಿ ಜನಪ್ರಿಯ ನಾಯಕರು’ ದೇಶದ ಭವಿಷ್ಯ ನಮ್ಮ ಕೈಯಲ್ಲಿದೆ ಎಂದು ಬಹುಸಂಖ್ಯಾತರಿಗೆ ನಂಬಿಕೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ಸಂದರ್ಭದಲ್ಲಿ ಇಲ್ಲಿನ ಮುಸ್ಲಿಮ್ ಮತ್ತು ತಳ ಸಮುದಾಯಗಳಿಂದ ಈ ಭವಿಷ್ಯಕ್ಕೆ ಅಪಾಯವಿದೆ ಎಂದು ಅಪಪ್ರಚಾರದ ಮೂಲಕ ಈ ಸಮುದಾಯಗಳ ಭವಿಷ್ಯಕ್ಕೆ ಬಲು ದೊಡ್ಡ ಬೆದರಿಕೆಯಾಗುವಂತಹ ರಾಜಕೀಯ-ಸಾಂಸ್ಕೃತಿಕ ವಾತಾವರಣ ನಿರ್ಮಿಸುತ್ತಿದ್ದಾರೆ. ಆಡಳಿತ ನಡೆಸುವ ನಾಯಕರೇ ತಮಗೆ ಬೆದರಿಕೆ ಒಡ್ಡುತ್ತಿದ್ದಾರೆ ಎನ್ನುವ ಸಂಗತಿ ಮುಸ್ಲಿಮ್ ಸಮುದಾಯವನ್ನು ಆತಂಕಕ್ಕೀಡು ಮಾಡಿದೆ. ತಳ ಸಮುದಾಯಗಳಿಗೆ ಈ ‘ಮಹತ್ವಾಕಾಂಕ್ಷಿ ನಾಯಕರು’ ಕಲ್ಯಾಣ ಯೋಜನೆಗಳ ಮರೀಚಿಕೆಯನ್ನು ತೋರಿಸಿ ಹಾದಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇಲ್ಲಿನ ವಂಚಿತ ಸಮುದಾಯಗಳಿಗೆ ಈ ಮರೆಮೋಸ ಗೊತ್ತಿದೆ. ಆದರೆ ಜಾತಿ ವ್ಯವಸ್ಥೆಯ ಫ್ಯಾಶಿಸಂನಿಂದ ಅಸಹಾಯಕರಾಗಿದ್ದಾರೆ. ದುರ್ಬಲರಾಗಿರುವ ತಮಗೆ ಏಕಕಾಲಕ್ಕೆ ಪ್ರಭುತ್ವ ಮತ್ತು ವ್ಯವಸ್ಥೆ ಫ್ಯಾಶಿಸಂನ್ನು ಎದುರಿಸುವ ಶಕ್ತಿ ಇಲ್ಲ ಎಂಬ ತಿಳುವಳಿಕೆ ಇದೆ. ಈ ಅನಾಥಪ್ರಜ್ಞೆಯನ್ನು ಮೋದಿ-ಆರೆಸ್ಸೆಸ್ ತಮ್ಮ ‘ಭೀತಿ ಹುಟ್ಟಿಸಿ ಬೆಳೆ ತೆಗೆಯುವ’ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇಲ್ಲಿ ಮೋದಿ ತಮಗೆ ದೇಶದ ಅಭಿವೃದ್ಧಿ ಎಂಬುದೇ ಗುರಿ, ಇದಕ್ಕಾಗಿ ಎಲ್ಲರನ್ನು ಜೊತೆಗೆ ಕೊಂಡೊಯ್ಯುತ್ತೇನೆ ಎಂದು ಹೇಳುತ್ತಿರುತ್ತಾರೆ, ಆದರೆ ಈ ಅಭಿವೃದ್ಧಿಗೆ ಸಹಕಾರಿಯಾಗುವಂತಹ ಯಾವುದೇ ಯೋಜನೆ, ಚಿಂತನೆಗಳನ್ನು ಪ್ರೋತ್ಸಾಹಿಸುವುದಿಲ್ಲ, ಮೋದಿಯಂತಹ ‘ಮಹತ್ವಾಕಾಂಕ್ಷಿ ನಾಯಕರು’ ಎಂದಿಗೂ ಬಹುತ್ವವನ್ನು ಮಾನ್ಯ ಮಾಡುವುದಿಲ್ಲ. ಇದೇ ಸಂದರ್ಭದಲ್ಲಿ ವಿರೋಧ ಪಕ್ಷಗಳು ವೋಟು ಕಳೆದುಕೊಳ್ಳುವ ಭೀತಿಯಿಂದ ಮುಸ್ಲಿಮರನ್ನು ಬೆಂಬಲಿಸುವುದಿಲ್ಲ, ಮೃದು ಹಿಂದುತ್ವವನ್ನು ಅನುಸರಿಸುತ್ತಾರೆ. ಮಧ್ಯಪ್ರದೇಶದ ಕಾಂಗ್ರೆಸ್ ಪಕ್ಷದ ನೀತಿಗಳು ಇದಕ್ಕೆ ಸಾಕ್ಷಿ.

ಪ್ರೊ. ಫೆಡ್ರಿಕೋ ಫಿಂಚೆಲ್ಸಸ್ಟೇನ್ ಅವರು ‘‘ದಶಕಗಳಿಂದ ಈ ಮಹತ್ವಾಕಾಂಕ್ಷೆ ಜನಪ್ರಿಯ ನಾಯಕರು ಉತ್ಕಟತೆಯಿಂದ ಇತಿಹಾಸದ ದಾಖಲೆಗಳನ್ನು ನಾಶ ಮಾಡುತ್ತಾರೆ, ಉದಾಹರಣೆಗೆ ನಾಝಿ ಇತಿಹಾಸವನ್ನು ನಾಶಗೊಳಿಸುವುದು ಈ ಮಹತ್ವಾಕಾಂಕ್ಷೆ ಬ್ರ್ಯಾಂಡ್ ಆಗಿದೆ. ಇಸ್ರೇಲ್ ಮತ್ತು ಇತರ ಭಾಗಗಳಲ್ಲಿನ ಸರ್ವಾಧಿಕಾರಿ, xenophobic ರಾಷ್ಟ್ರಗಳೊಂದಿಗೆ ಗುರುತಿಸಿಕೊಂಡಿರುವ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ತನ್ನ ರಾಜಕೀಯ ಹಿತಾಸಕ್ತಿಗೆ ಪೂರಕವಾಗುವಂತೆ ಆ ನರಮೇಧದ ಇತಿಹಾಸವನ್ನು ಕುರೂಪಗೊಳಿಸಿದ್ದಾರೆ. ಯುರೋಪ್ನ ಜ್ಯೂಗಳ ಹತ್ಯಾಕಾಂಡದಲ್ಲಿ ಆ ಕಾಲದಲ್ಲಿನ ಫೆಲೆಸ್ತೀನ್ ನಾಯಕ ಮುಫ್ತಿಯವರ ನಾಝಿ ಪರವಾದ ಒಲವು ಸಹ ಕಾರಣವಾಗಿದೆ ಎಂದು ಸುಳ್ಳುಗಳನ್ನು ತೇಲಿಬಿಡುತ್ತಿದ್ದಾರೆ. ನೆತನ್ಯಾಹು ಅನುಸಾರ ಹಿಟ್ಲರ್ ಈ ಮುಫ್ತಿಯವರನ್ನು ‘ನಾನು ಅವರನ್ನು (ಜ್ಯೂಗಳನ್ನು) ಏನು ಮಾಡಲಿ?’ ಎಂದು ಕೇಳಿದ, ಮುಫ್ತಿ ‘ಅವರನ್ನು ಸುಟ್ಟುಬಿಡಿ’ ಎಂದು ಉತ್ತರಿಸಿದ. ಆದರೆ ಈ ಮಾದರಿಯ ಸಂಭಾಷಣೆ ನಡೆದಿರುವುದಕ್ಕೆ ಇತಿಹಾಸದಲ್ಲಿ ಎಲ್ಲಿಯೂ ದಾಖಲೆಗಳಿಲ್ಲ’’ ಎಂದು ಹೇಳುತ್ತಾರೆ. ಆದರೆ ಇದೇ ನೆತನ್ಯಾಹು ಝಿಯೋನಿಸಂನ ದಮನಕಾರಿ ನೀತಿಯ ಮೂಲಕ ಫೆಲೆಸ್ತೀನ್ ಮೇಲೆ ದಾಳಿ ಮಾಡುತ್ತಿದ್ದಾರೆ, ನರಮೇಧ ನಡೆಸುತ್ತಿದ್ದಾರೆ.

ಒಂದು ಕಾಲದ ಬಲಿಪಶು ಮತ್ತೊಂದು ಕಾಲದ ಶೋಷಕರು ಎನ್ನುವ ನೀತಿಗೆ ಉದಾಹರಣೆ ಇಸ್ರೇಲ್ನ ಈ ಝಿಯೋನಿಸಂ. ಫ್ಯಾಶಿಸಂನ ಎಲ್ಲಾ ಕ್ರೌರ್ಯವನ್ನು ಮೈಗೂಡಿಸಿಕೊಂಡ ಮತ್ತು ಅದನ್ನೇ ಮುಂದುವರಿಸುತ್ತಿರುವ ಈ ‘ಮಹತ್ವ್ವಾಕಾಂಕ್ಷಿ ಜನಪ್ರಿಯ ನಾಯಕರು’ ಬಹಿರಂಗವಾಗಿ ಮಾತ್ರ ಅದೇ ಫ್ಯಾಶಿಸಂ ಇತಿಹಾಸವನ್ನು ನಿರ್ಜೀವಗೊಳಿಸಿ ತಮ್ಮ ರಾಜಕೀಯ ನೆಲೆಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆ. ಈ ನೆತನ್ಯಾಹು ಅವರ ಅಪ್ತ ಸ್ನೇಹಿತರಾದ ನರೇಂದ್ರ ಮೋದಿ ಸಹ ಇದೇ ತಂತ್ರವನ್ನು ಅನುಸರಿಸುತ್ತಿದ್ದಾರೆ. ನೆಹರೂ ಅವರ ವ್ಯಕ್ತಿತ್ವವನ್ನು ತೇಜೋವಧೆಗೊಳಿಸುವ ಸುಳ್ಳುಗಳನ್ನು ಬಿತ್ತುತ್ತಾ ಇತಿಹಾಸವನ್ನು ವಿರೂಪಗೊಳಿಸುತ್ತಿರುವ ಮೋದಿ ಆ ಮೂಲಕ ಪ್ರಸಕ್ತ ಸಂದರ್ಭದ ರಾಜಕೀಯ ಫಸಲನ್ನು ಕುಯ್ಲು ಮಾಡಿಕೊಳ್ಳುತ್ತಿದ್ದಾರೆ. ಸ್ವತಃ ನಿರಂಕುಶ ಪ್ರಭುತ್ವದ ಆಡಳಿತ ನಡೆಸುತ್ತಿರುವ ಮೋದಿ ಇತಿಹಾಸದಲ್ಲಿ ಇಂದಿರಾಗಾಂಧಿ ಸರ್ವಾಧಿಕಾರಿಯಾಗಿದ್ದರು ತಾನು ಮತ್ತೆ ಆ ಸರ್ವಾಧಿಕಾರದ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಿ ಪ್ರಜಾಪ್ರಭುತ್ವವನ್ನು ಮರಳಿ ಸ್ಥಾಪಿಸುತ್ತಿದ್ದೇನೆ ಎಂದು ಜನರನ್ನು ನಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಕೀಯ ತಜ್ಞರು ಹೇಳಿದಂತೆ ಜನತೆಯಿಂದ, ಜನ ಸಾಮಾನ್ಯರ ಸರಕಾರ ಎನ್ನುವ ಪ್ರಜಾಪ್ರಭುತ್ವದ ಮೂಲ ಆಶಯವು ಬದಲುಗೊಂಡು ಜನತೆಗಾಗಿ ಸರಕಾರ ಎಂಬುದು ಪ್ರತಿಯೊಬ್ಬರು ಒಪ್ಪಿತ ಮಿಥ್ಯೆಯಾಗಿದೆ. ನಾವೆಲ್ಲ ನಂಬಿಕೆಯಿಟ್ಟಿದ್ದ ನ್ಯಾಯಾಂಗವೂ ಈ ಪ್ರಕ್ರಿಯೆಯಲ್ಲಿ ನಿರಂಕುಶ ಪ್ರಭುತ್ವದ ದಾಳಿಗೆ ಶರಣಾಗಿಬಿಟ್ಟಿದೆ ಎನ್ನುವ ವರದಿಗಳು ಕಳವಳಕಾರಿಯಾಗಿದೆ. ಜನಪ್ರಿಯ ನಾಯಕನೊಬ್ಬ ಚುನಾವಣಾ ಕಣದಾಚೆಗೂ ತಾನು ಜನರ ನಿಜದ ಪ್ರತಿನಿಧಿ ಎಂದು ಘೋಷಿಸಿದಾಗ ಆತ ಧ್ವಂಸಗೊಳಿಸುವ ಶಕ್ತಿಕೇಂದ್ರವನ್ನು ಹುಟ್ಟು ಹಾಕುತ್ತಿದ್ದಾನೆ ಎಂದೇ ಅರ್ಥ. ಈ ಜನಪ್ರಿಯತೆಯು ಮೋದಿ ಮಾದರಿಯ ನಾಯಕರಿಗೆ ಕ್ಷಿಪ್ರ ಗತಿಯಲ್ಲಿ ಅಧಿಕಾರವನ್ನು ಕಬ್ಜ ಮಾಡಿಕೊಳ್ಳಲು ಕಾರಣವಾಗುತ್ತದೆ.

ಉತ್ಪಾದಿತ ಸಮ್ಮತಿಯು ದೇಶದೆಲ್ಲೆಡೆ ಮಾನಸಿಕ ವ್ಯಾಧಿಯಂತೆ ವ್ಯಾಪಿಸಿಕೊಂಡಿರುವಂತಹ ಇಂದಿನ ಬಿಕ್ಕಟ್ಟಿನ ಕಾಲದಲ್ಲಿ ೨೦೧೧ರ ಮಧ್ಯಮವರ್ಗಗಳ ಆ ಹುಸಿ, ಸ್ವಾರ್ಥದ ಪ್ರತಿಭಟನೆ ಮೋದಿ-ಆರೆಸ್ಸೆಸ್ನ ನಿರಂಕುಶ ಮತೀಯ ಆಡಳಿತದ ವಿರುದ್ಧದ ಇಂದಿನ ಚಳವಳಿಗೆ ಯಾವುದೇ ಬಗೆಯಲ್ಲಿ ಸ್ಫೂರ್ತಿಯನ್ನು ತುಂಬಲು ಸಾಧ್ಯವಿಲ್ಲ. ತಾನು ಸರ್ವಾಧಿಕಾರಿ ವ್ಯವಸ್ಥೆಗೆ ವೇದಿಕೆ ಕಲ್ಪಿಸುತ್ತಿದ್ದೇನೆ ಎಂಬುದನ್ನು ನಿರ್ಲಕ್ಷ್ಯ ಮಾಡಿದ ಅಥವಾ ಗೊತ್ತಿದ್ದೂ ಜಾಣ ಕುರುಡರಂತೆ ವರ್ತಿಸಿದ ಐಎಸಿ ಪ್ರತಿಭಟನೆ ಇಂದು ಭಾರತದ ಪ್ರಜಾಪ್ರಭುತ್ವ ಘಾಸಿಗೊಂಡು ನರಳುವಿಕೆಗೆ ಕಾರಣವಾಗಿದೆ.



ವಂಚಿತ ಹಿನ್ನ್ನೆಲೆಯ ನಾಗರಿಕ ಚಳವಳಿಗಳು

ಮೋದಿ ಈ ದೇಶದ ರಕ್ಷಕರು ಎಂದು ನಂಬಿರುವ ಬಹುಸಂಖ್ಯಾತ ಭಾರತೀಯರ ನಂಬಿಕೆಯನ್ನು ಯಾವ ರೀತಿ ಪರಿವರ್ತನೆಗೊಳಿಸಬೇಕು ಎಂಬುದು ಇಲ್ಲಿನ ಪ್ರಜ್ಞಾವಂತರಿಗೆ ಬಲು ದೊಡ್ಡ ಸವಾಲಾಗಿದೆ. ಮೋದಿ-ಆರೆಸ್ಸೆಸ್ ಬಿತ್ತುತ್ತಿರುವ ಈ ಉತ್ಪಾದಿತ ಸಮ್ಮತಿ ಮತ್ತು ವ್ಯವಸ್ಥಿತ ಸುಳ್ಳುಗಳನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಲು ಬೇಕಾದಂತಹ ಹತಾರಗಳ್ಯಾವುವು? ೨೦೧೧ರಲ್ಲಿನ ಎರಡು ಜನಪ್ರಿಯ ಚಳವಳಿಗಳಿಂದ ಇಂದಿಗೂ ನಮಗೆ ಯಾವುದೇ ಬಗೆಯ ಸುಳುಹುಗಳು ದೊರಕಬಹುದೇ? ಅಸಮಾನ ಆರ್ಥಿಕ ಹಂಚಿಕೆಯ ವಿರುದ್ಧದ ನ್ಯೂಯಾರ್ಕ್ ನಗರದಲ್ಲಿ ವ್ಯಾಪಿಸಿಕೊಂಡ ‘ವಾಲ್ ಸ್ಟ್ರೀಟ್ ಆಕ್ರಮಣ’ (Occupy Wall Street) ಪ್ರತಿಭಟನೆ ದೊಡ್ಡ ಮಟ್ಟದಲ್ಲಿ ಸಂಚಲನೆ ಮೂಡಿಸಿದ್ದು ಸತ್ಯ. ಶೇ.೧ ಪ್ರಮಾಣದ ಬಂಡವಾಳಶಾಹಿಗಳ ಬಳಿ ಸಂಪತ್ತು ಕ್ರೋಡೀಕರಣಗೊಂಡಿರುವುದನ್ನು ವಿರೋಧಿಸಿ ‘ನಾವು ಶೇ.೯೯’ ಎಂದು ಬ್ಯಾಂಕ್, ಕಾರ್ಪೊರೇಟ್ ಕಚೇರಿ, ಕಾಲೇಜು, ವಿಶ್ವವಿದ್ಯಾನಿಲಯಗಳನ್ನು ಆಕ್ರಮಿಸಿಕೊಳ್ಳುವ ಚಳವಳಿ ಪ್ರಭುತ್ವಕ್ಕೆ ಬಿಸಿ ಮುಟ್ಟಿಸಿತು. ಅದೇ ಸಂದರ್ಭದಲ್ಲಿ ಇಂಡಿಯಾದಲ್ಲಿ ‘ಭ್ರಷ್ಟಾಚಾರದ ವಿರುದ್ಧ ಭಾರತ’ (ಐಎಸಿ) ಎನ್ನುವ ಪ್ರತಿಭಟನೆ ದೇಶಾದ್ಯಂತ ಕಾವು ಪಡೆದುಕೊಂಡಿತು. ಅಣ್ಣಾ ಹಝಾರೆ ನೇತೃತ್ವದ ಈ ಪ್ರತಿಭಟನೆಯು ಆಗ ಅಧಿಕಾರದಲ್ಲಿರುವ ಯುಪಿಎ-೨ ಸರಕಾರದ ಭ್ರಷ್ಟಾಚಾರದ ಆರೋಪಗಳ ವಿರುದ್ಧ ಸಂಘಟಿತವಾಗಿ ಜನಾಂದೋಲನ ರೂಪಿಸಿತು. ಇದರ ಹಿಂದೆ ಆರೆಸ್ಸೆಸ್ನ ಕೈವಾಡವಿದೆ ಎನ್ನುವ ಸತ್ಯವನ್ನು ಅದರಲ್ಲಿ ಪಾಲ್ಗೊಂಡಿದ್ದ ಪ್ರಶಾಂತ್ ಭೂಷಣ್ ಒಳಗೊಂಡಂತೆ ಅನೇಕರು ಹತ್ತು ವರ್ಷಗಳ ನಂತರ ಹೇಳುತ್ತಿದ್ದಾರೆ. ಆದರೆ ಕಾಲ ಮಿಂಚಿ ಹೋಗಿದೆ. ಈ ಜನಾಂದೋಲನವನ್ನು ಬಳಸಿಕೊಂಡು ಮೋದಿ ನೇತೃತ್ವದ ಬಿಜೆಪಿ ೨೦೧೪ರಲ್ಲಿ ಅಧಿಕಾರಕ್ಕೆ ಬಂದಿದ್ದು ಈಗ ಇತಿಹಾಸ. ಇಲ್ಲಿನ ವಿಶೇಷವೆಂದರೆ ೨೦೧೧ರ ಮೇಲಿನ ಎರಡೂ ಪ್ರತಿಭಟನೆಗಳಲ್ಲಿ ಮಧ್ಯಮವರ್ಗ ಸಕ್ರಿಯವಾಗಿತ್ತು ಮತ್ತು ಅದರ ನೇತೃತ್ವ ವಹಿಸಿಕೊಂಡಿತ್ತು. ಆದರೆ ಇಂದು ಇದೇ ಮಧ್ಯಮವರ್ಗ ಬೌದ್ಧಿಕವಾಗಿ, ಮಾನಸಿಕವಾಗಿ ಭ್ರಷ್ಟಗೊಂಡಿದೆ. ಸ್ವಾರ್ಥದಲ್ಲಿ ಮುಳುಗಿರುವ ಈ ಶೇ.೧೫ ಪ್ರಮಾಣದ ಜನಸಂಖ್ಯೆ ತನ್ನ ವೈಯಕ್ತಿಕ ಹಿತಾಸಕ್ತಿಗಾಗಿ ಫ್ಯಾಶಿಸಂ ಶಕ್ತಿಗಳನ್ನು ಬೆಂಬಲಿಸುತ್ತಿದೆ. ತಮ್ಮ ಸ್ವಾರ್ಥ ಮತ್ತು ಮತಾಂಧತೆಯ ಕಾರಣಕ್ಕಾಗಿ ಕಳೆದ ಎಪ್ಪತ್ತು ವರ್ಷಗಳಲ್ಲಿ ಜತನದಿಂದ, ಕಾಳಜಿಯಿಂದ ಅನೇಕ ಮಿತಿಗಳ ನಡುವೆ ಕಟ್ಟಿದ ಈ ಸಂಸದೀಯ ಪ್ರಜಾಪ್ರಭುತ್ವವನ್ನು ನಾಶಗೊಳಿಸಿ ನಿರಂಕುಶ ಪ್ರಭುತ್ವವನ್ನು ಅಧಿಕಾರದ ಗದ್ದುಗೆಗೆ ತಂದು ಕೂರಿಸಿದೆ. ಮೈಯೆಲ್ಲ ಕಣ್ಣಾಗಿ ಜನಾಂದೋಲನ ರೂಪಿಸಬೇಕಾದ ಸಂದರ್ಭದಲ್ಲಿ ಅದನ್ನು ನಿರ್ಲಕ್ಷಿಸಿ ಮತೀಯವಾದಿಗಳನ್ನು ತನ್ನೊಳಗೆ ಬೆರೆತು ಹೋಗಲು ಅವಕಾಶ ಮಾಡಿಕೊಟ್ಟಿದೆ. ಭಾರತವು ಪ್ರಜಾಪ್ರಭುತ್ವಕ್ಕೆ ಯಾವುದೇ ಭರವಸೆಗಳನ್ನು ನೀಡದ ದೇಶ ಎನ್ನುವಂತಹ ಸ್ಥಿತಿಗೆ ತಲುಪಲು ಇಲ್ಲಿನ ಮಧ್ಯಮವರ್ಗ ಮತ್ತು ವಿದ್ಯಾವಂತರ ಕಾಣಿಕೆ ಬಹಳಷ್ಟಿದೆ.

ಈ ಉತ್ಪಾದಿತ ಸಮ್ಮತಿಯು ದೇಶದೆಲ್ಲೆಡೆ ಮಾನಸಿಕ ವ್ಯಾಧಿಯಂತೆ ವ್ಯಾಪಿಸಿಕೊಂಡಿರುವಂತಹ ಇಂದಿನ ಬಿಕ್ಕಟ್ಟಿನ ಕಾಲದಲ್ಲಿ ೨೦೧೧ರ ಮಧ್ಯಮವರ್ಗಗಳ ಆ ಹುಸಿ, ಸ್ವಾರ್ಥದ ಪ್ರತಿಭಟನೆ ಮೋದಿ-ಆರೆಸ್ಸೆಸ್ನ ನಿರಂಕುಶ ಮತೀಯ ಆಡಳಿತದ ವಿರುದ್ಧದ ಇಂದಿನ ಚಳವಳಿಗೆ ಯಾವುದೇ ಬಗೆಯಲ್ಲಿ ಸ್ಫೂರ್ತಿಯನ್ನು ತುಂಬಲು ಸಾಧ್ಯವಿಲ್ಲ. ತಾನು ಸರ್ವಾಧಿಕಾರಿ ವ್ಯವಸ್ಥೆಗೆ ವೇದಿಕೆ ಕಲ್ಪಿಸುತ್ತಿದ್ದೇನೆ ಎಂಬುದನ್ನು ನಿರ್ಲಕ್ಷ್ಯ ಮಾಡಿದ ಅಥವಾ ಗೊತ್ತಿದ್ದೂ ಜಾಣ ಕುರುಡರಂತೆ ವರ್ತಿಸಿದ ಐಎಸಿ ಪ್ರತಿಭಟನೆ ಇಂದು ಭಾರತದ ಪ್ರಜಾಪ್ರಭುತ್ವ ಘಾಸಿಗೊಂಡು ನರಳುವಿಕೆಗೆ ಕಾರಣವಾಗಿದೆ. ಆದರೆ ಈ ಮಧ್ಯಮವರ್ಗಕ್ಕೆ ೨೦೨೪ರ ಚುನಾವಣೆಯ ವೇಳೆಗೆ ತಾವು ಹಿಂಬಾಲಿಸುತ್ತಿರುವ ನಾಯಕ ಅನಾಹುತಕಾರಿ ಭವಿಷ್ಯವನ್ನು ಸೃಷ್ಟಿಸುತ್ತಿದ್ದಾರೆ ಮತ್ತು ಈ ಭವಿಷ್ಯವು ತಮ್ಮ ಮುಂದಿನ ತಲೆಮಾರುಗಳಿಗೆ ಮಾರಕವಾಗಲಿದೆ ಎಂದು ಮನವರಿಕೆಯಾಗಿರುವ ಸಾಧ್ಯತೆಗಳಿಲ್ಲ. ಇದನ್ನು ನಿಭಾಯಿಸುವುದು ಹೇಗೆ ಎಂಬುದೇ ಇಂದಿನ ಯಕ್ಷ ಪ್ರಶ್ನೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಬಿ. ಶ್ರೀಪಾದ ಭಟ್

contributor

Similar News