ಶಿವಮೊಗ್ಗ | ಬಿದನೂರು ಕೋಟೆಯ ಕೊಳದ ದಂಡೆ ಕುಸಿತ
ಶಿವಮೊಗ್ಗ: ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹೊಸನಗರ ತಾಲೂಕಿನ ಐತಿಹಾಸಿಕ ಬಿದನೂರು ಒಳಭಾಗದಲ್ಲಿರುವ ಕೊಳದ ದಂಡೆ ಸಂಪೂರ್ಣ ಕುಸಿದ ಘಟನೆ ನಡೆದಿದೆ.
ಕೋಟೆಯ ಮಹಾದ್ವಾರದಿಂದ ಒಳಗೆ ರಾಜದರ್ಬಾರ್ ಅಂಗಳಕ್ಕೆ ತೆರಳುವಲ್ಲಿನ ಬಲಭಾಗದಲ್ಲಿ ಎರಡು ಕೊಳಗಳಿದ್ದು, ಅದರಲ್ಲಿ ಒಂದು ಕೊಳದ ದಂಡೆ ಸಂಪೂರ್ಣ ಕುಸಿದಿದೆ.
ಬಹಳ ವರ್ಷಗಳ ಹಿಂದೆ ಕುಸಿತಕ್ಕೆ ಒಳಗಾಗಿದ್ದ ಈ ಕೊಳವನ್ನು ಕೆಂಪುಕಲ್ಲುಗಳಿಂದ ಅದೇ ಮಾದರಿಯಲ್ಲಿ ನಿರ್ಮಿಸಲಾಗಿತ್ತು. ಈಗ ಅದೇ ದಂಡೆ ಸಂಪೂರ್ಣವಾಗಿ ಕುಸಿದಿದೆ. ಕೊಳದ ಅಕ್ಕಪಕ್ಕ, ಕೊಳದ ದಂಡೆಯ ಮೇಲೆ ಆಗಿಂದಾಗ್ಗೆ ಗಿಡಗಂಟಿಗಳು ಬೆಳೆಯುತ್ತಿದ್ದು, ಅದನ್ನು ಸೂಕ್ತ ನಿರ್ವಹಣೆ ಮಾಡದಿರುವುದೇ ಕುಸಿತಕ್ಕೆ ಕಾರಣ ಎನ್ನಲಾಗಿದೆ.
ಕೊಳಗಳು ಮಾತ್ರವಲ್ಲದೇ, ಕೋಟೆಯ ಬೃಹತ್ ಗೋಡೆಗಳ ಮೇಲೂ ಗಿಡಗಳು ಬೆಳೆದು ಪೊದೆಗಳಾಗುತ್ತಿರುವ ಕಾರಣ ಅಲ್ಲಲ್ಲಿ ಗೋಡೆ ಕುಸಿತವೂ ಕಂಡು ಬಂದಿದೆ. ಸಂಬಂಧಪಟ್ಟ ಕೇಂದ್ರ ಪುರಾತತ್ವ ಇಲಾಖೆ ಸೂಕ್ತ ನಿರ್ವಹಣೆ ಮಾಡುವ ಮೂಲಕ ಐತಿಹಾಸಿಕ ಬಿದನೂರು ಕೋಟೆಯನ್ನು ಸಂರಕ್ಷಣೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಲ್ಲದೇ ಇದೀಗ ಕುಸಿದಿರುವ ಕೊಳದ ದಂಡೆ ಮತ್ತು ಗೋಡೆಯನ್ನು ಸೂಕ್ತ ತಂತ್ರಜ್ಞಾನ ಬಳಸಿ ಇತಿಹಾಸದ ಮಾದರಿಯಲ್ಲೇ ಪುನಃ ನಿರ್ಮಾಣ ಮಾಡುವಂತೆ ಸಾಮಾಜಿಕ ಕಾರ್ಯಕರ್ತ ನಿತಿನ್ ನಗರ ಒತ್ತಾಯಿಸಿದ್ದಾರೆ.