ಕುಂದಾಪುರ ಕುಣಿಯೋಣು ಬಾ ಮಕ್ಕಳ ಶಿಬಿರ ಉದ್ಘಾಟನೆ
ಕುಂದಾಪುರ, ಮೇ 4: ಮಕ್ಕಳ ಶಾಲಾ ರಜೆಯನ್ನು ಮನೆಯಲ್ಲಿ ಮೊಬೈಲ್ ನಿಂದ ಹೊರ ತಂದು ಮನಸ್ಸಿಗೆ ಆಹ್ಲಾದ ನೀಡುವ ಸೃಜನಶೀಲ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಇಂತಹ ಬೇಸಿಗೆ ಶಿಬಿರಗಳು ಪೂರಕವಾಗಲಿದೆ. ಬಾಲ್ಯದ ಸಹಜ ಸಂತಸ ಹಾಗೂ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಅವರ ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ಕುಂದಾಪುರ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಡಾ.ಸದಾನಂದ ಬೈಂದೂರು ಹೇಳಿದ್ದಾರೆ.
ಅಕ್ಷರ ಸಾಂಸ್ಕೃತಿಕ ಸಂಸ್ಥೆ ಕುಂದಾಪುರ ವತಿಯಿಂದ ಈಸ್ಟ್ ವೆಸ್ಟ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ಹಮ್ಮಿಕೊಳ್ಳಲಾದ ಕುಣಿಯೋಣು ಬಾ ಸೀಸನ್ 2 ಮಕ್ಕಳ ಬೇಸಿಗೆ ಶಿಬಿರವನ್ನು ತಮಟೆ ಬಡಿದು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಶಿಬಿರದ ನಿರ್ದೇಶಕ ಕುಂದಾಪುರ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಕಾರ್ಯದರ್ಶಿ ವಾಸುದೇವ ಗಂಗೇರ್ ಮಾತನಾಡಿದರು. ಅಧ್ಯಕ್ಷತೆಯನ್ನು ಶಿಬಿರದ ಪ್ರಮುಖರಾದ ಸುರೇಶ್ ಕಲ್ಲಾಗರ ವಹಿಸಿದ್ದರು.
ವೇದಿಕೆಯಲ್ಲಿ ಶಿಬಿರದ ಸಹ ನಿರ್ದೆಶಕಿ ಚಿನ್ನ ವಿ.ಗಂಗೇರ್, ಸಮುದಾಯ ಸಾಂಸ್ಕೃತಿಕ ಸಂಘಟನೆ ಕೋಶಾಧಿಕಾರಿ ಬಾಲಕೃಷ್ಣ ಕೆ.ಎಂ., ಸಮುದಾಯದ ಹಿರಿಯರಾದ ಉತ್ಕಲ ಕೆ. ಉಪಸ್ಥಿತರಿದ್ದರು. ಸಾವಿತ್ರಿ, ಸೃಷ್ಟಿ ಹಾಗೂ ದಕ್ಷ ಸಹಕರಿಸಿದರು. ಶಿಬಿರದ ಕಾರ್ಯದರ್ಶಿ ರವಿ ವಿ.ಎಂ. ಸ್ವಾಗತಿಸಿ, ವಂದಿಸಿದರು.