ಕೊಟ್ಟೂರು (ವಿಜಯನಗರ), ಸೆ.19: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಸರಿಯಾದ ದಾಖಲೆಗಳನ್ನು ಸಲ್ಲಿಸದ ಮತದಾರರಿಗೆ ನೋಟಿಸ್ ನೀಡಲಾಗಿದ್ದು, ಹಂತ ಹಂತವಾಗಿ ವಿಚಾರಣೆ ನಡೆಸಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದೆ ಎಂದು ತಹಶೀಲ್ದಾರ್ ಅಮರೇಶ್ ಜಿ.ಕೆ. ತಿಳಿಸಿದ್ದಾರೆ.

ಕೋಗಳಿ ಹೋಬಳಿಯ ವಿವಿಧ ಗ್ರಾಮಗಳು ಹಾಗೂ ಕೊಟ್ಟೂರು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಪರಿಶೀಲನಾ ಕಾರ್ಯ ಭರದಿಂದ ನಡೆಯುತ್ತಿದೆ. ಮತದಾರರು ಸಲ್ಲಿಸಿದ ದಾಖಲೆಗಳು ಸೂಕ್ತವಾಗಿದ್ದು, ವಿವರಗಳು ಹೊಂದಾಣಿಕೆಯಾದಲ್ಲಿ ತಕ್ಷಣವೇ ಅನುಮೋದನೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ವಿಚಾರಣೆ ವೇಳೆ ತಹಶೀಲ್ದಾರರ ಭಾವಚಿತ್ರ ಹಾಗೂ ಮತದಾರರ ಸಹಿ ಇರುವ ದಾಖಲೆಯ ಫೋಟೋವನ್ನು ಸ್ಥಳದಲ್ಲೇ BLO ಆ್ಯಪ್‌ಗೆ ಅಪ್‌ಲೋಡ್ ಮಾಡಲಾಗುತ್ತಿದೆ. ದಾಖಲೆಗಳಲ್ಲಿ ಕೊರತೆ ಕಂಡುಬಂದರೆ ಅಗತ್ಯ ದಾಖಲೆಗಳೊಂದಿಗೆ ಮತ್ತೊಮ್ಮೆ ಹಾಜರಾಗುವಂತೆ ಮತದಾರರಿಗೆ ಸೂಚಿಸಲಾಗುತ್ತಿದೆ.

ಕಚೇರಿಗೆ ಬರಲು ಸಾಧ್ಯವಾಗದ ಹಿರಿಯ ನಾಗರಿಕರು, ವಿಕಲಚೇತನರು ಹಾಗೂ ಅನಾರೋಗ್ಯ ಪೀಡಿತ ಮತದಾರರ ಮನೆಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ದಾಖಲೆ ಪರಿಶೀಲನೆ ನಡೆಸುತ್ತಿದೆ.

ಕೊಟ್ಟೂರಿನ ಹಳೇ ಊರಮ್ಮ ದೇವಸ್ಥಾನದ ಸಮೀಪದ ಮತಗಟ್ಟೆ ಸಂಖ್ಯೆ 254 ವ್ಯಾಪ್ತಿಯ 80 ವರ್ಷದ ಎಂ. ಕೊಟ್ರೇಶಪ್ಪ ಹಾಗೂ 45 ವರ್ಷದ ವಿಕಲಚೇತನರಾದ ಎಂ. ವಾಣಿಶ್ರೀ ಅವರ ಮನೆಗಳಿಗೆ ತಹಶೀಲ್ದಾರ್ ಅಮರೇಶ್ ಜಿ.ಕೆ. ಖುದ್ದು ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ಅನುಮೋದನೆ ನೀಡಿದರು.

ವಯೋವೃದ್ಧರು, ವಿಕಲಚೇತನರು ಅಥವಾ ಅನಾರೋಗ್ಯದಿಂದ ಬಳಲುತ್ತಿರುವ ಮತದಾರರು ವಿಚಾರಣೆಗೆ ಕಚೇರಿಗೆ ಬರಲು ಅಸಾಧ್ಯವಾದರೆ, ಅವರ ಮನೆಗೇ ತೆರಳಿ ದಾಖಲೆ ಪರಿಶೀಲಿಸುವ ವ್ಯವಸ್ಥೆ ಮುಂದುವರಿಯಲಿದೆ ಎಂದು ತಹಶೀಲ್ದಾರ್ ಸ್ಪಷ್ಟಪಡಿಸಿದರು.

ಪರಿಶೀಲನಾ ಕಾರ್ಯದಲ್ಲಿ ಚುನಾವಣೆ ವಿಷಯ ನಿರ್ವಾಹಕ ಕೆ. ಮುಸ್ತಾಫ್, ಪಟ್ಟಣ ಪಂಚಾಯಿತಿ ಸಿಬ್ಬಂದಿ ಅಂಗಡಿ ಮಂಜುನಾಥ, ಬಿಎಲ್‌ಒ ಶಿವಾನಿ ಹಾಗೂ ಶಿಕ್ಷಕ ಮಹೇಶ್ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor