Raichur | ಕೇಂದ್ರ ಸರ್ಕಾರದ ವಿರುದ್ಧ ಸಿಪಿಐ(ಎಂಎಲ್) ರೆಡ್ ಸ್ಟಾರ್ ವಾಗ್ದಾಳಿ
ರಾಯಚೂರು: ಜನರ ಬೆವರಿನ ಹಣದಿಂದ ಅಧಿಕಾರ ನಡೆಸುವ ಪ್ರಧಾನಿ ಮೋದಿ, ಜನರನ್ನೇ ತ್ಯಾಗಕ್ಕೆ ಸಿದ್ಧರಾಗಿ ಎನ್ನುವ ಹಕ್ಕಿಲ್ಲ. ದೇಶದ ಸಂಪತ್ತು ಜನರದ್ದು, ಕಾರ್ಪೊರೇಟ್ ಕುಬೇರರದ್ದು ಅಲ್ಲ ಎಂದು ಸಿಪಿಐ(ಎಂಎಲ್) ರೆಡ್ ಸ್ಟಾರ್ ರಾಜ್ಯ ಸಮಿತಿ ಸದಸ್ಯ ಎಂ. ಗಂಗಾಧರ್ ಹೇಳಿದರು.
ಮಂಗಳವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ದೇಶದ ಜನರನ್ನು ಸಂಕಷ್ಟಕ್ಕೆ ತಳ್ಳಿದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಇಂದು ಜನರ ಕಷ್ಟಗಳಿಗೆ ಪರಿಹಾರ ನೀಡುವುದನ್ನು ಬಿಟ್ಟು ಜನರ ಬದುಕಿನ ಮೇಲೆಯೇ ಉಪದೇಶ ನೀಡುತ್ತಿರುವುದು ನಾಚಿಕೆಗೇಡಿತನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ, ಅಡುಗೆ ಅನಿಲ ದರ ಹೆಚ್ಚಳ, ನಿರುದ್ಯೋಗ ಸಮಸ್ಯೆ ಹಾಗೂ ಸರ್ಕಾರಿ ಸಂಸ್ಥೆಗಳ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರವೇ ಕಾರಣವಾಗಿದೆ ಎಂದು ಆರೋಪಿಸಿದ ಅವರು, ಇದೇ ಸರ್ಕಾರ ಈಗ “ಪೆಟ್ರೋಲ್ ಕಡಿಮೆ ಬಳಸಿ”, “ಬಂಗಾರ ಖರೀದಿ ಮಾಡಬೇಡಿ”, “ಬಸ್-ರೈಲಿನಲ್ಲಿ ಸಂಚರಿಸಿ” ಎಂದು ಜನರಿಗೆ ಬೋಧನೆ ಮಾಡುತ್ತಿರುವುದು ಜನರ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ ಎಂದು ಟೀಕಿಸಿದರು.
ದೇಶದಲ್ಲಿ ರೈತರು ಸಾಲದ ಹೊರೆ ಹೊತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಾರ್ಮಿಕರು ಕನಿಷ್ಠ ವೇತನವಿಲ್ಲದೆ ದುಡಿಯುತ್ತಿದ್ದಾರೆ. ಮಧ್ಯಮ ವರ್ಗ ಬೆಲೆ ಏರಿಕೆಯಿಂದ ಸಂಕಷ್ಟ ಅನುಭವಿಸುತ್ತಿದೆ. ಆದರೆ ಕಾರ್ಪೊರೇಟ್ ಕಂಪನಿಗಳಿಗೆ ಮಾತ್ರ ಲಕ್ಷಾಂತರ ಕೋಟಿ ರೂಪಾಯಿ ಸೌಲಭ್ಯ ಹಾಗೂ ಸರ್ಕಾರಿ ಆಸ್ತಿಗಳನ್ನು ನೀಡಲಾಗುತ್ತಿದೆ ಎಂದು ದೂರಿದರು.
ಇದು ಜನರ ಸರ್ಕಾರವಲ್ಲ, ಕಾರ್ಪೊರೇಟ್ ಪರ ಸರ್ಕಾರವಾಗಿದೆ. ಜನರ ಬದುಕನ್ನು ಹಾಳು ಮಾಡುವ ಫ್ಯಾಸಿಸ್ಟ್ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಕಾರ್ಮಿಕರು, ರೈತರು, ವಿದ್ಯಾರ್ಥಿಗಳು, ಯುವಕರು ಮತ್ತು ಮಹಿಳೆಯರು ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದು ಅವರು ಕರೆ ನೀಡಿದರು.
ಇಂಧನ ದರ ಏರಿಕೆಯನ್ನು ಹಿಂಪಡೆಯಬೇಕು, ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು, ಸಾರ್ವಜನಿಕ ವಲಯದ ಖಾಸಗೀಕರಣ ನಿಲ್ಲಿಸಬೇಕು ಹಾಗೂ ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು ಆಹಾರವನ್ನು ಜನರ ಹಕ್ಕಾಗಿ ಖಾತ್ರಿಪಡಿಸಬೇಕು ಎಂದು ಆಗ್ರಹಿಸಿದರು.