ನೇಕಾರರ ತರಬೇತಿ ಕೇಂದ್ರಕ್ಕೆ ಸಂಸದ ಕೋಟ ಭೇಟಿ: ಕೈಮಗ್ಗ ಮತ್ತು ನೇಕಾರರ ಸಂಕಷ್ಟಕ್ಕೆ ಸ್ಪಂದಿಸುವ ಭರವಸೆ
ಉಡುಪಿ, ಅ.14: ಉಡುಪಿ ಜಿಲ್ಲೆಯ ಕೈಮಗ್ಗ ಮತ್ತು ನೇಕಾರರ ಸೇವಾ ಕೇಂದ್ರಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಇಂದು ಭೇಟಿ ನೀಡಿದ್ದು, ಉಡುಪಿ ಜಿಲ್ಲೆಯ ಕೈಮಗ್ಗ ನೇಕಾರರಿಗೆ ಸಂಬಂಧಿಸಿದ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದರು.
ಕೈಮಗ್ಗ ತರಬೇತಿ ಕೇಂದ್ರದಲ್ಲಿ ಒಟ್ಟು 45 ಕೈಮಗ್ಗಗಳು ಹಾಗೂ ಕೇಂದ್ರದ ಸಮರ್ಥ ಯೋಜನೆಯಡಿ ತರಬೇತಿ ಹೊಂದಿದ 36 ಜನ ನೇಕಾರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರೊಂದಿಗೆ ಸಂಸದರು ಚರ್ಚಿಸಿ, ನೇಕಾರಿಕೆಗೆ ಸಂಬಂಧಿಸಿದ ಸಮಸ್ಯೆ ಹಾಗೂ ಅಭಿವೃದ್ಧಿಗಳ ಕುರಿತು ಮಾಹಿತಿಗಳನ್ನು ಪಡೆದುಕೊಂಡರು.
ಕೇಂದ್ರದಿಂದ ದೊರಕಬಹುದಾದ ಯೋಜನೆಗಳಿಗೆ ಸ್ಥಳೀಯ ನೇಕಾರರನ್ನು ಶಿಫಾರಸು ಮಾಡುವುದಾಗಿ ಸಂಸದರು ಭರವಸೆ ನೀಡಿದರು. ಈ ಸಂದರ್ಭ ದಲ್ಲಿ ನೇಕಾರರ ಸಂಘ ಸ್ವಂತ ಕಟ್ಟಡ ನಿರ್ಮಿಸಲು ಅನುದಾನ ಹಾಗೂ ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ಸಂಚರಿಸಲು ಉಚಿತ ಬಸ್ ಸಂಚಾರದ ವ್ಯವಸ್ಥೆಕಲ್ಪಿಸುವಂತೆ ಸಂಘದ ಪರವಾಗಿ ಸಂಸದರಿಗೆ ಕೋರಿಕೆ ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿ, ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.
ಸಂಸದರೊಂದಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ನವೀನ್ ಕುತ್ಯಾರು, ಕೈಮಗ್ಗ ನೇಕಾರರ ಸಂಘದ ಅಧ್ಯಕ್ಷ ರತ್ನಾಕರ್ ಇಂದ್ರಾಳಿ, ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಮತ್ತು ಕೌಶಲಾಭಿವೃದ್ಧಿ ಇಲಾಖೆಯ ಅಧಿಕಾರಿ ಬಿ.ಅರುಣ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.