ದೇಶ ರಕ್ಷಣೆಗಾಗಿ ಬಿಜೆಪಿ ಬೆಂಬಲಿಸಿ: ಕೋಟ ಶ್ರೀನಿವಾಸ ಪೂಜಾರಿ

Update: 2024-04-30 13:37 GMT

ಬೈಂದೂರು, ಎ.30: ಭಾರತ ದೇಶದ ಭದ್ರತೆ, ಆರ್ಥಿಕ ಸಬಲೀಕರಣ, ಭಯೋತ್ಪಾದನೆ ನಿವಾರಣೆಗಾಗಿ ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರನ್ನು ಬಹುಮತದಿಂದ ಗೆಲ್ಲಿಸಿ, ನರೇಂದ್ರ ಮೋದಿಯವರನ್ನು ದೇಶದ ಪ್ರಧಾನಿ ಯನ್ನಾಗಿ ಮಾಡಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಬೈಂದೂರು ವಿಧಾನಸಭಾ ಕ್ಷೇತ್ರದ ತಿರುಗಾಲು, ಬಿಜೂರು, ಶಿರೂರು, ಎಳಜಿ ಮುಂತಾದ ಗ್ರಾಮಗಳಲ್ಲಿ ಚುನಾವಣಾ ಪ್ರಚಾರಾರ್ಥ ಸಾರ್ವಜನಿಕ ಸಭೆಗಳಲ್ಲಿ ಅವರು ಮತದಾರರಿಗೆ ಮನವಿ ಮಾಡಿದರು.

ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಬಡವರ ಮನೆಗಳಲ್ಲಿ ಗ್ಯಾಸ್ ಮೂಲಕ ಅಡುಗೆ ಮಾಡಲು ಅವಕಾಶ ವಾಯಿತು. 11 ಕೋಟಿ 50 ಲಕ್ಷ ಶೌಚಾಲಯ ಭಾರತದಲ್ಲಿ ನಿರ್ಮಾಣವಾಯಿತು. ದೀನದಯಾಳ್ ಯೋಜನೆಯ ಮೂಲಕ ಕಡು ಬಡವರ ಮನೆಗೆ ವಿದ್ಯುತ್ ಸಂಪರ್ಕ ನೀಡಲಾಯಿತು. ಇದೆಲ್ಲದಕ್ಕಿಂತ ದೇಶದ 146 ಕೋಟಿ ಜನರಿಗೆ ಪ್ರಧಾನಿ ಮೋದಿ ಬದುಕಿನ ಗ್ಯಾರಂಟಿ ಕಟ್ಟಿಕೊಟ್ಟರು. ವಿಶ್ವದಲ್ಲಿ ಭಾರತ ಬಲಿಷ್ಠ ರಾಷ್ಟ್ರವನ್ನಾಗಿ ಮೂಡಿಬರುತ್ತದೆ ಎಂದರು.

ಈ ಸಂದರ್ಭದಲ್ಲಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಶೆಟ್ಟಿ ಮತ್ತು ಉಡುಪಿ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಪೃಥ್ವಿರಾಜ ಶೆಟ್ಟಿ ಬಿಲ್ಲಾಡಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News