ಕಾರ್ಕಳ : ಚಿತ್ರ ಕಲಾವಿದ ಕಮಲ್ ಅಹ್ಮದ್ ಮಾಳೇಕೊಪ್ಪ ಅವರಿಗೆ ರಾಷ್ಟ್ರಪತಿ ಗೌರವ

Update: 2026-08-20 14:56 IST

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ವಾಸ್ತವ್ಯವಿರುವ ಗದಗ ಜಿಲ್ಲೆಯ ಖ್ಯಾತ ಚಿತ್ರಕಲಾವಿದ, ವಿಜಯನಗರ ಗರುಡಾದ್ರಿ ಶೈಲಿಯಿಂದ ಪ್ರಭಾವಿತರಾದ ಕಮಲ್ ಅಹ್ಮದ್ ಮಾಳೇಕೊಪ್ಪ ಅವರಿಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರತಿಷ್ಠಿತ "ಆರ್ಟಿಸ್ಟ್ ಇನ್ ರೆಸಿಡೆನ್ಸಿ" ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಗೌರವ ದೊರಕಿದೆ.

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ 10 ದಿನಗಳ ಕಾಲ ಆಯೋಜಿಸಲಾದ ಈ ವಿಶೇಷ ಕಾರ್ಯಕ್ರಮದಲ್ಲಿ ಭಾರತದೆಲ್ಲೆಡೆಯ ವಿವಿಧ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಪ್ರತಿನಿಧಿಸುವ 12 ಮಂದಿ ಕಲಾವಿದರು ಭಾಗವಹಿಸಿದ್ದರು. ಇದರಲ್ಲಿ ಬನಾರಸ್ ಮ್ಯೂರಲ್, ಥಾಂಕಾ, ನಾಯಕ್, ಕೇರಳ ಮ್ಯೂರಲ್, ಬಸೋಹ್ಲಿ, ಸುರಪುರ ಹಾಗೂ ಮೈಸೂರು ಶೈಲಿಯ ಕಲಾವಿದರು ಸೇರಿದ್ದರು. ಅವರೆಲ್ಲರೂ ರಾಷ್ಟ್ರಪತಿ ಭವನದಲ್ಲೇ ವಾಸ್ತವ್ಯ ಹೂಡಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದರು.

ಕಮಲ್ ಅಹ್ಮದ್ ಮಾಳೇಕೊಪ್ಪ ಅವರು ಕಳೆದ 3 ದಶಕಗಳಿಂದ ವಿಜಯನಗರ ಗರುಡಾದ್ರಿ ಶೈಲಿಯಿಂದ ಪ್ರಭಾವಿತರಾಗಿ ತಮ್ಮದೇ ಆದ ಒಂದು ಶೈಲಿಯನ್ನು ಕಂಡುಕೊಂಡು ಮಿನಿಯೇಚರ್ ಚಿತ್ರಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಮಲ್ ಅಹ್ಮದ್ ಮಾಳೇಕೊಪ್ಪ ಅವರು ರಾಷ್ಟ್ರಪತಿ ಭವನದಲ್ಲಿ ಒಂದು ಕಲಾಕೃತಿಯನ್ನು ರಚಿಸಿದ್ದಾರೆ.

ಅಲ್ಲದೇ ಒಂದು ಕಲಾಕೃತಿಯನ್ನು ಪ್ರದರ್ಶಿಸಿದರು. ರಾಷ್ಟ್ರಪತಿ ಭವನದಲ್ಲಿ ಒಟ್ಟು 2 ಕಲಾಕೃತಿಗಳನ್ನು ಪ್ರದರ್ಶಿಸಿದರು. ಅವುಗಳಲ್ಲಿ 1ನ್ನು ‘ಪಂಚತಂತ್ರ’ ಕಥಾವಸ್ತುವಿನ ಆಧಾರದ ಮೇಲೆ ರಚಿಸಲಾಗಿತ್ತು.

ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಲಾವಿದರೊಂದಿಗೆ ಸಂವಾದ ನಡೆಸಿ, ಅವರ ಕಲಾಕೃತಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತದ ಸಾಂಪ್ರದಾಯಿಕ ಕಲಾ ಪರಂಪರೆಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಕಲಾವಿದರ ಕೊಡುಗೆ ಶ್ಲಾಘನೀಯವಾಗಿದೆ ಎಂದು ಶ್ಲಾಘಿಸಿದರು.

"ಆರ್ಟಿಸ್ಟ್ ಇನ್ ರೆಸಿಡೆನ್ಸಿ" ಕಾರ್ಯಕ್ರಮವು ಭಾರತದ ಶ್ರೀಮಂತ ಕಲಾ ಪರಂಪರೆಯನ್ನು ಆಚರಿಸುವ, ದೇಶದ ಸಾಂಪ್ರದಾಯಿಕ ಕಲೆಗಳನ್ನು ಉಳಿಸಿ ಬೆಳೆಸುವ ಹಾಗೂ ಭಾರತದ ಸಾಂಸ್ಕೃತಿಕ ಗುರುತನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಆಯೋಜಿಸಲಾದ ವಿಶೇಷ ಕಾರ್ಯಕ್ರಮವಾಗಿದೆ.

ಗದಗ ಜಿಲ್ಲೆಯ ಕಮಲ್ ಅಹ್ಮದ್ ಮಾಳೇಕೊಪ್ಪ ಅವರ ಆಯ್ಕೆ ವಿಜಯನಗರ ಗರುಡಾದ್ರಿಯಿಂದ ಪ್ರಭಾವಿತ ಚಿತ್ರಕಲೆಗೆ ರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಗೌರವ ಮತ್ತು ಮನ್ನಣೆಯನ್ನು ತಂದುಕೊಟ್ಟಿದೆ.

ಕಮಲ್ ಅಹ್ಮದ್ ಅವರು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಶಿವಪುರ ಸರ್ಕಾರಿ ಪ್ರೌಢಶಾಲೆಯಲ್ಲಿ 18 ವರ್ಷಗಳ ಕಾಲ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು.

ಕಮಲ್ ಅಹ್ಮದ್ ಅವರ ವಿವಿಧ ಕಲಾಕೃತಿಗಳು ಹೆಬ್ರಿ ಸರ್ಕಾರಿ ಕಚೇರಿ ಕಟ್ಟಡಗಳು, ವಿವಿಧ ಸಂಸ್ಥೆಗಳ ಗೋಡೆಗಳಲ್ಲಿ ಮೂಡಿಬಂದಿವೆ.


"ರಾಷ್ಟ್ರಪತಿ ಭವನದ ಪ್ರತಿಷ್ಠಿತ ಕಾರ್ಯಕ್ರಮಕ್ಕೆ ನನ್ನನ್ನು ಆಯ್ಕೆ ಮಾಡಿರುವುದು ನನಗೆ ಅತ್ಯಂತ ಖುಷಿ ನೀಡಿದೆ. ಇದು ನನ್ನ ಜೀವನದ ಮರೆಯಲಾಗದ ಕ್ಷಣವಾಗಿದೆ. ವಿಜಯನಗರ ಗರುಡಾದ್ರಿ-ಪ್ರೇರಿತ ಚಿತ್ರಕಲೆ ಶೈಲಿಗೆ ರಾಷ್ಟ್ರೀಯ ಮನ್ನಣೆ ಮತ್ತು ಗೌರವವನ್ನು ತಂದಿದೆ. ಇದು ಭಾರತದ ಶ್ರೀಮಂತ ಕಲಾತ್ಮಕ ಪರಂಪರೆಯಲ್ಲಿ ಅದರ ಮಹತ್ವವನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ."

- ಕಮಲ್ ಅಹ್ಮದ್ ಮಾಳೇಕೊಪ್ಪ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News