ಪ್ರಜಾಪ್ರಭುತ್ವ ಸಂವಿಧಾನ ಮತ್ತು ಮಾನವ ಹಕ್ಕುಗಳು

Update: 2023-12-10 04:39 GMT
Editor : Ismail | Byline : ನಾ. ದಿವಾಕರ

ಭಾರತದ ಸಂದರ್ಭದಲ್ಲಿ ಬಹುಸಂಖ್ಯಾತರಾದ ಮಹಿಳೆಯರು-ಅಲ್ಪಸಂಖ್ಯಾತರು-ಆದಿವಾಸಿಗಳು-ಅಸ್ಪಶ್ಯರು ಹಾಗೂ ತಳಸಮುದಾಯಗಳು ನಿರಂತರ ಶೋಷಣೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ನಾವು ಮತ್ತೊಂದು ಮಾನವ ಹಕ್ಕುಗಳ ದಿನವನ್ನು ಆಚರಿಸುತ್ತಿದ್ದೇವೆ. ಬಲಿಪೀಠದಲ್ಲಿರುವ ಹೆಣ್ಣು ಭ್ರೂಣಗಳನ್ನೂ ಒಳಗೊಂಡಂತೆ ಈ ‘ಮಾನವ’ ಕುಲದ ಘನತೆ ಮತ್ತು ಜೀವಿಸುವ ಹಕ್ಕು ನಮ್ಮ ಭವಿಷ್ಯದ ಘೋಷವಾಕ್ಯವಾಗಬೇಕಿದೆ. ಹಾಗಾದರೆ ಮಾನವ ಹಕ್ಕುಗಳ ದಿನದ ಆಚರಣೆಯೂ ಸಾರ್ಥಕವಾದೀತು.

ವಿಶ್ವ ಮಾನವ ಸಮಾಜ ಡಿಸೆಂಬರ್ 10ರಂದು ಮತ್ತೊಂದು ‘‘ಮಾನವ ಹಕ್ಕು ದಿನ’’ ಆಚರಿಸುತ್ತಿದೆ. ಎರಡು ಮಹಾಯುದ್ಧಗಳ ನಂತರ ತಳಮಟ್ಟದ ಜನಸಾಮಾನ್ಯರ ಅಭಿವ್ಯಕ್ತಿ ಹಾಗೂ ಬದುಕುವ ಹಕ್ಕುಗಳ ರಕ್ಷಣೆಗಾಗಿ ವಿಶ್ವ ಸಮುದಾಯ ‘‘ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ’’(ಯುಡಿಎಚ್ಆರ್)ಯನ್ನು ಅಧಿಕೃತವಾಗಿ ಘೋಷಿಸಿ 75 ವರ್ಷಗಳು ಸಂದಿರುವ ಈ ವಿಶೇಷ ಸಂದರ್ಭದಲ್ಲಿ ‘‘ಎಲ್ಲರಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯ’’ ಎಂಬ ಘೋಷಣೆಯೊಂದಿಗೆ ನಾಗರಿಕ ಜಗತ್ತು ತನ್ನ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಮುಂದಾಗಿದೆ. ಅನ್ನಾಹಾರ, ಶಿಕ್ಷಣ, ಉದ್ಯೋಗ, ಆರೋಗ್ಯ, ವಸತಿ ಹಾಗೂ ಬದುಕುವ ಹಕ್ಕುಗಳನ್ನು ಮೂಲತಃ ಮಾನವ ಹಕ್ಕುಗಳೆಂದು ವ್ಯಾಖ್ಯಾನಿಸಲಾಗುತ್ತದೆ. ಯುಡಿಎಚ್ಆರ್ಘೋಷಣೆಯೂ ಇದನ್ನೇ ಪುನರುಚ್ಚರಿಸುತ್ತದೆ. ಇದರೊಟ್ಟಿಗೆ ರಾಜಕೀಯ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯವೂ ಪ್ರಸಕ್ತ ಸನ್ನಿವೇಶದಲ್ಲಿ ಹೆಚ್ಚು ಚರ್ಚಿತ ವಿಷಯವಾಗಿದೆ.

ಮೂಲತಃ ಮಾನವ ಹಕ್ಕುಗಳು ಎನ್ನುವ ಪರಿಕಲ್ಪನೆಯನ್ನು ಪ್ರಾಚೀನ ಸಮಾಜದಲ್ಲೇ ಗುರುತಿಸುವ ಪ್ರಯತ್ನಗಳ ನಡುವೆಯೇ ಆಧುನಿಕ ಮಾನವ ಜಗತ್ತು ತನ್ನ ಮಾನವೀಯ ನೆಲೆಯ ಹಕ್ಕುಗಳಿಗಾಗಿ ಇಂದಿಗೂ ಹೋರಾಡುತ್ತಿರುವುದು ವಿಡಂಬನೆಯಾದರೂ ಸತ್ಯ. ಮಾನವ ಸಮಾಜದ ಅಭ್ಯುದಯದ ಹಾದಿಯನ್ನು ಗಮನಿಸಿದಾಗ ಆಧುನಿಕ ಮಾನವ ತನ್ನ ಸಾಮಾಜಿಕ-ಸಾಂಸ್ಕೃತಿಕ ಬದುಕಿನಲ್ಲಿ ನಿಸರ್ಗ ಒದಗಿಸುವ ಸಂಪನ್ಮೂಲಗಳ ಮೇಲಿನ ಒಡೆತನವನ್ನು ಕಳೆದುಕೊಂಡಂತೆಲ್ಲಾ ಅವನ ಜೀವಿಸುವ ಹಕ್ಕುಗಳೂ ನಿರ್ಬಂಧಗಳಿಗೆ ಒಳಗಾಗಿರುವುದನ್ನು ಗುರುತಿಸಬಹುದು. ಉತ್ಪಾದನಾ ಮೂಲಗಳು ಹಾಗೂ ಸಾಧನಗಳ ಮೇಲಿನ ಒಡೆತನದ ಮೂಲಕವೇ ಮಾನವ ಸಮಾಜದಲ್ಲಿ ಸೃಷ್ಟಿಯಾದ ಆಳ್ವಿಕೆಯ ಪರಂಪರೆ ಗುಲಾಮಗಿರಿ ಪದ್ಧತಿ, ಊಳಿಗಮಾನ್ಯ ವ್ಯವಸ್ಥೆ, ರಾಜಪ್ರಭುತ್ವ ಹಾಗೂ ಪ್ರಜಾಪ್ರಭುತ್ವದ ಮೂಲಕ ಇದೀಗ ನವ ಉದಾರವಾದದ ಡಿಜಿಟಲ್ ಔದ್ಯಮಿಕ ಆಳ್ವಿಕೆಯವರೆಗೂ ವಿಸ್ತರಿಸಿದೆ.

ಆಳ್ವಿಕೆಯೊಡನೆ ಬದಲಾಗದ ಯಜಮಾನಿಕೆ

ಇತಿಹಾಸದ ಪ್ರತಿಯೊಂದು ಹಂತದಲ್ಲೂ ನಿಸರ್ಗದತ್ತ ಸಂಪನ್ಮೂಲಗಳು ಹಾಗೂ ಉತ್ಪಾದಿತ ಸಂಪತ್ತಿನ ಮೇಲಿನ ಯಜಮಾನಿಕೆ ಮತ್ತು ಒಡೆತನವನ್ನೇ ಅವಲಂಬಿಸಿ ಮಾನವ ಸಮಾಜವನ್ನು ನಿಯಂತ್ರಿಸುವ ಆಳ್ವಿಕೆಯ ಪದ್ಧತಿಗಳು, ತಳಮಟ್ಟದ ಸಮಾಜದಲ್ಲಿ ಬದುಕು ಕಟ್ಟಿಕೊಳ್ಳುವ ಸಾಮಾನ್ಯ ಜನತೆಯ ‘ಮಾನವ ಹಕ್ಕುಗಳನ್ನು’ ನಿರ್ಬಂಧಕ್ಕೊಳಪಡಿಸುತ್ತಾ, ನಿಯಂತ್ರಿಸುತ್ತಾ ಬಂದಿರುವುದನ್ನು ಗುರುತಿಸಬಹುದು. ರಾಜಪ್ರಭುತ್ವ-ಊಳಿಗಮಾನ್ಯ ವ್ಯವಸ್ಥೆಯಲ್ಲಿ ಸಂಪತ್ತಿನ ಕ್ರೋಡೀಕರಣ-ಒಡೆತನ ಮತ್ತು ಬಳಕೆಯ ಹಕ್ಕುಗಳನ್ನು ವಶಪಡಿಸಿಕೊಂಡಿದ್ದ ಆಳ್ವಿಕೆಗಳು ತಳಮಟ್ಟದ ದುಡಿಯುವ ಜನತೆಯ ಜೀವನ-ಜೀವನೋಪಾಯ ಹಾಗೂ ಬೇಕು ಬೇಡಗಳನ್ನೂ ನಿರ್ಬಂಧಕ್ಕೊಳಪಡಿಸಿರುವುದನ್ನು ಇತಿಹಾಸದಲ್ಲಿ ಕಾಣಬಹುದು. ಈ ಹಂತವನ್ನು ದಾಟಿ ಪ್ರಜಾಪ್ರಭುತ್ವವನ್ನು ಅಪ್ಪಿಕೊಂಡಿರುವ ಆಧುನಿಕ ನಾಗರಿಕ ಜಗತ್ತು, ಸಮಸ್ತ ಮಾನವರಿಗೆ ಸಮಾನ ಹಕ್ಕುಗಳನ್ನು ಪ್ರತಿಪಾದಿಸುವ ಮೂಲಕ ‘ಮಾನವ ಹಕ್ಕು’ ಗಳಿಗೆ ಒಂದು ರಾಜಕೀಯ-ಸಾಮಾಜಿಕ ಆಯಾಮವನ್ನು ನೀಡಿದೆ.

ಆದರೆ ಜಗತ್ತು ಒಪ್ಪಿಕೊಂಡಿರುವ ಪ್ರಜಾಪ್ರಭುತ್ವ ಆಳ್ವಿಕೆಯಲ್ಲೂ ತಳಮಟ್ಟದ ಜನಸಾಮಾನ್ಯರ ಮೂಲಭೂತ ಹಕ್ಕುಗಳು ಆಳುವವರು ಕೊಡುವ ಒಂದು ಬಳುವಳಿ ಎಂದೇ ಪರಿಗಣಿಸುವ ರೀತಿಯಲ್ಲಿ ಜಾಗತಿಕ ರಾಜಕಾರಣ ರೂಪುಗೊಳ್ಳುತ್ತಿದೆ. ಭಾರತವೂ ಇದಕ್ಕೆ ಹೊರತಾದುದಲ್ಲ. ನಿಸರ್ಗ ಸಂಪತ್ತಿನ ಮೇಲೆ ಪ್ರತಿಯೊಬ್ಬ ಮನುಷ್ಯನಿಗೂ ಸಮಾನ ಹಕ್ಕಿದೆ ಎಂಬ ಉದಾತ್ತ ಪರಿಕಲ್ಪನೆಯನ್ನು ಆಧುನಿಕ ಪ್ರಜಾಪ್ರಭುತ್ವಗಳು ಔಪಚಾರಿಕವಾಗಿ ಸ್ವೀಕರಿಸಿದರೂ, ಜನರಿಂದಲೇ ಚುನಾಯಿತವಾಗುವ ಪ್ರಭುತ್ವಗಳೂ ಈ ಹಕ್ಕುಗಳನ್ನು ಕಸಿದುಕೊಳ್ಳುವ ಮಾರ್ಗಗಳನ್ನು ಅರಸುತ್ತಲೇ ಇರುತ್ತವೆ. ನವ ಉದಾರವಾದ ಹಾಗೂ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಈ ಮಾರ್ಗದಲ್ಲಿ ಔದ್ಯಮಿಕ ಜಗತ್ತು ತನ್ನ ಊಳಿಗವನ್ನು ಸ್ಥಾಪಿಸಲು ಚುನಾಯಿತ ಸರಕಾರಗಳೇ ಭೂಮಿಕೆಯನ್ನೂ ಒದಗಿಸುತ್ತವೆ. ಈ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳ 75ನೆಯ ವರ್ಷವನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಬಂಡವಾಳಶಾಹಿಯ ಆಧಿಪತ್ಯ

ಆಹಾರ, ಆರೋಗ್ಯ, ಶಿಕ್ಷಣ, ಉದ್ಯೋಗ, ವಸತಿ ಹಾಗೂ ಘನತೆಯ ಬದುಕು ಈ ಹಕ್ಕುಗಳನ್ನು ಭಾರತದ ಸಂವಿಧಾನವು ಸಮಸ್ತ ಪ್ರಜೆಗಳಿಗೂ ನೀಡಿದ್ದರೂ ಇಂದಿಗೂ ಭಾರತದಲ್ಲಿ ಹಸಿವು, ಬಡತನ, ದಾರಿದ್ರ್ಯ, ಅನಕ್ಷರತೆ, ಅಪೌಷ್ಟಿಕತೆ, ವಸತಿಹೀನತೆ ತಾಂಡವವಾಡುತ್ತಿರುವುದು ನಮ್ಮ ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡುತ್ತದೆ. 75 ವರ್ಷಗಳ ಆಳ್ವಿಕೆಯಲ್ಲಿ ಅನುಸರಿಸಿರುವ ಸ್ವಾವಲಂಬನೆಯ ಹಾದಿಯನ್ನು ಬದಿಗೊತ್ತಿ ನವ ಉದಾರವಾದಿ ಮಾರುಕಟ್ಟೆ ಆರ್ಥಿಕ ನೀತಿಗಳನ್ನು ಅಪ್ಪಿಕೊಂಡಿರುವ ಭಾರತದ ಆಳುವ ವ್ಯವಸ್ಥೆ ಇಂದು ತಳಮಟ್ಟದ ಸಮುದಾಯಗಳನ್ನು ಮತ್ತೊಮ್ಮೆ ಪರಾವಲಂಬನೆಗೆ ದೂಡುತ್ತಿದೆ. ಕಾರ್ಪೊರೇಟ್ ಮಾರುಕಟ್ಟೆಯ ಔದ್ಯಮಿಕ ಹಿತಾಸಕ್ತಿಗಳು ಮಾನವ ಹಕ್ಕುಗಳ ಮೂಲ ತಳಹದಿಯನ್ನೇ ಅಲುಗಾಡಿಸುತ್ತಿದ್ದು ಇಂದು ಶತಮಾನಗಳಿಂದ ಅರಣ್ಯವನ್ನೇ ನಂಬಿ ಬದುಕಿರುವ ಬುಡಕಟ್ಟು ಸಮುದಾಯಗಳೂ ನಿರ್ಗತಿಕತೆಯತ್ತ ಸಾಗುತ್ತಿರುವುದು ವರ್ತಮಾನದ ದುರಂತವಲ್ಲವೇ?

ಕಾರ್ಪೊರೇಟ್ ಮಾರುಕಟ್ಟೆ ಹಾಗೂ ಬಂಡವಾಳಶಾಹಿಯು ಸಂಪತ್ತು ಮತ್ತು ಸಂಪನ್ಮೂಲಗಳ ಮೇಲೆ ಸಾಧಿಸುವ ಒಡೆತನ ಹಾಗೂ ವ್ಯಾವಹಾರಿಕ ಯಜಮಾನಿಕೆಯನ್ನು ಅನುಮೋದಿಸುವ ಮೂಲಕ ಸರಕಾರಗಳು ಜನಸಾಮಾನ್ಯರ ಭೂಮಿಯ ಹಕ್ಕುಗಳನ್ನೂ ಕಸಿದುಕೊಳ್ಳುತ್ತಿರುವುದನ್ನು ಆದಿವಾಸಿಗಳ ನಿರಂತರ ಸಂಘರ್ಷಗಳ ನಡುವೆ ಗುರುತಿಸಬಹುದು. ಪ್ರಜಾಪ್ರಭುತ್ವ ಆಳ್ವಿಕೆಯಲ್ಲಿ ಪ್ರತಿಯೊಬ್ಬ ಪ್ರಜೆಗೂ ಕನಿಷ್ಠ ಪೌಷ್ಟಿಕ ಆಹಾರ, ಪ್ರಾಥಮಿಕ ಶಿಕ್ಷಣ, ಸುಸ್ಥಿರ ಉದ್ಯೋಗ, ಉತ್ತಮ ಆರೋಗ್ಯ ಹಾಗೂ ವಸತಿ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಭಾರತ ಇನ್ನೂ ಬಹುದೂರ ಸಾಗಬೇಕಿದೆ. ಸಾಂವಿಧಾನಿಕ ಆಶಯಗಳ ಹೊರತಾಗಿಯೂ ಜನರ ಆಹಾರದ ಹಕ್ಕನ್ನು ಸಾಂಸ್ಕೃತಿಕ ನೆಲೆಯಲ್ಲಿ, ಧಾರ್ಮಿಕ ಚೌಕಟ್ಟುಗಳಲ್ಲಿ ನಿರ್ಬಂಧಿಸುವ ಅಥವಾ ನಿಯಂತ್ರಿಸುವ ಸಾಂಸ್ಕೃತಿಕ ರಾಜಕಾರಣವು ಮಾನವ ಹಕ್ಕುಗಳ ಮೂಲ ಕಲ್ಪನೆಯನ್ನೇ ಅಣಕಿಸುವಂತಿದೆ. ಕೆಲವು ರಾಜ್ಯಗಳಲ್ಲಿ ಅಧಿಕೃತವಾಗಿ ಜಾರಿಯಾಗಿರುವ ಬುಲ್ಡೋಜರ್ ನೀತಿಯು, ಆದಿವಾಸಿಗಳನ್ನು ಅರಣ್ಯಗಳಿಂದ ಉಚ್ಚಾಟಿಸಿದ ರೀತಿಯಲ್ಲೇ, ನಗರವಾಸಿಗಳನ್ನೂ ವಸತಿಹೀನರನ್ನಾಗಿ ಮಾಡುತ್ತಿದೆ. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದ್ದರೂ, ರಾಜಕೀಯ ಪಕ್ಷಗಳು ನಿರ್ಲಿಪ್ತವಾಗಿರುವುದು ಅಚ್ಚರಿ ಮೂಡಿಸುತ್ತದೆ.

ಮಾನವ ಸಮಾಜಕ್ಕೆ ಸ್ವಾಭಾವಿಕವಾಗಿ ಒದಗಬೇಕಾದ ಪ್ರಾಥಮಿಕ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳು ಇಂದು ಚುನಾಯಿತ ಸರಕಾರಗಳು ಒದಗಿಸಬೇಕಾದ ಸವಲತ್ತುಗಳಾಗಿ ಪರಿಣಮಿಸಿವೆ. ಈ ಕ್ಷೇತ್ರಗಳಲ್ಲಿ ಬಂಡವಾಳ ಹೂಡುವ ಮೂಲಕ ನೈಸರ್ಗಿಕ ಹಾಗೂ ಉತ್ಪಾದಿತ ಸಂಪತ್ತಿನ ಮೇಲೂ ಒಡೆತನ ಸಾಧಿಸುವ ಬಂಡವಾಳಶಾಹಿಯು ತಳಮಟ್ಟದ ಸಮಾಜವನ್ನು ಈ ಸೌಲಭ್ಯಗಳಿಂದ ವಂಚಿಸುತ್ತಲೇ ಬಂದಿವೆ. ಜನತೆಗೆ ಉದ್ಯೋಗ ಒದಗಿಸುವುದು ಆಳ್ವಿಕೆಯ ಜವಾಬ್ದಾರಿಯಲ್ಲ ಎಂಬ ನವ ಉದಾರವಾದದ ನೀತಿಯಿಂದ ಶಿಕ್ಷಣ ವಂಚಿತ ಸಮುದಾಯಗಳು ಉದ್ಯೋಗ ವಂಚಿತವೂ ಆಗುತ್ತಿರುವುದನ್ನು ನೋಡುತ್ತಲೇ ಇದ್ದೇವೆ. ಭಾರತದಲ್ಲಿ ಹೆಚ್ಚಾಗುತ್ತಿರುವ ಆರ್ಥಿಕ ಅಸಮಾನತೆ, ಬಡವ ಸಿರಿವಂತರ ನಡುವಿನ ಅಂತರವನ್ನು ಹೆಚ್ಚಿಸುತ್ತಿರುವುದೇ ಅಲ್ಲದೆ ಸಾಮಾಜಿಕ ಅಸಮಾನತೆಯನ್ನೂ ಸೃಷ್ಟಿಸುತ್ತಿದೆ. ಜಾತಿ, ಮತ ಹಾಗೂ ಪ್ರಾದೇಶಿಕ ನೆಲೆಗಳಲ್ಲಿ ಈ ಅಸಮಾನತೆಗಳು ವಿಶಾಲ ಸಮಾಜದ ದೃಷ್ಟಿಯಲ್ಲಿ ಸ್ವೀಕೃತವೂ ಆಗಿಬಿಟ್ಟಿದೆ.

ಹೆಣ್ತನದ ಘನತೆಯ ಹಕ್ಕು

ಅಮೃತ ಕಾಲದಲ್ಲಿ ಸಾಗುತ್ತಿರುವ ನವ ಭಾರತದಲ್ಲಿ ಮಾನವ ಹಕ್ಕುಗಳನ್ನು ಸ್ತ್ರೀವಾದಿ ನೆಲೆಯಲ್ಲಿ, ಶೋಷಿತ ತಳಸಮುದಾಯಗಳ ನೆಲೆಯಲ್ಲಿ ನಿಂತು ನೋಡಿದಾಗ ಆಘಾತಕಾರಿ ಬೆಳವಣಿಗೆಗಳು ಕಂಡುಬರುತ್ತವೆ. 2016-20ರ ಐದು ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲೇ ಲಿಂಗಾನುಪಾತವು ಸತತವಾಗಿ ಕುಸಿಯುತ್ತಿರುವುದು ಜೀವಿಸುವ ಹಕ್ಕುಗಳನ್ನೇ ಕಸಿದುಕೊಳ್ಳುತ್ತಿರುವುದರ ಸಂಕೇತವಾಗಿಯೇ ಕಾಣಬೇಕಿದೆ. ಎನ್ಎಫ್ಎಚ್ಎಸ್ ಮತ್ತು ಎನ್ಬಿಆರ್ಸಿ ಒದಗಿಸಿರುವ ದತ್ತಾಂಶಗಳ ಅನುಸಾರ ಕರ್ನಾಟಕದ 16 ಜಿಲ್ಲೆಗಳಲ್ಲಿ ಲಿಂಗಾನುಪಾತದ ಕುಸಿತವನ್ನು ಗುರುತಿಸಬಹುದಾಗಿದೆ. ಆರ್ಥಿಕವಾಗಿ ಸಮೃದ್ಧವಾದ ಉತ್ತರಕನ್ನಡ (1000: 724), ಹಾಸನ (1000-872), ದಾವಣಗೆರೆ (1000-797) ಮುಂತಾದ ಜಿಲ್ಲೆಗಳಲ್ಲಿ ಕುಸಿದಷ್ಟೇ ಪ್ರಮಾಣದಲ್ಲಿ ಬೌದ್ಧಿಕವಾಗಿ, ಶೈಕ್ಷಣಿಕವಾಗಿ ಸಮೃದ್ಧವಾದ ದಕ್ಷಿಣ ಕನ್ನಡದಲ್ಲೂ(1000-1038) ಕುಸಿದಿರುವುದು, ಹೆಣ್ಣು ಜೀವದ ಬಗ್ಗೆ ವಿಶಾಲ ಸಮಾಜದಲ್ಲಿರುವ ಧೋರಣೆ ಹಾಗೂ ಇದನ್ನು ನಿಯಂತ್ರಿಸುವ ಪಿತೃಪ್ರಧಾನ ವ್ಯವಸ್ಥೆಯ ಪ್ರತೀಕವಾಗಿಯೇ ಕಾಣುತ್ತದೆ.

ಅಂದರೆ ಉತ್ತಮ ಶಿಕ್ಷಣ, ಸಂಪನ್ಮೂಲಗಳ ಲಭ್ಯತೆ ಹಾಗೂ ಉತ್ಪಾದನೆಯ ಹೆಚ್ಚಳ ಇದಾವುದೂ ಪಿತೃಪ್ರಧಾನ ವ್ಯವಸ್ಥೆಯ ಸಂಕೋಲೆಗಳನ್ನು ಸಡಿಲಗೊಳಿಸಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಸಕ್ಕರೆ ನಾಡು ಎಂದೇ ಖ್ಯಾತಿ ಪಡೆದಿರುವ ಮಂಡ್ಯ ಜಿಲ್ಲೆಯಲ್ಲಿ ಸಿಹಿ ಉತ್ಪಾದಿಸುವ ಆಲೆಮನೆಯೇ ಮಹಿಳಾ ಸಂವೇದನೆಯ ದೃಷ್ಟಿಯಿಂದ ಬೇವಿನ ಕಹಿಯಾಗಿ ಪರಿಣಮಿಸಿರುವುದು ಹೆಣ್ಣು ಭ್ರೂಣ ಹತ್ಯೆಯ ಪ್ರಕರಣದಲ್ಲಿ ಹೊರಬಿದ್ದಿದೆ. ಕಳೆದ ಎರಡು ವರ್ಷಗಳಲ್ಲಿ ಸಾವಿರಾರು ಹೆಣ್ಣು ಭ್ರೂಣಗಳನ್ನು ಬಲಿಪಡೆದಿರುವ ಸಮಾಜವು ಮಾನವ ಹಕ್ಕುಗಳ ಬಗ್ಗೆ ಮಾತನಾಡುವ ನೈತಿಕತೆಯನ್ನಾದರೂ ಉಳಿಸಿಕೊಳ್ಳಲು ಸಾಧ್ಯವೇ? ಯೋಚಿಸಬೇಕಿದೆ. ‘‘ಪ್ರತಿಯೊಬ್ಬ ಮನುಷ್ಯನಿಗೂ ಬದುಕುವ ಮತ್ತು ಮಾನವ ಘನತೆಯ ಹಕ್ಕು ಇರಬೇಕು; ಗರ್ಭಧಾರಣೆಯ ಕ್ಷಣದಿಂದ ಭ್ರೂಣದ ಜೀವವನ್ನು ರಕ್ಷಿಸಲಾಗುತ್ತದೆ. ಹುಟ್ಟಲಿರುವ ಮಗುವನ್ನು ಕಾನೂನಿನಿಂದ ಸ್ಥಾಪಿಸಲಾದ ಮಿತಿಯೊಳಗೆ ನೀಡಲಾದ ಎಲ್ಲಾ ಹಕ್ಕುಗಳಿಗಾಗಿ ಜನಿಸಿದವರು ಎಂದು ಪರಿಗಣಿಸಲಾಗುತ್ತದೆ’’ ಎಂದು ಅಂತರ್ರಾಷ್ಟ್ರೀಯ ಒಡಂಬಡಿಕೆಗಳಲ್ಲಿ ಹೇಳಲಾಗುತ್ತದೆ. ಆದರೆ 1990ರ ದಶಕದಿಂದ ಭಾರತದಲ್ಲಿ 10 ದಶಲಕ್ಷಕ್ಕೂ ಹೆಚ್ಚು ಹೆಣ್ಣು ಭ್ರೂಣಗಳನ್ನು ಕಾನೂನುಬಾಹಿರವಾಗಿ ಗರ್ಭಪಾತ ಮಾಡಿರಬಹುದು ಮತ್ತು ಹೆಣ್ಣು ಭ್ರೂಣ ಹತ್ಯೆಯಿಂದಾಗಿ ವಾರ್ಷಿಕವಾಗಿ ಲಕ್ಷಗಟ್ಟಲೆ ಹುಡುಗಿಯರು ನಷ್ಟವಾಗುತ್ತಿದ್ದಾರೆ ಎಂದು ಕೆಲವು ಸಂಶೋಧನೆಗಳು ಹೇಳುತ್ತಿವೆ.

ಈ ದತ್ತಾಂಶಗಳನ್ನು ಬದಿಗಿಟ್ಟು ನೋಡಿದಾಗಲೂ ನಮ್ಮ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಜೀವ ಅಪಥ್ಯವಾಗಿರುವುದು ಭ್ರೂಣಾವಸ್ಥೆಯಿಂದಲೇ ಕಾಣಬಹುದಾದ ವಿದ್ಯಮಾನ. ಹಾಗಾಗಿಯೇ ಜೀವ ತಳೆಯುವ ಹೆಣ್ಣುಗಳೂ ಸಹ ನಿರಂತರ ಶೋಷಣೆ, ಅತ್ಯಾಚಾರ, ದೌರ್ಜನ್ಯಕ್ಕೊಳಗಾಗುತ್ತಿರುವುದನ್ನು ಕಣ್ಣಾರೆ ನೋಡುತ್ತಿದ್ದೇವೆ. ಪೊಕ್ಸೋ ಕಾಯ್ದೆ, ಅಂದರೆ ಅಪ್ರಾಪ್ತ ವಯಸ್ಸಿನವರ ಮೇಲೆ ನಡೆಯುವ ಲೈಂಗಿಕ ಅತ್ಯಾಚಾರಗಳನ್ನು ತಡೆಗಟ್ಟಲು ರೂಪಿಸಿರುವ ಒಂದು ಬಲಿಷ್ಠ ಕಾನೂನು ಸಹ ನಮ್ಮ ದೇಶದ ಶೋಷಿತ ಹೆಣ್ಣುಮಕ್ಕಳನ್ನು ಕಾಪಾಡಲು ಸಾಧ್ಯವಾಗ ದಿರುವುದು ದುರಂತ ಅಲ್ಲವೇ? 2022ರಲ್ಲಿ ದೇಶಾದ್ಯಂತ 69,546 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಅಪ್ರಾಪ್ತ ಮಕ್ಕಳ ಸಂಖ್ಯೆ 38,030. ಅಂದರೆ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳಾ ಪ್ರಾತಿನಿಧ್ಯಕ್ಕಾಗಿ ದೊಡ್ಡ ದನಿ ಕೇಳುತ್ತಿರುವಾಗಲೇ ಶೇ. 50ಕ್ಕೂ ಹೆಚ್ಚು ಅತ್ಯಾಚಾರ-ದೌರ್ಜನ್ಯಗಳಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳೇ ಬಲಿ ಯಾಗುತ್ತಿದ್ದಾರೆ. ಇದು ಆಧುನಿಕತೆ-ನಾಗರಿಕತೆಯ ವಿಡಂಬನೆ ಅಲ್ಲವೇ?

ಮತ್ತೊಂದೆಡೆ ಭಾರತದ ಸಂವಿಧಾನ ಆಶಿಸುವ ಸಾಮಾಜಿಕ ಸಮಾನತೆಯನ್ನು ಅಣಕಿಸುವ ರೀತಿಯಲ್ಲಿ ಪರಿಶಿಷ್ಟ ಸಮುದಾಯಗಳು ಶೋಷಣೆ, ದೌರ್ಜನ್ಯಗಳನ್ನು ಎದುರಿಸುತ್ತಿರುವುದನ್ನೂ ಮಾನವ ಹಕ್ಕುಗಳ ಚೌಕಟ್ಟಿನೊಳಗೇ ಪರಾಮರ್ಶಿಸಬೇಕಿದೆ. 2020ರಲ್ಲಿ ಪರಿಶಿಷ್ಟ ಜಾತಿಗಳ ಮೇಲೆ ನಡೆದ ದೌರ್ಜನ್ಯ ಮತ್ತು ಅಪರಾಧ ಕೃತ್ಯಗಳು 50,291 ಇದ್ದುದು 2022ಕ್ಕೆ 57,582ಕ್ಕೆ ಏರಿದೆ. ಅಂದರೆ ಭಾರತ ಆಧುನಿಕವಾಗುತ್ತಿದ್ದಷ್ಟೇ ವೇಗವಾಗಿ ನಾಗರಿಕ ಜಗತ್ತಿನಲ್ಲಿ ಶೋಷಿತ ತಳಸಮುದಾಯಗಳ ಮೇಲಿನ ದೌರ್ಜನ್ಯ-ಅತ್ಯಾಚಾರ-ಅಪರಾಧಗಳೂ ಹೆಚ್ಚಾಗುತ್ತಲೇ ಇವೆ. ಪರಿಶಿಷ್ಟ ಜಾತಿಯ ಮಹಿಳೆಯರ ಮೇಲಿನ ದೌರ್ಜನ್ಯಗಳು ಸಹ ಇದೇ ಪ್ರಮಾಣದಲ್ಲಿ ಹೆಚ್ಚಾಗಿದ್ದು 2022ರಲ್ಲಿ 7,756ರಷ್ಟು ಪ್ರಕರಣಗಳು ದಾಖಲಾಗಿವೆ. ಮಹಿಳೆಯನ್ನು ಬೆತ್ತಲೆಗೊಳಿಸುವ 343 ಪ್ರಕರಣಗಳು ದಾಖಲಾಗಿರುವುದಾಗಿ ಎನ್ಸಿಆರ್ಬಿ ದತ್ತಾಂಶಗಳು ತಿಳಿಸುತ್ತವೆ. ಅಂದರೆ ಭಾರತದ ಮಹಿಳಾ ಸಂಕುಲವು ಒಂದೆಡೆ ಜಾತಿ ಮತ್ತೊಂದೆಡೆ ಲಿಂಗತ್ವದ ದಾಳಿಗಳನ್ನು ಒಮ್ಮೆಲೆ ಎದುರಿಸಬೇಕಿದೆ. ಈ ಅಪರಾಧಗಳಲ್ಲಿ ಶಿಕ್ಷೆಯ ಪ್ರಮಾಣ ಅತ್ಯಂತ ಕನಿಷ್ಠ ಮಟ್ಟದಲ್ಲಿರುವುದು ಚಿಂತೆಗೀಡುಮಾಡುವ ವಿಚಾರ.

ಮಾನವ ಘನತೆಯ ಹಕ್ಕುಗಳಿಗಾಗಿ

ಮಾನವ ಹಕ್ಕುಗಳನ್ನು ಕೇವಲ ಕಾನೂನು ಚೌಕಟ್ಟಿನಲ್ಲಿಟ್ಟು ನೋಡದೆ, ಸಾಮಾಜಿಕ-ಸಾಂಸ್ಕೃತಿಕ ಹಾಗೂ ಆರ್ಥಿಕ ನೆಲೆಯಲ್ಲಿ ನಿಂತು ನೋಡಿದಾಗ ಭಾರತ 1948ರ ಮಾನವ ಹಕ್ಕುಗಳ ಒಡಂಬಡಿಕೆಗೆ ಬದ್ಧವಾಗಿದೆಯೇ ಎಂಬ ಅನುಮಾನ ಮೂಡುತ್ತದೆ. ನವ ಉದಾರವಾದ ಹಾಗೂ ಕಾರ್ಪೊರೇಟ್ ಮಾರುಕಟ್ಟೆಯ ಆರ್ಥಿಕತೆಯಲ್ಲಿ ಫಲಾನುಭವಿಗಳಾಗಿ, ಸಾಂವಿಧಾನಿಕ ಸವಲತ್ತುಗಳನ್ನೂ ತನ್ನದಾಗಿಸಿಕೊಂಡಿರುವ ಮೇಲ್ಪದರದ ಒಂದು ಬೃಹತ್ ಜನಸಂಕುಲ ಇಂದು ಭಾರತದ ಸಾರ್ವಜನಿಕ ಸಂಕಥನಗಳಲ್ಲೂ ತನ್ನ ಅಭಿಪ್ರಾಯವನ್ನು ಉತ್ಪಾದಿಸಿ, ನಿರೂಪಣೆ ಮಾಡುತ್ತಿದೆ. ಈ ಹಿತವಲಯದ ಫಲಾನುಭವಿ ಸಮೂಹಗಳ ದೃಷ್ಟಿಯಲ್ಲಿ ಅಸಹಾಯಕ, ಅವಕಾಶವಂಚಿತ, ಶೋಷಿತ, ದಮನಿತ ಜನಸಮುದಾಯಗಳು ಸದಾ ನಿರ್ಲಕ್ಷಿತರಾಗಿಯೇ ಕಾಣುವುದು ಸಹಜ. ಆದರೆ ನಾಗರಿಕತೆಯನ್ನು ಮತ್ತಷ್ಟು ಸಂವೇದನಾಶೀಲಗೊಳಿಸುವ ಪ್ರಯತ್ನದಲ್ಲಿರುವ ಸಮಾಜದ ಪ್ರಜ್ಞಾವಂತ ಜನಸಮೂಹ ಮೌನ ತಪಸ್ವಿಗಳಂತೆ ಇರಲಾಗುವುದಿಲ್ಲ.

ಈ ಜನಸಮೂಹವನ್ನು ಪ್ರತಿನಿಧಿಸುವುದೇ ಅಲ್ಲದೆ, ಇಲ್ಲಿ ಕಾಣಬಹುದಾದ ಮನುಜ ಸೂಕ್ಷ್ಮತೆ ಹಾಗೂ ಸಂವೇದನೆಗಳನ್ನು ಮತ್ತಷ್ಟು ಮೊನಚುಗೊಳಿಸುವ ಮೂಲಕ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಬುನಾದಿಯನ್ನು ಗಟ್ಟಿಗೊಳಿಸಬೇಕಿದೆ. ಅಸಹಾಯಕ, ಅವಕಾಶವಂಚಿತ, ಶೋಷಿತ-ದಮನಿತ ಜನಸಮುದಾಯಗಳ ನೆಲೆಯಲ್ಲಿ ನಿಂತು ನೋಡಿದಾಗ ಭಾರತ ಮಾನವ ಹಕ್ಕುಗಳ ರಕ್ಷಣೆಯ ಹಾದಿಯಲ್ಲಿ ಬಹುದೂರ ಸಾಗಬೇಕು ಎನಿಸುವುದು ಸಹಜ. ಭಾರತದ ಸಂದರ್ಭದಲ್ಲಿ ಬಹುಸಂಖ್ಯಾತರಾದ ಮಹಿಳೆಯರು-ಅಲ್ಪಸಂಖ್ಯಾತರು-ಆದಿವಾಸಿಗಳು-ಅಸ್ಪಶ್ಯರು ಹಾಗೂ ತಳಸಮುದಾಯಗಳು ನಿರಂತರ ಶೋಷಣೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ನಾವು ಮತ್ತೊಂದು ಮಾನವ ಹಕ್ಕುಗಳ ದಿನವನ್ನು ಆಚರಿಸುತ್ತಿದ್ದೇವೆ. ಬಲಿಪೀಠದಲ್ಲಿರುವ ಹೆಣ್ಣು ಭ್ರೂಣಗಳನ್ನೂ ಒಳಗೊಂಡಂತೆ ಈ ‘ಮಾನವ’ ಕುಲದ ಘನತೆ ಮತ್ತು ಜೀವಿಸುವ ಹಕ್ಕು ನಮ್ಮ ಭವಿಷ್ಯದ ಘೋಷವಾಕ್ಯವಾಗಬೇಕಿದೆ. ಹಾಗಾದರೆ ಮಾನವ ಹಕ್ಕುಗಳ ದಿನದ ಆಚರಣೆಯೂ ಸಾರ್ಥಕವಾದೀತು.

Writer - ವಾರ್ತಾಭಾರತಿ

contributor

Editor - Ismail

contributor

Byline - ನಾ. ದಿವಾಕರ

contributor

Similar News