×
Ad

ಮಹಿಷಾಸುರ ನಾಡಿನ ಮೂಲನಿವಾಸಿಗಳ ಅಸ್ಮಿತೆ: ನಟ ಚೇತನ್

ಉಡುಪಿ: ಅಂಬೇಡ್ಕರ್ ಯುವಸೇನೆಯಿಂದ ಮಹಿಷಾಸುರನಿಗೆ ಪುಷ್ಪಾರ್ಚನೆ ಕಾರ್ಯಕ್ರಮ

Update: 2025-09-21 14:08 IST

ಮಲ್ಪೆ, ಸೆ.21: ಮಹಿಷಾಸುರ ಚಾತುರ್ವರ್ಣ ಧರ್ಮಕ್ಕೆ ಸೇರಿದವನಲ್ಲ. ಮಹಿಷ ಮತ್ತು ಚಾಮುಂಡಿ ಮುಖಾಮುಖಿಯಾಗಿಲ್ಲ. ಭೌಗೋಳಿಕವಾಗಿ ಮಹಿಷಾಸುರ ಬೌದ್ಧ ಧರ್ಮ ಪ್ರಚಾರಕ ಮತ್ತು ಅಸ್ಮಿತೆಯಾಗಿ ನಮ್ಮ ನಡುವೆ ಕಂಗೊಳಿಸುವ ಇತಿಹಾಸ ಪುರುಷರಾಗಿದ್ದಾರೆ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.

ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ವತಿಯಿಂದ ಮಲ್ಪೆ ಸರಸ್ವತಿ ಬಯಲು ರಂಗಮಂದಿರದಲ್ಲಿ ರವಿವಾರ ಆಯೋಜಿಸಿದ್ದ ಮಹಿಷಾಸುರನಿಗೆ ಪುಷ್ಪಾರ್ಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಹಿಂದೂ ಪುರಾಣಗಳಲ್ಲಿ ಅವಾಸ್ತವಿಕ, ಅಮಾನವೀಯ ಮತ್ತು ಅವೈಜ್ಞಾನಿಕ ಸಂಗತಿಗಳನ್ನು ಮಂಡಿಸಿ ವೈದಿಕಶಾಹಿಗಳು, ಮೂಲನಿವಾಸಿಗಳ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಸಾರ್ವಭೌಮತ್ವಗಳನ್ನು ಕಸಿದುಕೊಂಡಿದ್ದಾರೆ. ಭಾರತದಲ್ಲಿ ಮನುವಾದಿಗಳು ಪುರಾಣ ಮತ್ತು ಮಹಾ ಕಾವ್ಯಗಳನ್ನೇ ಇತಿಹಾಸವೆಂದು ಬಣ್ಣಿಸಿ ಇಲ್ಲಿನ ಮೂಲನಿವಾಸಿಗಳನ್ನು ದಾರಿ ತಪ್ಪಿಸಿದ್ದಾರೆ ಎಂದು ಅವರು ಹೇಳಿದರು.

ಜನಪರ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ, ಬಲಿ ಚಕ್ರವರ್ತಿ, ರಾವಣ, ನರಕಾಸುರ, ಮಹಿಷಾಸುರ ಮುಂತಾದ ಮಹಾರಾಜರನ್ನು ಹೇಯವಾಗಿ ಚಿತ್ರಿಸುವ ಮೂಲಕ ಬೌದ್ಧ ಧರ್ಮವನ್ನು ನಾಶಮಾಡುವ ಪಿತೂರಿಯನ್ನು ಮನುವಾದಿಗಳು ಮಾಡಿದ್ದಾರೆ. ಮಹಿಷಾಸುರ ಎಂದರೆ ಪ್ರಾಣವನ್ನು ರಕ್ಷಿಸುವ ಮಹಾರಕ್ಷಕ ಮತ್ತು ಮಹಿಷಮಂಡಲವನ್ನು ಕಟ್ಟಿ ಬೆಳೆಸಿದ ದೊರೆ ಎಂದರು.

ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮಾತನಾಡಿ, ಮಹಿಷಾಸುರನ ಸ್ಮರಣೆ ಯಾವುದೇ ಧರ್ಮ ಅಥವಾ ಸರಕಾರದ ವಿರುದ್ಧವಲ್ಲ. ಇದು ಪುರಾಣ, ಮೌಢ್ಯ ಮತ್ತು ಅವೈಜ್ಞಾನಿಕ ಸಂಪ್ರದಾಯಗಳ ವಿರುದ್ಧ ಮೂಲನಿವಾಸಿಗಳು ಆಚರಿಸುವ ಹಬ್ಬ. ಭಾರತೀಯ ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಎಂದು ತಿಳಿಸಿದರು.

ಅಂಬೇಡ್ಕರ್ ಯುವಸೇನೆಯ ಮುಖಂಡರಾದ ಹರೀಶ್ ಸಾಲ್ಯಾನ್, ದಯಾಕರ್ ಮಲ್ಪೆ, ಅರುಣ್ ಸಾಲ್ಯಾನ್, ಭಗವಾನ್ ಮಲ್ಪೆ, ಪ್ರಶಾಂತ್ ಬಿ.ಎನ್., ರವಿರಾಜ್ ಲಕ್ಷ್ಮೀ ನಗರ, ನವೀನ್ ಬನ್ನಂಜೆ, ಶಶಿಕಾಂತ್ ನೇಜಾರು, ಸಾಧು ಚಿಟ್ಪಾಡಿ, ವಿನಯ ಕೊಡಕೂರು, ರಾಜೇಶ್ ಮಲ್ಪೆ, ಅಶೋಕ್ ನಿಟ್ಟೂರು, ಸುಕೇಶ್ ಪುತ್ತೂರು, ರಾಜೇಶ್ ಸಂತೆಕಟ್ಟೆ, ಜೀವನ್ ಕೊಡವೂರು, ವಿಘ್ನೇಶ್ ಉಡುಪಿ, ಸುಶೀಲ್ ಕೊಡವೂರು, ಶ್ರವಣ್ ಸಂತೆಕಟ್ಟೆ, ಉಡುಪಿ ನಗರಸಭಾ ಸದಸ್ಯ, ಯಾದವ ಕೊಳ, ಸಂಧ್ಯಾ ತಿಲಕ್ ರಾಜ್, ಪೂರ್ಣಿಮಾ, ವಿನೋದ್, ಪ್ರಮೀಳಳಾ, ಸುಜಾತಾ, ಚಿತ್ರಾಕ್ಷಿ ತೊಟ್ಟಂ, ಜಾನಕಿ ನೆರ್ಗಿ ಮೊದಲಾದವರು ಉಪಸ್ಥಿತರಿದ್ದರು.

ಸತೀಶ್ ಕಪ್ಪೆಟ್ಟು ಸ್ವಾಗತಿಸಿದರು. ಗುಣವಂತ ತೊಟ್ಟಂ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News