ಕುಂದಾಪುರ: ಕೊರಗ ಸಮಾಜದ ಅತಿ ದೊಡ್ಡ ಕ್ರೀಡಾ, ಸಾಂಸ್ಕೃತಿಕ ಹಬ್ಬ ‘ಒಟ್ಟಾಮ್ ಬಲ್ಲಾ-2024’ಕ್ಕೆ ಚಾಲನೆ
ಕುಂದಾಪುರ, ಮೇ10: ಪರಿಶಿಷ್ಟ ಗೆಳೆಯರು (ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆ) ಇವರ ಆಶ್ರಯದಲ್ಲಿ 3ನೇ ಬಾರಿಗೆ ಕೊರ್ರ್/ಕೊರಗ ಸಮಾಜದ ಅತಿ ದೊಡ್ಡ ಕ್ರೀಡಾ ಹಾಗೂ ಸಾಂಸ್ಕೃತಿಕ ಹಬ್ಬ ‘ಒಟ್ಟಾಮ್ ಬಲ್ಲಾ-2024’ (ಒಂದಾಗೋಣ ಬನ್ನಿ) ಮೂರು ದಿನಗಳ ಕಾರ್ಯಕ್ರಮಕ್ಕೆ ಶುಕ್ರವಾರ ಕುಂದಾಪುರ ಗಾಂಧಿ ಮೈದಾನದಲ್ಲಿ ಚಾಲನೆ ದೊರಕಿದೆ.
ಉಡುಪಿ ಜಿಲ್ಲಾ ಕೊರಗ ಸಂಘದ ಅಧ್ಯಕ್ಷೆ ಗೌರಿ ಕೆಂಜೂರು, ಕುಂದಾಪುರದ ಮಾಜಿ ಪುರಸಭಾ ಸದಸ್ಯೆ ಗೀತಾ ವಸಂತ ತಲ್ಲೂರು, ಸತ್ಯಾಗ್ರಹ ಸ್ಮಾರಕ ವಿದ್ಯಾಲಯ ಶೆಟಗೇರಿ ಅಂಕೋಲದ ಅಧ್ಯಾಪಕಿ ಜಯಶ್ರೀ ಗಣೇಶ್ ಉಳೂರು, ಸಾವಿತ್ರಿ ಬಾಪುಲೆ ಮಹಿಳಾ ಸಂಘ ಬೈಂದೂರಿನ ಅಧ್ಯಕ್ಷೆ ನಾಗಮ್ಮ ಲಕ್ಷ್ಮಣ ಕೊರಗ, ಪತ್ರಕರ್ತ ಜಾನ್ ಡಿಸೋಜಾ, ಕಾರ್ಯ ಕ್ರಮದ ರುವಾರಿ ಗಳಾದ ಸುರೇಂದ್ರ, ಗಣೇಶ್ ಕುಂದಾಪುರ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮೊದಲ ದಿನವಾದ ಶುಕ್ರವಾರ ಹೆಣ್ಣುಮಕ್ಕಳು ಹಾಗೂ ಮಹಿಳೆಯರ ಕ್ರಿಕೆಟ್ ಪಂದ್ಯಾಟ ನಡೆದಿದ್ದು 4 ಜಿಲ್ಲೆಗಳಿಂದ 12ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು. ಕುಂದಾಪುರ ನಗರ ಠಾಣೆ ಪೊಲೀಸ್ ನಿರೀಕ್ಷಕ ಯು.ಬಿ ನಂದಕುಮಾರ್ ಹಾಗೂ ಉಪನಿರೀಕ್ಷಕ ವಿನಯ್ ಎಂ. ಕೊರ್ಲಹಳ್ಳಿ ಉತ್ತಮ ಆಟಗಾರ್ತಿಗೆ ಪ್ರಶಸ್ತಿ ನೀಡಿದರು.
ಕುಂದಾಪುರ ತಾಲೂಕು ಕೊರಗ ಶ್ರೇಯೋಭಿವೃದ್ಧಿ ಸಂಘ, ಕೊರಗ ತನಿಯ ಕೊರಗರ ಯುವ ಕಲಾ ವೇದಿಕೆ ಮರವಂತೆ, ಹುಭಾಶಿಕ ಕೊರಗರ ಯುವ ಕಲಾ ವೇದಿಕೆ ಬಾರ್ಕೂರು, ಮಹಾತ್ಮ ಜ್ಯೋತಿಬಾ ಪುಲೆ ಕೊರಗರ ಯುವಕಲಾ ವೇದಿಕೆ ಬೈಂದೂರು ಮುಂತಾದ ಸಂಘಟನೆಗಳು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದವು.