ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು
ಮಲ್ಪೆ, ಮೇ 8: ಸಮುದ್ರ ಮಧ್ಯೆ ಮೀನುಗಾರಿಕೆ ನಡೆಸುತ್ತಿದ್ದ ಬೋಟಿನಿಂದ ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಮೇ 7ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ಕುಂದಾಪುರ ದೇವಲ್ಕುಂದ ಗ್ರಾಮದ ರಾಘವೇಂದ್ರ(45) ಎಂದು ಗುರುತಿಸಲಾಗಿದೆ. ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಬೋಟಿನಲ್ಲಿ ಕೆಲಸ ಮಾಡಿಕೊಂಡಿದ್ದ ಇವರು, ಮೇ 7ರಂದು ರಾತ್ರಿ ಮೀನುಗಾರಿಕೆಗಾಗಿ ಬೋಟಿನಲ್ಲಿ ಸಮುದ್ರಕ್ಕೆ ತೆರಳಿದ್ದರು.
ಸುಮಾರು 10 ಮಾರು ದೂರ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಬಲೆ ಬಿಡುತ್ತಿರುವಾಗ ಸಮುದ್ರದ ಅಬ್ಬರದ ಅಲೆಗೆ ಬೋಟು ಅಲುಗಾಡಿತ್ತೆನ್ನ ಲಾಗಿದೆ. ಇದರಿಂದ ರಾಘವೇಂದ್ರ ನೀರಿಗೆ ಬಿದ್ದು ತೀವ್ರವಾಗಿ ಅಸ್ವಸ್ಥಗೊಂಡರು. ಕೂಡಲೇ ಇವರನ್ನು ಇತರ ಮೀನುಗಾರರು ಮೇಲಕ್ಕೆ ಎತ್ತಿ, ದಡಕ್ಕೆ ತಂದು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಪರೀಕ್ಷಿಸಿದ ವೈಧ್ಯರು ರಾಘವೇಂದ್ರ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.