ಕನಕಗಿರಿ: ಹೈದರಾಬಾದ್ ಸಂಸ್ಥಾನದ ಆಳ್ವಿಕೆಯಲ್ಲಿದ್ದ ಕಲ್ಯಾಣ ಕರ್ನಾಟಕದ ಭಾಗಕ್ಕೆ ನಿಜವಾದ ವಿಮೋಚನೆ ದೊರೆತದ್ದು 1948ರ ಸೆಪ್ಟೆಂಬರ್ 17ರಂದು. ನಿಝಾಮನ ಆಡಳಿತ ಮತ್ತು ರಜಾಕಾರರ ವಿರುದ್ಧ ನಡೆದ ಹೋರಾಟದಲ್ಲಿ ಕನಕಗಿರಿ ತಾಲೂಕಿನ ಜನರ ಪಾತ್ರವೂ ಗಮನಾರ್ಹವಾಗಿತ್ತು.
ನಿಝಾಮರ ಆಡಳಿತದಿಂದ ಮುಕ್ತಿಗಾಗಿ ನಡೆದ ಹೋರಾಟದಲ್ಲಿ ತಾಲೂಕಿನ ಹಲವು ಹೋರಾಟಗಾರರು ಜೀವದ ಹಂಗು ತೊರೆದು ಭಾಗವಹಿಸಿದ್ದರು. ಭೂಗತ ಚಟುವಟಿಕೆಗಳು, ಸಭೆಗಳು ಹಾಗೂ ಕರಪತ್ರಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದರು.
ಕನ್ನಡದ ಧ್ವನಿ ಜೀವಂತವಾಗಿಟ್ಟ ಹೋರಾಟಗಾರರು
ಇತಿಹಾಸದ ದಾಖಲೆಗಳು ಹಾಗೂ ಹಿರಿಯರ ನೆನಪುಗಳ ಪ್ರಕಾರ, ಈ ಭಾಗದ ಪ್ರಮುಖ ಹೋರಾಟಗಾರರಲ್ಲಿ ಜಯತೀರ್ಥ ರಾಜಪುರೋಹಿತ್ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತದೆ. ಕನಕಗಿರಿ ಪಟ್ಟಣದ ಶಿಕ್ಷಣ ಪ್ರೇಮಿಯಾಗಿದ್ದ ಅವರು ಕನ್ನಡಪರ ಹೋರಾಟದಲ್ಲೂ ಸಕ್ರಿಯರಾಗಿದ್ದರು.
ಮಾಕಣ್ಣ ಕಂಬಳಿ ಅವರು ನವಲಿ ಭಾಗದ ರೈತ ಹೋರಾಟದ ಮುಂಚೂಣಿಯಲ್ಲಿದ್ದರು. ವೆಂಕೋಬಾಚಾರ್ಯ ಜೋಷಿ ಧಾರ್ಮಿಕ ಮುಖಂಡರಾಗಿದ್ದು, ವಿಮೋಚನಾ ಚಳುವಳಿಗೆ ಬೆಂಬಲ ನೀಡಿದ್ದರು. ಭತ್ತದ ಮರಿಯಪ್ಪ ಸಾಮಾನ್ಯ ರೈತ ಕುಟುಂಬದಿಂದ ಬಂದ ಕೆಚ್ಚೆದೆಯ ಹೋರಾಟಗಾರರಾಗಿದ್ದರು. ಇವರೊಂದಿಗೆ ಹಲವು ಸ್ಥಳೀಯರು ನಿಝಾಮ ಮತ್ತು ರಜಾಕಾರರನ್ನು ವಿರೋಧಿಸಿ ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಗೌರಿಪುರ ರೈತನ ಸಾಹಸ: ವಿಮೋಚನಾ ಚಳುವಳಿಯಲ್ಲಿ ಭಾಗವಹಿಸಿದ್ದ ಹೋರಾಟಗಾರರೊಬ್ಬರನ್ನು ರಜಾಕಾರರು ಬೆನ್ನತ್ತಿದ್ದ ಸಂದರ್ಭದಲ್ಲಿ ಗೌರಿಪುರ ಗ್ರಾಮದ ರೈತರೊಬ್ಬರು ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದರು. ರಜಾಕಾರರು ಮನೆಗೆ ಬಂದಾಗ, ಹೋರಾಟಗಾರನನ್ನು ತಮ್ಮ ಪತ್ನಿಯ ಪಕ್ಕದಲ್ಲಿ ಮಲಗಿಸಿ, ‘ನನ್ನ ಮಗ ನಿದ್ರೆ ಮಾಡುತ್ತಿದ್ದಾನೆ’ ಎಂದು ಹೇಳಿ ಆತನನ್ನು ರಕ್ಷಿಸಿದ್ದರು ಎಂಬುದು ಇಲ್ಲಿನ ಜನಜನಿತ ಚರಿತ್ರೆ. ತಮ್ಮ ಜೀವಕ್ಕೂ ಅಪಾಯವಿದ್ದ ಸಂದರ್ಭದಲ್ಲಿ ಹೋರಾಟಗಾರನಿಗೆ ಆಶ್ರಯ ನೀಡಿದ ಈ ಘಟನೆ ಕನಕಗಿರಿ ಭಾಗದ ಜನರ ಧೈರ್ಯ ಮತ್ತು ಮಾನವೀಯತೆಗೆ ಉದಾಹರಣೆಯಾಗಿ ಹಿರಿಯರ ನೆನಪಿನಲ್ಲಿ ಉಳಿದಿದೆ.
ನೆನಪಿನಲ್ಲಿ ಉಳಿಯಬೇಕಾದ ಮಹನೀಯರು: ರಾಯಚೂರಿನ ರಮಾನಂದತೀರ್ಥರು, ಕೊಪ್ಪಳದ ಅಳವಂಡಿಯ ಶಿವಮೂರ್ತಿ ಶರಣರು, ಬೀದರ್ನ ರಾಮಚಂದ್ರಪ್ಪ ಸೇರಿದಂತೆ ಅನೇಕರು ಈ ಹೋರಾಟಕ್ಕೆ ಮಾರ್ಗದರ್ಶನ ನೀಡಿದ್ದರು ಎಂದು ಹಿರಿಯರು ಸ್ಮರಿಸುತ್ತಾರೆ.
ಆದರೆ ದೇಶದ ಸ್ವಾತಂತ್ರ್ಯ ದಿನಾಚರಣೆಗೆ ದೊರೆಯುವಷ್ಟು ಪ್ರಾಮುಖ್ಯತೆ ಕಲ್ಯಾಣ ಕರ್ನಾಟಕ ವಿಮೋಚನಾ ಉತ್ಸವಕ್ಕೆ ದೊರೆಯುತ್ತಿಲ್ಲ ಎಂಬುದು ಹೋರಾಟಗಾರರ ಕುಟುಂಬಗಳ ವಿಷಾದವಾಗಿದೆ ಎಂದು ಶರಣಪ್ಪ ಬಸಪ್ಪ ಭತ್ತದ ಅವರು ಹೇಳುತ್ತಾರೆ.
ಗಡಿಪಾರಿನಲ್ಲೂ ಕುಗ್ಗದ ಕನಕಗಿರಿಯ ಹೋರಾಟ
ಕಲ್ಯಾಣ ಕರ್ನಾಟಕ ವಿಮೋಚನಾ ಹೋರಾಟ ಅಸ್ತಿತ್ವದ ಹೋರಾಟವಾಗಿತ್ತು. ನಿಝಾಮ ಮತ್ತು ರಜಾಕಾರರ ಆಡಳಿತ ವಿರೋಧಿ ಹೋರಾಟದ ಸಂದರ್ಭದಲ್ಲಿ ಕನಕಗಿರಿ ಭಾಗದಲ್ಲೂ ಭಯದ ವಾತಾವರಣ ನಿರ್ಮಾಣವಾಗಿತ್ತು.
ಈ ಸಂದರ್ಭದಲ್ಲಿ ತಾಲೂಕಿನ ಹೋರಾಟಗಾರರಾದ ಭತ್ತದ ಮರಿಯಪ್ಪ, ಗಂಗಾವತಿಯ ಮಹಾದೇವಪ್ಪ ಹಾಗೂ ರಾಮಾಚಾರಿ ಅಯೋಧ್ಯೆ ಅವರನ್ನು ಗಡಿಪಾರು ಮಾಡಲಾಗಿತ್ತು. ಇಂದಿನ ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ ಗೌಪ್ಯ ಸ್ಥಳವೊಂದರಲ್ಲಿ ಇರಿಸಲಾಗಿದ್ದರೂ, ಅವರು ಹೋರಾಟ ಮುಂದುವರಿಸಿದ್ದರು ಎಂದು ಹಿರಿಯರು ಸ್ಮರಿಸುತ್ತಾರೆ.
ಗಡಿಪಾರಿನ ಸಂದರ್ಭದಲ್ಲೂ ದೇಶಪ್ರೇಮ ಮತ್ತು ಹೋರಾಟದ ಮನೋಭಾವವನ್ನು ಕೈಬಿಡದ ಅವರ ತ್ಯಾಗ ಇಂದಿನ ಪೀಳಿಗೆಗೆ ಸ್ಫೂರ್ತಿಯಾಗಬೇಕು ಎಂದು ಕನಕಗಿರಿ ಪಟ್ಟಣದ ಹಿರಿಯ ಗುರುಸಿದ್ದಪ್ಪ ಹಾದಿಮನಿ ತಿಳಿಸಿದ್ದಾರೆ.
ವಿಮೋಚನಾ ಹೋರಾಟ ಕೇವಲ ಆಡಳಿತ ಬದಲಾವಣೆಯ ಹೋರಾಟವಾಗಿರಲಿಲ್ಲ; ಅದು ಪ್ರಜಾಪ್ರಭುತ್ವದ ಮರುಸ್ಥಾಪನೆಯ ಹೋರಾಟವಾಗಿತ್ತು. ಕನಕಗಿರಿಯ ಮರಿಯಪ್ಪ, ನವಲಿಯ ಮಾಕಣ್ಣ ಕಂಬಳಿ, ರಾಜಪುರೋಹಿತ್, ರಾಮಲಿಯಪ್ಪ ಲಮಾಣಿ ಅವರಂತಹ ಸಾಮಾನ್ಯರು ನಿಝಾಮನ ವಿರುದ್ಧ ಎದೆಯೆತ್ತಿ ನಿಂತಿರುವುದು ಹೆಮ್ಮೆಯ ಇತಿಹಾಸ. ಅವರ ತ್ಯಾಗ ಮತ್ತು ಹೋರಾಟವನ್ನು ಪಠ್ಯಪುಸ್ತಕಗಳಲ್ಲಿ ಸೇರಿಸಿದಾಗ ಮಾತ್ರ ಅವರಿಗೆ ನಿಜವಾದ ಗೌರವ ದೊರೆಯುತ್ತದೆ.
ಶಿವಪುತ್ರಪ್ಪ ಗಳುಪೂಜಿ
ಉಪನ್ಯಾಸಕರು, ಕನಕಗಿರಿ
ಅಳಿವಿನ ಅಂಚಿನಲ್ಲಿ ಐತಿಹಾಸಿಕ ಕಟ್ಟಡಗಳು
ಮೌರ್ಯರ ದಕ್ಷಿಣ ಪ್ರಾಂತ್ಯದೊಂದಿಗೆ ಐತಿಹಾಸಿಕ ನಂಟು ಹೊಂದಿರುವ ಕನಕಗಿರಿಯಲ್ಲಿ ನವಾಬರ ಕಾಲ ಸೇರಿದಂತೆ ವಿವಿಧ ಅವಧಿಗಳ ಐತಿಹಾಸಿಕ ಕಟ್ಟಡಗಳಿವೆ. ಬ್ರಿಟಿಷರ ಕಾಲದಲ್ಲಿ ತೆರಿಗೆ ಸಂಗ್ರಹ ಹಾಗೂ ಆಡಳಿತಾತ್ಮಕ ಚರ್ಚೆಗಳಿಗಾಗಿ ತಾವರಗೇರಾ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಪ್ರವಾಸಿ ಮಂದಿರದಲ್ಲಿ ಎರಡು ಮಲಗುವ ಕೋಣೆಗಳು ಹಾಗೂ ಒಂದು ಊಟದ ಕೊಠಡಿಯಿದೆ. ಹಿಂದೆ ಸುಸಜ್ಜಿತವಾಗಿದ್ದ ಈ ಕಟ್ಟಡದ ಪೂರ್ವ ದಿಕ್ಕಿನ ಮಲಗುವ ಕೋಣೆ ಈಗ ಸೋರುತ್ತಿದೆ. ಪ್ರಸ್ತುತ ಕಟ್ಟಡ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿದೆ. ಅದೇ ರೀತಿ ಹಳೆಯ ಪೊಲೀಸ್ ಠಾಣೆ ಕಟ್ಟಡವನ್ನೂ ಬ್ರಿಟಿಷರ ಕಾಲದಲ್ಲಿ ತೆರಿಗೆ ಸಂಗ್ರಹ ಕೇಂದ್ರವಾಗಿ ಬಳಸಲಾಗುತ್ತಿತ್ತು ಎನ್ನಲಾಗಿದೆ. ಸ್ವಾತಂತ್ರ್ಯಾನಂತರ ಪೊಲೀಸ್ ಠಾಣೆಯಾಗಿ, ಬಳಿಕ ಉಪ ತಹಶೀಲ್ದಾರ್ ಕಚೇರಿಯಾಗಿ ಬಳಕೆಯಾಗಿತ್ತು. ಹೊಸ ಕಟ್ಟಡಕ್ಕೆ ಕಚೇರಿ ಸ್ಥಳಾಂತರಗೊಂಡ ಬಳಿಕ ಹಳೆಯ ಕಟ್ಟಡ ನಿರ್ವಹಣೆಯಿಲ್ಲದೆ ಪಾಳುಬಿದ್ದಿದೆ. ಕಟ್ಟಡ ಸಂಪೂರ್ಣವಾಗಿ ಸೋರುತ್ತಿದ್ದು, ಆವರಣವೂ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ ಎಂಬ ಆರೋಪಗಳಿವೆ.