ಮಕ್ಕಳ ಬೆಳವಣಿಗೆಗೆ ರಂಗಶಿಬಿರ ಪೂರಕ: ತಲ್ಲೂರು ಶಿವರಾಮ ಶೆಟ್ಟಿ
ಉಡುಪಿ, ಮೇ 4: ರಂಗ ಶಿಬಿರಗಳಲ್ಲಿ ತೊಡಗಿಸಿಕೊಂಡಾಗ ಮಕ್ಕಳ ಸರ್ವ ತೋಮುಖ ಬೆಳವಣಿಗೆಯಾಗುತ್ತದೆ. ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯ ವಂತರನ್ನಾಗಿಸುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.
ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿ ಕೊಂಡಿದ್ದ 15 ದಿನಗಳ ಮಕ್ಕಳ ರಂಗಶಿಬಿರ ತಂದಾನಿ.. ತಾನ.. ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ರಂಗ ಶಿಬಿರವು ಭವಿಷ್ಯದ ಬದುಕನ್ನು ರೂಪಿಸಲು ನೆರವಾಗುತ್ತದೆ. ನಟನೆ, ಹಿನ್ನೆಲೆ ಗಾಯನ ಸೇರಿದಂತೆ ವಿವಿಧ ಚಟುವಟಿಕೆಗಳು ಹಮ್ಮಿಕೊಂಡಾಗ ಅದರಲ್ಲಿ ಭಾಗವಹಿಸುವ ಮಕ್ಕಳಲ್ಲಿ ಯಾವ ವಿಭಾಗದಲ್ಲಿ ಪ್ರತಿಭೆ ಇದೆ ಎಂಬುದು ಗೊತ್ತಾಗುತ್ತದೆ. ಆ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಾಗ ಮುಂದೆ ಉತ್ತಮ ಕಲಾವಿದರಾಗಿ ಹೊರಹೊಮ್ಮಲಿದ್ದಾರೆ. ಎಲ್ಲ ಮಕ್ಕಳಲ್ಲಿ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಇಂಥ ರಂಗ ಶಿಬಿರಗಳನ್ನು ಅವುಗಳಿಗೆ ವೇದಿಕೆ ಯಾಗುತ್ತದೆ ಎಂದರು.
ಕೂಡಿ ಬಾಳುವ, ಒಗ್ಗಟ್ಟಿನಿಂದ ಸಾಗುವ ಪಾಠವನ್ನು ಇಂಥ ಶಿಬಿರಗಳು ಹೇಳಿಕೊಡುತ್ತವೆ. ಈ ಮಕ್ಕಳು ಮುಂದೆ ಆಯಾ ಕಾಲದ ಸನ್ನಿವೇಶ, ನಿರ್ಧಾರ ಮತ್ತು ಅವಕಾಶಗಳಿಗೆ ಅನುಗುಣವಾಗಿ ಬೇರೆ ಬೇರೆ ಕ್ಷೇತ್ರಗಳಿಗೆ ಹೋಗ ಬಹುದು. ರಂಗ ಶಿಬಿರದಲ್ಲಿ ಬಿತ್ತಿದ ಬೀಜದ ಫಲವಾಗಿ ಅವರು ಎಲ್ಲೇ ಹೋದರೂ ಉತ್ತಮ ಮನುಷ್ಯರಾಗಿ ಇರುತ್ತಾರೆ ಎಂದು ಅವರು ಅಭಿಪ್ರಾಯ ಪಟ್ಟರು.
ಮನೀಷ್ ಪಿಂಟೋ ನಿರ್ದೇಶನದಲ್ಲಿ ನಡೆದ ಈ ಶಿಬಿರದಲ್ಲಿ ರಂಗಕರ್ಮಿ ಗಳಾದ ವಿದ್ದು ಉಚ್ಚಿಲ್, ದಿವಾಕರ ಕಟೀಲ್, ಮೇಘನಾ ಕುಂದಾಪುರ, ರಾಘವ್ ಸೂರಿ, ಅಕ್ಷತ್ ಅಮೀನ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ರಾಧಿಕಾ ದಿವಾಕರ್ ಶಿಬಿರ ಸಂಘಟಿಸಿದರು. ಅಧ್ಯಕ್ಷತೆಯನ್ನು ಸುಮನಸಾ ಕೊಡವೂರು ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಕೊಡವೂರು ವಹಿಸಿದ್ದರು.
ವೇದಿಕೆಯಲ್ಲಿ ಸಂಚಾಲಕ ಭಾಸ್ಕರ ಪಾಲನ್, ವಿದ್ದು ಉಚ್ಚಿಲ್, ಮನೀಷ್ ಪಿಂಟೋ ಉಪಸ್ಥಿತರಿದ್ದರು. ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ 20 ಮಕ್ಕಳು ಪಾಲ್ಗೊಂಡಿದ್ದರು.