ಗಂಡನ ಮನೆಯವರ ಕಿರುಕುಳ ಆರೋಪ: ಮಹಿಳೆ ಆತ್ಮಹತ್ಯೆ
ಕುಂದಾಪುರ, ಎ.29: ಗಂಡನ ಮನೆಯವರ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂಭಾಶಿ ಗ್ರಾಮದ ಸೌಜನ್ಯ 2021ರ ಮೇ 1ರಂದು ಹಳೆಕಟ್ಟು ಕೊರವಾಡಿಯ ನಿವಾಸಿ ಜಗದೀಶ್ ಎಂಬವರನ್ನು ಮದುವೆಯಾಗಿದ್ದು, ಇವರಿಗೆ ಒಂದು ಒಂದೂವರೆ ವರ್ಷದ ಹೆಣ್ಣು ಮಗು ಇದೆ. ಎ.27ರಂದು ರಾತ್ರಿ ಸೌಜನ್ಯ ತನ್ನ ಸಹೋದರ ಸಂದೀಪನಿಗೆ ಕರೆ ಮಾಡಿ ಗಂಡ ಜಗದೀಶ ಹಾಗೂ ಗಂಡನ ತಾಯಿ ಶ್ಯಾಮಲ, ಅಕ್ಕಂದಿರಾದ ಶೋಭಾ ಮತ್ತು ಶ್ಯಾಮಲ, ಮೈದಿನ ಪುಂಡಲೀಕ ಎಂಬವರು ತುಂಬಾ ಹಿಂಸೆ ಕೊಡುತ್ತಿರುವುದಾಗಿ ಹೇಳಿದ್ದಾರೆಂದು ದೂರಲಾಗಿದೆ.
ಇವರೆಲ್ಲ ಸೇರಿ ಸೌಜನ್ಯಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಆತ್ಮಹತ್ಯೆಗೆ ದುಷ್ಪ್ರೇರಣೆ ನೀಡಿದ್ದು, ಇದೇ ಕಾರಣದಿಂದಲೇ ಸೌಜನ್ಯ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಎ.27ರಂದು ರಾತ್ರಿ ಗಂಡನ ಮನೆಯ ಒಳಗಡೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಂದೀಪ್ ದೂರಿನಲ್ಲಿ ತಿಳಿಸಿದ್ದಾರೆ.