ಸಾಧಿಸಲು ಆಸಕ್ತಿ -ಸಮರ್ಪಣಾಭಾವ ಅಗತ್ಯ: ರೆಮೋನಾ ಪಿರೇರ
ಮಲ್ಪೆ, ಸೆ.21: ನಮ್ಮಲ್ಲಿ ಆಸಕ್ತಿ ಮತ್ತು ಸಮರ್ಪಣಾಭಾವ ಇದ್ದಾಗ ಯಾವುದೇ ಅಡೆತಡೆಗಳನ್ನು ಎದುರಿಸಿ ಸಾಧನೆಯ ಶಿಖರವನ್ನು ಏರಲು ಸಾಧ್ಯ ಎಂದು ಭರತನಾಟ್ಯದಲ್ಲಿ ವಿಶ್ವ ದಾಖಲೆ ಮಾಡಿದ ಕಲಾವಿದೆ ರೆಮೋನಾ ಇವೆಟ್ ಪಿರೇರಾ ಹೇಳಿದ್ದಾರೆ.
ತೊಟ್ಟಂ ಸಂತ ಅನ್ನಮ್ಮ ಚರ್ಚಿನಲ್ಲಿ ರವಿವಾರ ಮಹಿಳಾ ಆಯೋಗ ಹಾಗೂ ಸ್ತ್ರೀ ಸಂಘಟನೆ ವತಿಯಿಂದ ಆಯೋಜಿಸಿದ್ದ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ಪ್ರತಿಯೊಬ್ಬರಲ್ಲೂ ಕೂಡ ವಿಶೇಷವಾದ ಪ್ರತಿಭೆಗಳಿದ್ದು ಅದಕ್ಕೆ ಹೆತ್ತವರ ಹಾಗೂ ಸಮಾಜದ ಪ್ರೋತ್ಸಾಹ ಲಭಿಸಿದಾಗ ಸಾಧನೆ ಮಾಡಲು ಉತ್ಸಾಹ ಬರುತ್ತದೆ. ಹೆಣ್ಣು ಮಕ್ಕಳಿಗೆ ಕಠಿಣವಾದ ಸಾಧನೆಗಳನ್ನು ಮಾಡುವಾಗ ಸಮಾಜದಿಂದ ಪ್ರೋತ್ಸಾಹದ ಜೊತೆಗೆ ಟೀಕೆಗಳು ಲಭಿಸುವುದು ಕೂಡ ಸಹಜ. ಆದರೆ ಅದರ ಬಗ್ಗೆ ಹೆಚ್ಚಿನ ತಲೆಕೆಡಿಸದೆ ಸಾಧನೆ ಮಾಡಬೇಕು ಎನ್ನುವ ಒಂದೇ ಗುರಿಯೊಂದಿಗೆ ಮುನ್ನುಗ್ಗಿದಾಗ ಯಶಸ್ಸು ಶತಸಿದ್ದ ಎಂದರು.
ಅಧ್ಯಕ್ಷತೆ ವಹಿಸಿದ್ದ ಚರ್ಚಿನ ಧರ್ಮಗುರು ವಂ.ಡೆನಿಸ್ ಡೇಸಾ ಮಾತನಾಡಿ, ಹೆಣ್ಣು ಅಬಲೆಯಲ್ಲ ಬದಲು ಸಬಲೆ ಎನ್ನುವುದು ಈಗಾಗಲೇ ತಮ್ಮ ಸಾಧನೆಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಹಿಂದಿನ ಪರಿಸ್ಥಿತಿಗಳಿಗೆ ಹೋಲಿಸಿದರೆ ಹೆಣ್ಣು ಇಂದು ಎಲ್ಲ ರಂಗದಲ್ಲೂ ಮುಂದಿದ್ದಾಳೆ. ಈ ದೇಶದಲ್ಲಿ ಹೆಣ್ಣಿಗೆ ಅವಕಾಶಗಳು ಸಾಕಷ್ಟಿವೆ ಅವುಗಳನ್ನು ಬಳಸಿಕೊಳ್ಳುವ ಮೂಲಕ ಎತ್ತರಕ್ಕೆ ಬೆಳೆಯಬೇಕು ಎಂದು ತಿಳಿಸಿದರು.
ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷ ಲೆಸ್ಲಿ ಆರೋಜ ಶುಭ ಹಾರೈಸಿದರು.
ಚರ್ಚಿನ ವತಿಯಿಂದ ಕಲಾವಿದೆ ರೆಮೋನಾ ಇವೆಟ್ ಪಿರೇರರನ್ನು ಸನ್ಮಾನಿಸಲಾಯಿತು. ಕಥೊಲಿಕ್ ಸಭಾ ಉಡುಪಿ ಪ್ರದೇಶ ಆಯೋಜಿಸಿದ್ದ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸ್ಥಳೀಯ ಕಾನ್ವೆಂಟಿನ ಸುಪಿರೀಯರ್ ಸಿಸ್ಟರ್ ಸುಷ್ಮಾ, ಚರ್ಚಿನ ಪಾಲನಾ ಮಂಡಳಿಯ ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಚಾಲಕಿ ವನಿತಾ ಫೆರ್ನಾಂಡಿಸ್, ರೆಮೋನಾ ಪಿರೇರ ತಾಯಿ ಗ್ಲ್ಯಾಡಿಸ್ ಪಿರೇರ, ಹೆಣ್ಣು ಮಕ್ಕಳ ಪ್ರತಿನಿಧಿಗಳಾಗಿ ಶರ್ಲಿನ್ ಫೆರ್ನಾಂಡಿಸ್, ಅನೋರಾ ಫೆರ್ನಾಂಡಿಸ್, ಚರ್ಚಿನ ಆಗ್ನೆಲ್ ಡಿಸೋಜ ಉಪಸ್ಥಿತರಿದ್ದರು.
ಸ್ತ್ರೀ ಸಂಘಟನೆಯ ಪ್ರಿಯಾ ರೊಡ್ರಿಗಸ್ ಸ್ವಾಗತಿಸಿದರು. ಶಾಂತಿ ಫೆರ್ನಾಂಡಿಸ್ ವಂದಿಸಿದರು.
ಚರ್ಚಿನ ಹೆಣ್ಣು ಮಕ್ಕಳು ಸಮಾಜದಲ್ಲಿ ಮಹಿಳೆಯ ಸ್ಥಾನಮಾನವನ್ನು ಪರಿಚಯಿಸುವ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೃತ್ಯ, ಕಿರು ನಾಟಕಗಳ ಮೂಲಕ ಪ್ರದರ್ಶಿಸಿದರು.