ಧರ್ಮಸ್ಥಳ ಪ್ರಕರಣ| ಅನಾಮಿಕ ವ್ಯಕ್ತಿಯನ್ನು ಮೊದಲು ಬಂಧಿಸಬೇಕು: ಕೆ ಎಸ್ ಈಶ್ವರಪ್ಪ
PC: x.com/_marxtejaswi
ಶಿವಮೊಗ್ಗ: ಧರ್ಮಸ್ಥಳ ವಿಚಾರವನ್ನು ಹಿಡಿದುಕೊಂಡು ಧರ್ಮಸ್ಥಳದ ಹೆಸರನ್ನು ಹಾಗೂ ಹೆಗ್ಗಡೆಯವರ ಹೆಸರನ್ನು ಹಾಳು ಮಾಡುವ ಷಡ್ಯಂತ್ರ ನಡೆಯುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಅನಾಮಿಕ ವ್ಯಕ್ತಿಯನ್ನು ಬಂಧಿಸಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಾಮಿಕ ವ್ಯಕ್ತಿಯೊಬ್ಬರು ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತುಹಾಕಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಈ ಹೇಳಿಕೆಗೆ ಯಾವುದೇ ಆಧಾರಗಳಿಲ್ಲ. ಒಬ್ಬ ವ್ಯಕ್ತಿ ನೂರಾರು ಹೆಣಗಳನ್ನು ಹೇಗೆ ಹೂತುಹಾಕಲು ಸಾಧ್ಯ? ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಆ ವ್ಯಕ್ತಿಯೊಂದಿಗೆ ಇನ್ನು ಹಲವರು ಭಾಗಿಯಾಗಿದ್ದಾರೆ. ಸರ್ಕಾರ ಕೂಡಲೇ ಅವರನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದರು.
ರಾಜ್ಯ ಸರ್ಕಾರವು ಇತ್ತೀಚೆಗೆ ಧರ್ಮಸ್ಥಳದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾಯ್ದೆಯನ್ನು ಜಾರಿಗೆ ತಂದಿದೆ. ಈ ಕಾಯ್ದೆಯಡಿ ಸರ್ಕಾರ ಕೂಡಲೇ ಅನಾಮಿಕ ವ್ಯಕ್ತಿಯನ್ನು ಬಂಧಿಸಬೇಕು. ಅವನ ಹಿಂದೆ ಯಾರು ಇದ್ದಾರೆ ಎಂಬುದನ್ನು ಪತ್ತೆ ಹಚ್ಚಿ, ಪೂರ್ಣ ಮಾಹಿತಿ ಪಡೆಯುವವರೆಗೆ ಬಿಡಬಾರದು. ಈ ಘಟನೆಯಿಂದ ಇಡೀ ಹಿಂದೂ ಸಮಾಜಕ್ಕೆ ನೋವಾಗಿದೆ ಎಂದು ತಿಳಿಸಿದರು.
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಕುರಿತು ಮಾತನಾಡಿದ ಅವರು, ಈ ಹಿಂದೆ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆ ವೇಳೆ, ಧರ್ಮಸ್ಥಳದಲ್ಲಿ ಸ್ಫೋಟ ನಡೆಸುವ ಯೋಜನೆ ಇತ್ತು ಎಂಬುದು ಬಯಲಾಗಿದೆ. ಆಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದನ್ನು ಹಗುರವಾಗಿ ತೆಗೆದುಕೊಂಡು, ಎಲ್ಲದಕ್ಕೂ ಕೋಮು ಭಾವನೆ ತರುವ ಪ್ರಯತ್ನ ನಡೆಯುತ್ತಿದೆ ಎಂದಿದ್ದರು. ಈಗ ಈ ವಿಷಯ ಬಹಿರಂಗವಾದ ಮೇಲೆ ಅವರು ಏನನ್ನುತ್ತಾರೆ ಎಂಬುದನ್ನು ನೋಡಬೇಕು ಎಂದರು.
ಸರ್ಕಾರ ಪುಣ್ಯಕ್ಷೇತ್ರಗಳನ್ನು ರಕ್ಷಿಸಬೇಕು, ಇಲ್ಲದಿದ್ದರೆ ಹಿಂದೂ ಸಮಾಜವು ಸರ್ಕಾರದ ವಿರುದ್ಧ ತಿರುಗಿಬೀಳುವ ಸಾಧ್ಯತೆ ಇದೆ ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದರು.