ರೈತರ ಕಲ್ಯಾಣಕ್ಕೆ ಸರಕಾರ ಬದ್ಧ: ರಾಷ್ಟ್ರಪತಿ ಕೋವಿಂದ್

ಹೊಸದಿಲ್ಲಿ, ಜ.29: ರೈತರಿಗೆ ನೆರವಾಗುವುದು ಕೇಂದ್ರ ಸರಕಾರದ ಪ್ರಮುಖ ಧ್ಯೇಯವಾಗಿದೆ. ರೈತರ ಕಲ್ಯಾಣಕ್ಕೆ ಸರಕಾರ ಬದ್ಧ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ಸಂಸತ್ ನ ಬಜೆಟ್ ಅಧಿವೇಶನದ ಮೊದಲ ದಿನವಾಗಿರುವ ಸೋಮವಾರ ಅವರು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಜಂಟಿ ಸದನವನ್ನುದ್ದೇಶಿಸಿ ಮಾತನಾಡಿದರು.
ರೈತರ ಸಮಸ್ಯೆಗಳ ಪರಿಹಾರಕ್ಕೆ ಸರಕಾರ ಗಮನ ಹರಿಸಿದೆ. 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಕೇಂದ್ರ ಸರಕಾರದ ಗುರಿಯಾಗಿದೆ. ಹೊಸ ಯೋಜನೆಗಳಿಂದ ರೈತರಿಗೆ ಹೆಚ್ಚು ಅನುಕೂಲವಾಗಿದೆ ಎಂದರು.
2018ನೇ ವರ್ಷ ನವ ಭಾರತದ ಕನಸನ್ನು ನನಸಾಗಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ದೇಶದಲ್ಲಿ ಸಾಮಾಜಿಕ ನ್ಯಾಯ , ಆರ್ಥಿಕ ಸದೃಢತೆಗೆ ಒತ್ತು ನೀಡಲಾಗಿದೆ. ಬಡತನ ನಿರ್ಮೂಲನೆಯಿಂದ ದೇಶ ಆರ್ಥಿವಾಗಿ ಬಲಿಷ್ಠವಾಗಲಿದೆ ಸಮಾಜದ ದುರ್ಬಲ ವರ್ಗದವರ ಏಳಿಗೆಗಾಗಿ ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ ಎಂದು ಹೇಳಿದರು.
ಅಟಲ್ ಪಿಂಚಣಿ ಯೋಜನೆಯಿಂದ ದೇಶದಲ್ಲಿ 80 ಲಕ್ಷ ವೃದ್ಧರಿಗೆ ಅನುಕೂಲವಾಗಿದೆ. ಬಡವರು, ಮಧ್ಯಮ ವರ್ಗದವರಿಗಾಗಿ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಕ್ರೀಡಾ ಕ್ಷೇತ್ರದ ಅಭಿವೃಧ್ದಿಗಾಗಿ ಖೇಲೊ ಇಂಡಿಯಾ ಯೋಜನೆ ಆರಂಭಿಸಲಾಗಿದೆ . ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮ ನಡೆಯುತ್ತಿದೆ. 1ಕೋಟಿ ಜನರಿಗೆ ಡಿಜಿಟಲ್ ಸಾಕ್ಷರತೆಯನ್ನು ಒದಗಿಸಲಾಗಿದೆ. ಬುಲೆಟ್ ಟ್ರೇನ್ ಕಾಮಗಾರಿ ಪ್ರಗತಿಯಲ್ಲಿದೆ. ದೇಶದಲ್ಲಿ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು.
ಮಹಿಳಾ ನೌಕರರಿಗೆ 26 ವಾರಗಳ ಹೆರಿಗೆ ವೇತನ ಸಹಿತ ರಜೆ ಮಸೂದೆಯನ್ನು ಸರಕಾರ ಅನುಮೋದಿಸಿರುವುದು ಶ್ಲಾಘನೀಯ ಎಂದರು.
ದೇಶದಲ್ಲಿ ನಕ್ಸಲ್ ಚಟುವಟಿಕೆ ಇಳಿಮುಖವಾಗಿದೆ. ನಕ್ಸಲರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ