ಜೂ.11: ಖಾಸಗಿ ಬಸ್ ದರ ಏರಿಕೆ ಖಂಡಿಸಿ ಸಿಪಿಎಂ ಪ್ರತಿಭಟನೆ
ಉಡುಪಿ, ಜೂ.9: ರಾಜ್ಯದ ಖಾಸಗಿ ಬಸ್ ಮಾಲಕರ ಸಂಘವು ಪೆಟ್ರೋಲ್, ಡೀಸೆಲ್ ಹಾಗೂ ವಾಹನಗಳ ಬಿಡಿಭಾಗಗಳ ಬೆಲೆ ಏರಿಕೆಯನ್ನು ನೆಪವೊಡ್ಡಿ ಶೇ.5 ರಿಂದ 8ರಷ್ಟು ಬಸ್ ಪ್ರಯಾಣ ದರವನ್ನು ಹೆಚ್ಚಿಸಿರುವುದು ಖಂಡನೀಯ. ಸಿಪಿಎಂ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಪ್ರಯಾಣದರ ಏರಿಕೆ ಖಂಡಿಸಿ ಉಡುಪಿ ಜಿಲ್ಲಾಧಿ ಕಾರಿ ಕಚೇರಿ ಎದುರು ಜೂ.11ರಂದು ಬೆಳಿಗ್ಗೆ 11 ಗಂಟೆ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳ ಲಾಗಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ತಿಳಿಸಿದ್ದಾರೆ.
ಬೆಲೆ ಏರಿಕೆಗೆ ಆಡಳಿತ ನಡೆಸುತ್ತಿರುವ ಸರಕಾರಗಳ ಆರ್ಥಿಕ ನೀತಿಗಳೇ ಪ್ರಮುಖ ಕಾರಣವಾಗಿವೆ. ಬಸ್ ಮಾಲಕರ ಸಂಘದ ಅಧ್ಯಕ್ಷರು ಬಿಜೆಪಿ ಸರಕಾರದ ಬೆಂಬಲಿಗಾರಾಗಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ, ಜನರ ಮೇಲೆ ಹೆಚ್ಚುವರಿ ಹೊರೆ ಹಾಕುವ ಬದಲು ಸರಕಾರದಿಂದ ಅಗತ್ಯ ಪರಿಹಾರ ಮತ್ತು ಸೌಲಭ್ಯಗಳನ್ನು ಪಡೆಯಲು ಪ್ರಯತ್ನಿಸಬೇಕಿತ್ತು ಎಂದು ಪಕ್ಷ ಅಭಿಪ್ರಾಯಪಟ್ಟಿದೆ.
ಕರೋನಾ ಅವಧಿಯಲ್ಲಿ ಹೆಚ್ಚಿಸಲಾಗಿದ್ದ ಬಸ್ ಪ್ರಯಾಣ ದರವನ್ನು ಪರಿಸ್ಥಿತಿ ಸಹಜಗೊಂಡ ಬಳಿಕವೂ ಕಡಿಮೆ ಮಾಡಲಾಗಿರಲಿಲ್ಲ. ಇದೀಗ ಮತ್ತೊಮ್ಮೆ ದರ ಏರಿಕೆ ಮಾಡಿರುವುದು ಮತ್ತು ಅದಕ್ಕೆ ಜಿಲ್ಲಾಡಳಿತ ಮೌನ ಬೆಂಬಲ ನೀಡುತ್ತಿರುವುದು ಸಾರ್ವಜನಿಕರ ಹಿತಕ್ಕೆ ವಿರುದ್ಧವಾದ ಕ್ರಮ ವಾಗಿದ್ದು, ಇದು ಜನರಿಗೆ ಮಾಡುವ ದ್ರೋಹವಾಗಿದೆ ಎಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಬಸ್ ದರ ಏರಿಕೆಗೆ ಸಿಐಟಿಯು ಖಂಡನೆ
ಉಡುಪಿ ಖಾಸಗಿ ಬಸ್ ಮಾಲಕರು ಪೆಟ್ರೋಲ್ ಡೀಸೆಲ್ ದರ ಹೆಚ್ಚಳದ ವಿಷಯ ಇಟ್ಟುಕೊಂಡು ಸಾರಿಗೆ ಪ್ರಾಧಿಕಾರ, ಜಿಲ್ಲಾಡಳಿತದ ಗಮನಕ್ಕೆ ಬರದೆ ಸಭೆಯು ನಡೆಸದೆ ಏಕಾಎಕಿ ಖಾಸಗಿ ಬಸ್ ಮಾಲಕರು ಶೇ.5ರಿಂದ 8 ವರೆಗೆ ದರ ಏರಿಕೆ ಮಾಡಿರುವುದನ್ನು ಸಿಐಟಿಯು ಉಡುಪಿ ವಲಯ ಸಮಿತಿ ತೀವ್ರವಾಗಿ ಖಂಡಿಸಿದೆ.
ಜಿಲ್ಲಾಧಿಕಾರಿಯವರು ಸಾರಿಗೆ ಪ್ರಾಧಿಕಾರದ ಸಭೆಯನ್ನು ಕರೆದು ಎಲ್ಲಾ ಸಂಘ, ಸಂಸ್ಥೆಗಳು, ಸಾರ್ವಜನಿಕರು, ಬಸ್ ಮಾಲಕರ ಜೊತೆ ಸಭೆ ನಡೆಸಿ ಚರ್ಚಿಸಿ ನಂತರ ದರ ಏರಿಕೆ ಬಗ್ಗೆ ತೀರ್ಮಾನ ತೆಗೆದು ಕೊಳ್ಳಬೇಕು. ಆದರೆ ಖಾಸಗಿ ಬಸ್ ಮಾಲಕರು ಜಿಲ್ಲಾಡಳಿತ ಗಮನಕ್ಕೆ ತಾರದೆ ಸರ್ವಾಧಿಕಾರಿ ಯಂತೆ ಏಕಾಎಕಿ ದರ ಏರಿಕೆ ಮಾಡಿದ್ದಾರೆ. ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ದರ ಏರಿಕೆಯನ್ನು ನಿಲ್ಲಿಸಬೇಕು ಎಂದು ಸಿಐಟಿಯು ಉಡುಪಿ ವಲಯ ಸಂಚಾಲಕ ಕವಿರಾಜ್ ಎಸ್.ಕಾಂಚನ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.