×
Ad

ಕೋಗಿಲು ಬಡಾವಣೆಯಲ್ಲಿ ಮನೆಗಳ ತೆರವು; ಸಮಸ್ಯೆಗಳನ್ನು ಅಮಿಕಸ್ ಕ್ಯೂರಿ ಗಮನಕ್ಕೆ ತರಲು ಹೈಕೋರ್ಟ್ ನಿರ್ದೇಶನ

Update: 2026-06-09 21:11 IST

ಬೆಂಗಳೂರು : ಯಲಹಂಕ ಬಳಿಯ ಕೋಗಿಲು ಬಡಾವಣೆಯಲ್ಲಿನ ವಾಸಿಂ ಮತ್ತು ಫಕೀರ್ ಕಾಲನಿಗಳಲ್ಲಿನ ಮನೆಗಳ ತೆರವು ಕಾರ್ಯಾಚರಣೆಯಲ್ಲಿ ಸಂತ್ರಸ್ತರಾದವರಿಗೆ ಪುನರ್ವಸತಿ ಕಲ್ಪಿಸಿದ್ದರೂ ಅವರು ಅದನ್ನು ಬಳಕೆ ಮಾಡುತ್ತಿಲ್ಲ ಎನ್ನುವುದು ಚಿತ್ರಗಳಿಂದ ತಿಳಿಯಲಿದೆ ಎಂದಿರುವ ಹೈಕೋರ್ಟ್, ಪುನರ್ವಸತಿ ಕೇಂದ್ರದಲ್ಲಿ ಯಾವುದೇ ಸಮಸ್ಯೆ ಇದ್ದರೂ ಅಮಿಕಸ್ ಕ್ಯೂರಿ ಗಮನಕ್ಕೆ ತರುವಂತೆ ಅರ್ಜಿದಾರರಿಗೆ ನಿರ್ದೇಶಿಸಿದೆ.

ತೆರವು ಕಾರ್ಯಾಚರಣೆಯನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಕೋಗಿಲು ಬಡಾವಣೆ ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹಾನಾ ಹಾಗೂ ಆರೀಫ್ ಬೇಗಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್‌. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು, ಸರ್ಕಾರದ ಪುನರ್ವಸತಿ ಕೇಂದ್ರದಲ್ಲಿ 100 ಮಂದಿಯನ್ನು ಇಡಲು ಅವಕಾಶವಿಲ್ಲ. ಅವು ಕೋಗಿಲು ಲೇಔಟ್‌ ಸಮೀಪದಲ್ಲಿಲ್ಲ ಹಾಗೂ ಅಲ್ಲಿ ಅಗತ್ಯವಾದಷ್ಟು ಶೌಚಾಲಯಗಳಿಲ್ಲ ಮತ್ತು ಸೂಕ್ತ ಉಪಚಾರದ ವ್ಯವಸ್ಥೆಯಿಲ್ಲ ಎಂದಿದ್ದರು.

ಇದನ್ನೊಪ್ಪದ ನ್ಯಾಯಪೀಠ, ಸರ್ಕಾರ ಸಲ್ಲಿಸಿರುವ ಫೋಟೊಗಳು ಬೇರೆಯದೇ ಕತೆ ಹೇಳುತ್ತವೆ. ಸಂತ್ರಸ್ತರಿಗೆ ಯಾವುದೇ ಸಮಸ್ಯೆಗಳಿದ್ದರೂ ಅವರು ಅವುಗಳನ್ನು ಅಮಿಕಸ್‌ ಕ್ಯೂರಿ ಬಿ.ವಿ. ವಿದ್ಯುಲ್ಲತಾ ಅವರ ಗಮನಕ್ಕೆ ತರಬಹುದು. ಅವರು ಕ್ರಮಕೈಗೊಳ್ಳಲಿದ್ದಾರೆ ಎಂದು ಹೇಳಿತು.

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಆದರೆ, ಅವರು ಸ್ಥಳವನ್ನು ಬಿಟ್ಟು ಕದಲು ಸಿದ್ಧರಿಲ್ಲ. ಏಕೆಂದರೆ, ನಿವೇಶನಗಳು ಇಲ್ಲದಾಗುತ್ತವೆ ಎಂಬ ಆತಂಕ ಅವರದ್ದಾಗಿದೆ ಎಂದರು.

ಅರ್ಜಿದಾರರ ಪರ ವಕೀಲ ಕ್ಲಿಫ್ಟನ್‌ ರೋಜಾರಿಯೋ ಅವರು, ಸಂತ್ರಸ್ತರಿಗೆ ಕರ್ನಾಟಕ ಭೂಕಂದಾಯ ಕಾಯ್ದೆ ಅಡಿ ನಿವೇಶನ ಹಂಚಿಕೆ ಮಾಡಲಾಗಿದೆ. ಅದಕ್ಕೆ ದಾಖಲೆ ಇದೆ ಎಂದರು.

ಈ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ಜುಲೈ 13ಕ್ಕೆ ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News