×
Ad

ಬೇಸೂರು ಅಣು ವಿದ್ಯುತ್ ಸ್ಥಾವರ ಖಂಡಿಸಿ ಸಾಗರದಲ್ಲಿ ಬೃಹತ್ ಪ್ರತಿಭಟನೆ

Update: 2026-05-08 00:41 IST

ಸಾಗರ, ಮೇ 7: ಬೇಸೂರು ಅಣು ವಿದ್ಯುತ್ ಸ್ಥಾವರ ಖಂಡಿಸಿ ಗುರುವಾರ ಜನ ಹೋರಾಟ ವೇದಿಕೆ ವತಿಯಿಂದ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.

ಶಿವಪ್ಪನಾಯಕ ವೃತ್ತದಿಂದ ಹೊರಟ ಬೃಹತ್ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಗರದ ಗಾಂಧಿ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆ ನಂತರ ಉಪ ವಿಭಾಗಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಬೇಸೂರು ಅಣು ವಿದ್ಯುತ್ ಸ್ಥಾವರ ಯಾವುದೇ ಕಾರಣಕ್ಕೂ ಬೇಸೂರು ಮಾತ್ರವಲ್ಲದೆ, ನಮ್ಮ ರಾಜ್ಯದಲ್ಲಿಯೇ ಬೇಡ. ನಾಡಿಗೆ ಬೆಳಕು ನೀಡಲು ಮೂರು ಬಾರಿ ನಿರಾಶ್ರಿತರಾದ ಜನರ ಮೇಲೆ ಮತ್ತೆ ಮತ್ತೆ ಹೊಸ ಹೊಸ ಯೋಜನೆ ಹೇರುವುದನ್ನು ಸಹಿಸುವುದಿಲ್ಲ. ನನ್ನ ಶಾಸಕ ಸ್ಥಾನ ಹೋದರೂ ಚಿಂತೆಯಿಲ್ಲ. ಯಾವುದೇ ಕಾರಣಕ್ಕೂ ಅಣು ಸ್ಥಾವರವಾಗಲು ಬಿಡುವುದಿಲ್ಲ ಎಂದರು.

ಹೋರಾಟ ಸಮಿತಿ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು ಮಾತನಾಡಿ, ಯಾವುದೇ ಕಾರಣಕ್ಕೂ ಬೇಸೂರು ಭಾಗದಲ್ಲಿ ಅಣು ವಿದ್ಯುತ್ ಸ್ಥಾವರ ಬೇಡ ಎಂದು ಸರಣಿ ಸಭೆ ನಡೆಸಿ ಹೋರಾಟ ರೂಪಿಸಲಾಗಿದೆ. ಯೋಜನೆ ಕೈಬಿಡುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ. ಈಗಾಗಲೆ ಯೋಜನೆ ಬೇಡ ಎಂದು ಶಾಸಕರು ಸರಕಾರಕ್ಕೆ, ಮುಖ್ಯಮಂತ್ರಿ, ಸಚಿವರಿಗೆ ಮನವಿ ನೀಡಿದ್ದಾರೆ. ಸಂಸದರಿಗೂ ಯೋಜನೆ ಕೈಬಿಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಅನ್ಸರ್ ಸಖಾಫಿ, ಜಿಪಂ ಮಾಜಿ ಸದಸ್ಯ ಬಿ.ಆರ್. ಜಯಂತ್, ದಿನೇಶ್ ಶಿರವಾಳ, ಅಖಿಲೇಶ್ ಚಿಪ್ಳಿ, ಮಲ್ಲಿಕಾರ್ಜುನ ಹಕ್ರೆ, ಪ್ರಸನ್ನ ಕೆರೆಕೈ, ರವಿಕುಮಾರ್ ಸಿಗಂದೂರು, ಪೋಷಿಣಿ ಬೇಸೂರು ಮಾತನಾಡಿದರು.

ಪ್ರತಿಭಟನೆಯಲ್ಲಿ ಶಿವಾನಂದ ಕುಗ್ವೆ, ವ.ಶಂ.ರಾಮಚಂದ್ರ ಭಟ್, ಹೊನಗೋಡು ರತ್ನಾಕರ್, ರವಿಕುಮಾರ್ ಎಚ್.ಎಂ., ಎಂ.ವಿ.ಪ್ರತಿಭಾ, ಸಫಿಯಾ ಅಬೂಬಕರ್, ಸುವರ್ಣಾ ಟೀಕಪ್ಪ, ಚೇತನರಾಜ ಕಣ್ಣೂರು, ಡಾ. ಜೀವನ್, ರೋಹಿತ್ ಮತ್ತಿತರರು ಭಾಗವಹಿಸಿದ್ದರು. ಜಿ.ಟಿ.ಸತ್ಯನಾರಾಯಣ ಕಾರ್ಯಕ್ರಮ ನಿರ್ವಹಿಸಿದರು.

ರಾಜ್ಯ ಸರಕಾರದ ಹಂತದಲ್ಲಿ ಸ್ಥಾವರಕ್ಕೆ ಭೂಮಿ ಮಂಜೂರು ಆಗದಂತೆ ನಾನು ನೋಡಿಕೊಳ್ಳುತ್ತೇನೆ. ಕೇಂದ್ರ ಹಂತದಲ್ಲಿ ಯೋಜನೆಗೆ ಅನುಮತಿ ನೀಡದಂತೆ ಸಂಸದ ಬಿ.ವೈ.ರಾಘವೇಂದ್ರ ಒತ್ತಡ ಹಾಕಬೇಕು. ಅಣು ವಿದ್ಯುತ್ ಸ್ಥಾವರವಾದರೆ ಈ ಭಾಗ ಸಂಪೂರ್ಣ ನಾಶವಾಗುತ್ತದೆ. ಜನರಿಗೆ ಮಾರಕವಾಗುವ ಯಾವುದೇ ಯೋಜನೆಯನ್ನು ಅನುಷ್ಠಾನಕ್ಕೆ ನಾನು ಬಿಡುವುದಿಲ್ಲ. ಇದಕ್ಕಾಗಿ ಎಂತಹ ತ್ಯಾಗಕ್ಕೆ ಬೇಕಾದರೂ ಸಿದ್ಧನಿದ್ದೇನೆ.

ಗೋಪಾಲಕೃಷ್ಣ ಬೇಳೂರು, ಶಾಸಕ

ಅಣು ವಿದ್ಯುತ್ ಸ್ಥಾವರವಾದರೆ ಕೇವಲ ಬೇಸೂರಿಗೆ ಮಾತ್ರ ತೊಂದರೆ ಎನ್ನುವ ಮನೋಭಾವದಿಂದ ಜನರು ಹೊರಗೆ ಬರಬೇಕು. ಮಲೆನಾಡು ಪ್ರದೇಶದಲ್ಲಿ ಈ ಯೋಜನೆ ಸಾಧುವಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಮನದಟ್ಟು ಮಾಡಿಕೊಡಬೇಕಾಗಿದೆ. ಸುಮಾರು ನಾಲ್ಕು ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಚಿಂತನೆ ನಡೆದಿದ್ದು, ಇದಕ್ಕೆ 2 ಸಾವಿರ ಎಕರೆ ಭೂಮಿ ಕೇಳಿದ್ದಾರೆ. ಆದರೆ, ಇಷ್ಟೊಂದು ವಿದ್ಯುತ್ ಸರಬರಾಜು ಮಾಡಲು ವಿದ್ಯುತ್ ತಂತಿ ಎಳೆಯಲು ಸಾವಿರಾರು ಎಕರೆ ಅರಣ್ಯ ನಾಶವಾಗುತ್ತದೆ. ಈಗಾಗಲೆ ಸಂಸದರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಅವರಿಗೂ ಅಣು ಸ್ಥಾವರ ಸ್ಥಾಪನೆ ಕುರಿತ ಮಾಹಿತಿ ನೀಡಲಾಗಿದ್ದು, ಅವರ ಮೂಲಕವೂ ಕೇಂದ್ರದ ಮೇಲೆ ಒತ್ತಡ ಹೇರಲಾಗುತ್ತದೆ.

ಹರತಾಳು ಹಾಲಪ್ಪ, ಮಾಜಿ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News