ತುಮಕೂರು | ಎಟಿಎಫ್ ರ್ಯಾಂಕಿಂಗ್ ವಿಶ್ವ ಮಹಿಳಾ ಟೆನ್ನಿಸ್ ಟೂರ್ನಿ ಆರಂಭ
ತುಮಕೂರು: ತುಮಕೂರು ನಗರದಲ್ಲಿ ಮೇ.03 ರಿಂದ 10ರವರೆಗೆ ನಡೆಯುವ ಎಟಿಎಫ್ ರ್ಯಾಂಕಿಂಗ್ ವಿಶ್ವ ಮಹಿಳಾ ಟೆನ್ನಿಸ್ ಕ್ರೀಡಾಕೂಟ ಆರಂಭವಾಗಿದ್ದು, ತುಮಕೂರು ಓಪನ್ ಹೆಸರಿನಲ್ಲಿ ಪ್ರತಿವರ್ಷ ನಡೆಯಲಿದ್ದು, ಮೇ.05 ರಂದು ಐಟಿಎಫ್ ಮಹಿಳಾ ಟೆನ್ನಿಸ್ ಟೂರ್ನಿ ಡಬ್ಯು 35 ಉದ್ಘಾಟನೆಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಅಥ್ಲೇಟಿಕ ಆಸೋಸಿಯೇಷನ್ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿ ಅವರು, 2003 ರಲ್ಲಿ ಹೊಸದಾಗಿ ಟೆನ್ನಿಸ್ ಕ್ರೀಡಾಂಗಣ ಆರಂಭವಾದಾಗ ಎಟಿಪಿ ಚಾಲೆಂಜರ್ ಹೆಸರಿನಲ್ಲಿ ವಿಶ್ವ ಟೆನ್ನಿಸ್ ಟೂರ್ನ್ಮೆಂಟ್ ಆಯೋಜಿಸಲಾಗಿತ್ತು. ಅಂದು ಉದಯೋನ್ಮುಖ ಆಟಗಾರರಾದ ರೋಹನ್ ಬೋಪಣ್ಣ, ಪ್ರಕಾಶ್ ಅಮೃತರಾಜ್ ಮತ್ತು ಜರ್ಮನಿಯ ಪಿಲಿಫ್ ಕ್ರಿಸಫರ್ ಭಾಗವಹಿಸಿ ಇತಿಹಾಸ ನಿರ್ಮಿಸಿದ್ದರು. 20 ವರ್ಷಗಳ ತರುವಾಯ ಮತ್ತೊಮ್ಮೆ ತುಮಕೂರು ವಿಶ್ವ ಟೆನ್ನಿಸ್ ಭೂಪಟದಲ್ಲಿ ತನ್ನ ಹೆಸರನ್ನು ಶಾಶ್ವತವಾಗಿ ಪಡೆದುಕೊಳ್ಳುತಿದ್ದು, ಯುದ್ದದ ಕಾರ್ಮೋಡದ ನಡುವೆಯೂ ಎಂಟು ದೇಶಗಳ ಸುಮಾರು 78 ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು..
ಐಟಿಎಫ್ ಮಹಿಳಾ ಡಬ್ಲ್ಯು 35 ಟೂರ್ನಿಯಲ್ಲಿ 30,000 ಡಾಲರ್ ಬಹುಮಾನದ ಮೊತ್ತವನ್ನು ನೀಡಲಾಗಿದ್ದು, ಇಷ್ಟು ಬಹುಮಾನದ ಮೊತ್ತವನ್ನು ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆ ವತಿಯಿಂದ ಧೇಣಿಗೆ ನೀಡುವ ಮೂಲಕ ಕ್ರೀಡಾಕೂಟವನ್ನು ಪ್ರೋತ್ಸಾಹಿಸುತ್ತಿದೆ. ತುಮಕೂರು ಕ್ರೀಡಾನಗರಿಯಾಗಿ ಬಹಳ ಅಭಿವೃದ್ದಿ ಹೊಂದುತಿದ್ದು,ಇತ್ತೀಚಗೆ ರಾಜ್ಯ ಒಲಂಪಿಕ್ ಕ್ರೀಡಾಕೂಟ, ಅಂಡರ್ 20 ರಾಷ್ಟ್ರೀಯ ಆಥ್ಲೇಟಿಕ್ ಕ್ರೀಡಾಕೂಟಗಳು ಯಶಸ್ವಿಯಾಗಿ ನಡೆಸಿದ್ದು,ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರೀಡಾ ಚಟುವಟಿಕೆಗಳು ಜರುಗಲಿವೆ.ತುಮಕೂರು ಈಗ ಈ ಬೆಳೆಯುತ್ತಿರುವ ಪಟ್ಟಿಗೆ ಸೇರುವುದರೊಂದಿಗೆ, ಕರ್ನಾಟಕವು ಅಂತಾರಾಷ್ಟ್ರೀಯ ಟೆನಿಸ್ನ ಬಹು-ನಗರ ಕೇಂದ್ರವಾಗಿ ವೇಗವಾಗಿ ಹೊರಹೊಮ್ಮುತ್ತಿದೆ. ಇದು ತಳಮಟ್ಟದ ಪ್ರವೇಶ ಮತ್ತು ಗಣ್ಯ ಸ್ಪರ್ಧೆಯ ಮಾರ್ಗಗಳನ್ನು ಬಲಪಡಿಸುವ ಮಾದರಿಯಾಗಿದೆ.ಇತಂಹ ಟೂರ್ನಿಯನ್ನು ತುಮಕೂರಿಗೆ ನೀಡಿದ ಆಲ್ ಇಂಡಿಯಾ ಟೆನ್ನಿಸ್ ಅಸೋಸಿಯೇಷನ್ ಮತ್ತು ಕರ್ನಾಟಕ ಲಾನ್ ಟೆನ್ನಿಸ್ ಅಸೋಸಿಯೇಷನ್ ಇಬ್ಬರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಪ್ರಸ್ತುತ ನಡೆಯುವ ಐಟಿಎಫ್ ವಿಶ್ವ ಮಹಿಳಾ ಟೆನ್ನಿಸ್ ಟೂರ್ನಿ ಡಬ್ಯು35ಗಾಗಿ ನಾಲ್ಕು ಅಂಕಣಗಳು ಸಿದ್ದಗೊಂಡಿದ್ದು, ಮೂರು ಅಂಕಣಗಳಲ್ಲಿ ಪಂದ್ಯಾವಳಿ ನಡೆದರೆ, ಒಂದು ಅಂಕಣವನ್ನು ಅಭ್ಯಾಸಕ್ಕೆ ಮೀಸಲಿಡಲಾಗಿದೆ. ಏಕ ಕಾಲಕ್ಕೆ ನಾಲ್ಕು ಸಾವಿರ ಜನರು ಕುಳಿತು ನೋಡಬಹುದು, ಅಲ್ಲದೆ 200 ದೇಶಗಳಿಗೆ ಲೈವ್ ಪ್ರಸಾರಗೊಳ್ಳಲಿದೆ.ಕ್ರೀಡಾಕೂಟದಲ್ಲಿ ಕರ್ನಾಟಕದ 10 ಜನ ಟೆನ್ನಿಸ್ ತಾರೆಯರು ಪಾಲ್ಗೊಳ್ಳುತಿದ್ದು, ಇವರಲ್ಲಿ ತುಮಕೂರು ಜಿಲ್ಲೆಯ ಮೇಘನ ಮತ್ತು ಸೋಹಾ ಸಾಧಿಕ್ ಸಹ ಸೇರಿದ್ದಾರೆ.ಸ್ಥಳೀಯ ಟೆನ್ನಿಸ ತಾರೆಯನ್ನು ಹುಟ್ಟು ಹಾಕಲು ಇದೊಂದು ಪ್ರಮುಖ ವೇದಿಕೆಯಾಗಲಿದೆ ಎಂದರು.
ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ (ಎಐಟಿಎ) ಯ ಜಂಟಿ ಕಾರ್ಯದರ್ಶಿ ಮತ್ತು ಕೆಎಎಸ್ಎಲ್ ಟಿಎ ಜಂಟಿ ಕಾರ್ಯದರ್ಶಿ ಸುನಿಲ್ ಯಜಮಾನ್ ಮಾತನಾಡಿ, ಈ ಪಂದ್ಯಾವಳಿಯು ಕರ್ನಾಟಕದಾದ್ಯಂತ ಟೆನಿಸ್ನ ಹೆಜ್ಜೆಗುರುತನ್ನು ವಿಸ್ತರಿಸುವ ದೀರ್ಘಕಾಲೀನ ದೃಷ್ಟಿಕೋನದ ಭಾಗವಾಗಿದೆ.ತುಮಕೂರಿನಂತಹ ನಗರಗಳಿಗೆ ಅಂತಾರಾಷ್ಟ್ರೀಯ ಕಾರ್ಯಕ್ರಮ ಗಳನ್ನು ಕೊಂಡೊಯ್ಯುವ ಮೂಲಕ ನಾವು ಆಟಗಾರರಿಗೆ ಅವಕಾಶಗಳನ್ನು ಸೃಷ್ಟಿಸುತ್ತಿದ್ದೇವೆ,.ಹೊಸ ಪ್ರೇಕ್ಷಕರನ್ನು ತೊಡಗಿಸಿಕೊಳ್ಳುತ್ತಿದ್ದೇವೆ,ಭಾರತೀಯ ಟೆನಿಸ್ನಲ್ಲಿ ನಾಯಕನಾಗಿ ರಾಜ್ಯದ ಸ್ಥಾನವನ್ನು ಬಲಪಡಿಸುತ್ತಿದ್ದೇವೆ. ಕರ್ನಾಟಕದ ಸಣ್ಣ ಪಟ್ಟಣಗಳ ಪ್ರಯತ್ನವನ್ನು ಯಜಮಾನ್ ಶ್ಲಾಘಿಸಿದರು.
ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ ಪರವಾಗಿ,ಈ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಅತ್ಯುತ್ತಮ ಬೆಂಬಲ ನೀಡಿದ ತುಮಕೂರು ಜಿಲ್ಲಾಡಳಿತಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಟೆನಿಸ್ ಕ್ರೀಡೆಯನ್ನು 2 ಮತ್ತು 3ನೇ ಶ್ರೇಣಿಗೆ ನಗರಗಳಿಗೆ ಕೊಂಡೊಯ್ಯುವ ಮೂಲಕ ಕರ್ನಾಟಕವು ಇತರ ರಾಜ್ಯಗಳಿಗೆ ಅದ್ಭುತ ಮಾದರಿಯಾಗಿದೆ. ಕ್ರೀಡೆಯನ್ನು ಜನರಿಗೆ ಹತ್ತಿರ ತಂದಿದೆ. ದೇಶದಲ್ಲಿ ಟೆನಿಸ್ ಬೆಳವಣಿಗೆಗೆ ಈ ರೀತಿಯ ಉಪಕ್ರಮಗಳು ಅತ್ಯಗತ್ಯವಾಗಿದೆ ಎಂದರು.
ಮಂಗಳವಾರದಿಂದ ಪ್ರಾರಂಭವಾಗುವ 32 ಆಟಗಾರರ ಮುಖ್ಯ ಡ್ರಾದಲ್ಲಿ 6 ದೇಶಗಳ ಆಟಗಾರರನ್ನು ಒಳಗೊಂಡ ಪ್ರಬಲ ಮೈದಾನವು ಸ್ಪರ್ಧಿಸಲಿದೆ. ನಾಲ್ಕು ವೈಲ್ಡ್ ಕಾರ್ಡ್ಗಳು ಸೇರಿದಂತೆ 24 ಆಟಗಾರರು ನೇರ ಪ್ರವೇಶವನ್ನು ಪಡೆದಿದ್ದರೆ, ಇನ್ನೂ 32 ಆಟಗಾರರು ಉಳಿದ ಎಂಟು ಸ್ಥಾನಗಳಿಗಾಗಿ ಹೋರಾಡಲಿದ್ದಾರೆ.ಈ ಪಂದ್ಯಾವಳಿಯು ಉತ್ತಮ-ಗುಣಮಟ್ಟದ ಕ್ರಿಯೆಯ ಭರವಸೆ ನೀಡುತ್ತದೆ ಮತ್ತು ಭಾರತೀಯ ಅಭಿಮಾನಿಗಳಿಗೆ ಜಾಗತಿಕ ಪ್ರತಿಭೆಗಳ ಮುಂದಿನ ಅಲೆಯನ್ನು ಹತ್ತಿರದಿಂದ ವೀಕ್ಷಿಸುವ ಅವಕಾಶವನ್ನು ನೀಡುತ್ತದೆ ಎಂದು ಸುನಿಲ್ ಯಜಮಾನ್ ತಿಳಿಸಿದರು.
ಇದೇ ವೇಳೆ ವಿಶ್ವ ಮಹಿಳಾ ಟೆನ್ನಿಸ್ ಟೂರ್ನಿಯ ನಗದು ಬಹುಮಾನವಾದ 30 ಸಾವಿರ ಯುಎಸ್ ಡಾಲರ್ ಹಣದ ಚೆಕ್ನ್ನು ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯೂ ಆದ ಡಾ.ಜಿ.ಪರಮೇಶ್ವರ್ ಅವರು ರಾಜ್ಯ ಲಾನ್ ಟೆನ್ನಿಸ್ ಅಸೋಸಿಯೇಷನ್ ಕಾರ್ಯದರ್ಶಿ ಹಾಗೂ ಟೂರ್ನಿಯ ಸಂಯೋಜಕರಿಗೆ ಹಸ್ತಾಂತರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್,ಎಸ್ಪಿ ಅಶೋಕ್ ವೆಂಕಟ್,ನಿರ್ದೇಶಕರಾದ ಅಮರನಾಥ್ ಪಾಲ್ಗೊಂಡಿದ್ದರು.