ವಿದ್ಯುತ್ ಕಂಬಕ್ಕೆ ವಾಹನ ಢಿಕ್ಕಿ: ಓರ್ವ ಮೃತ್ಯು, ಆರು ಮಂದಿಗೆ ಗಾಯ

Update: 2024-04-28 17:14 GMT

ಬೈಂದೂರು, ಎ.28: ವಾಹನವೊಂದು ರಸ್ತೆಯ ಡಿವೈಡರ್ ಮಧ್ಯೆ ಇದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಆರು ಮಂದಿ ಗಾಯಗೊಂಡ ಘಟನೆ ಎ.27ರಂದು ಸಂಜೆ ವೇಳೆ ಕಿರಿಮಂಜೇಶ್ವರ ಬಳಿ ನಡೆದಿದೆ.

ಮೃತರನ್ನು ಬಾಗಲಕೋಟೆ ಮೂಲದ ರಾಮಣ್ಣ ಎಂದು ಗುರುತಿಸಲಾಗಿದೆ. ಚಾಲಕ ನಿರಂಜನ, ಹನಮಂತ, ಪ್ರಜ್ವಲ್, ಶಿವಕ್ಕ, ರೇಷ್ಮಾ, ಕಾವ್ಯ ಎಂಬವರು ಗಾಯಗೊಂಡಿದ್ದಾರೆ.

ಬಾಗಲಕೋಟೆ ಮೂಲದ ಇವರು ಸಂಬಂಧಿಕರ ಮದುವೆಯ ಪ್ರಯುಕ್ತ ಉಡುಪಿಯಿಂದ ಬೊಲೇರೋ ವಾಹನದಲ್ಲಿ ಬಾದಾಮಿಗೆ ಹೊರಟಿದ್ದರು. ಮದುವೆ ಮುಗಿಸಿ ವಾಪಾಸ್ಸು ಬರುತ್ತಿದ್ದಾಗ ನಿಯಂತ್ರಣ ತಪ್ಪಿದ ವಾಹನ ಡಿವೈಡರ್‌ಗೆ ಡಿಕ್ಕಿ ಹೊಡೆದು ಬಳಿಕ ಸುಮಾರು 50 ಅಡಿ ದೂರದ ತನಕ ಹೋಗಿ ಡಿವೈಡರ್ ಮದ್ಯದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡ ರಾಮಣ್ಣ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದು ಬಂದಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News