ಬೆಳಕಿನ ಮೀನುಗಾರಿಕೆಗೆ ಅವಕಾಶ ನೀಡದಿದ್ದರೆ ಉಗ್ರ ಹೋರಾಟ: ಮಲ್ಪೆ ಪರ್ಸೀನ್ ಮೀನುಗಾರರ ಸಂಘ ಎಚ್ಚರಿಕೆ

ಉಡುಪಿ, ಮೇ 6: ಬೆಳಕಿನ ಮೀನುಗಾರಿಕೆಗೆ ನಿಷೇಧ ಹೇರಿರುವ ಕೇಂದ್ರ ಸರಕಾರ ಅದನ್ನು ಪುನರ್ ಪರಿಶೀಲಿಸಿ ಮತ್ತೆ ಅವಕಾಶ ಕಲ್ಪಿಸದಿದ್ದರೆ ಮುಂದಿನ ಮೀನುಗಾರಿಕಾ ಋತುವಿನಲ್ಲಿ ಮುಷ್ಕರ ಹೂಡಿ ರಾಷ್ಟ್ರೀಯ ಹೆದ್ದಾರಿ ಬಂದ್ ಮೂಲಕ ತೀವ್ರ ಹೋರಾಟ ನಡೆಸಲಾಗುವುದು ಎಂದು ಮಲ್ಪೆ ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷ ಯಶೋಧರ ಅಮೀನ್ ಎಚ್ಚರಿಕೆ ನೀಡಿದ್ದಾರೆ.
ಮಲ್ಪೆ ಏಳೂರು ಮೊಗವೀರ ಸಭಾಭವನದಲ್ಲಿ ರವಿವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳ ಸಮುದ್ರ ಮೀನುಗಾರರು ರಾಜಕೀಯ ಹುನ್ನಾರದಿಂದ ಪರ್ಸಿನ್ ಮೀನು ಗಾರರಿಂದ ಮೀನಿನ ಸಂತತಿ ನಾಶವಾಗುತ್ತಿದೆ ಎಂಬ ಸುಳ್ಳು ಆರೋಪ ಹೊರಿಸಿ ಬೆಳಕಿನ ಮೀನುಗಾರಿಕೆ ನಿಷೇಧ ಆಗುವಂತೆ ಮಾಡಿದ್ದಾರೆ. ಇದರಿಂದ 30,000 ಮೀನುಗಾರರು ಇಂದು ಕೆಲಸ ಇಲ್ಲದೆ ನಿರ್ಗತಿಕರಾಗಿದ್ದಾರೆ ಎಂದರು.
ನಿಷೇಧದ ಹಿನ್ನೆಲೆಯಲ್ಲಿ ಫೆಬ್ರವರಿ ತಿಂಗಳಿನಿಂದ ಮೀನುಗಾರಿಕೆಗೆ ತೆರಳದೆ ಕುಟುಂಬ ನಿರ್ವಹಣೆ, ಸಾಲ ಮರುಪಾವತಿ, ಮಕ್ಕಳ ಶಿಕ್ಷಣ ಕಷ್ಟವಾಗುತ್ತದೆ. ಮಲ್ಪೆ ಬಂದರಿನಲ್ಲಿ 140 ಸೇರಿದಂತೆ ಕರಾವಳಿ ಕರ್ನಾಟಕದಲ್ಲಿ ಒಟ್ಟು 650-700 ಪರ್ಸಿನ್ ಬೋಟುಗಳಿವೆ ಎಂದು ಅವರು ತಿಳಿಸಿದರು. ಮೀನಿನ ಸಂತತಿ ನಾಶ ಆಗುತ್ತಿರುವುದು ಆಳಸಮುದ್ರ ಮೀನುಗಾರಿಕೆ ಯವರು ಕಾನೂನು ಉಲ್ಲಂಘಿಸಿ 500 ಅಶ್ವದಳದ ಇಂಜಿನ್ ಬಳಸಿ ಸಣ್ಣ ಮರಿ ಮೀನುಗಳನ್ನು ಹಿಡಿಯುವುದರಿಂದಲೇ ಹೊರತು ನಮ್ಮಿಂದಲ್ಲ. ನಾವು ಡಿಸೆಂಬರ್ನಿಂದ ಮಾರ್ಚ್ವರೆಗೆ ತಿಂಗಳಿಗೆ 15ರಿಂದ 18ದಿನಗಳ ಕಾಲ ಮಾತ್ರ ಮೀನುಗಾರಿಕೆ ನಡೆಸುತ್ತಿರುವುದು ಎಂದು ಅವರು ಹೇಳಿದರು.
ಬೆಳಕಿನ ಮೀನುಗಾರಿಕೆಗೆ ಕರ್ನಾಟಕದಲ್ಲಿ ಮಾತ್ರ ನಿಷೇಧ ಇದೆಯೇ ಹೊರತು ಉಳಿದ ಆರು ಕರಾವಳಿಯ ರಾಜ್ಯಗಳಲ್ಲಿ ಇಲ್ಲ. ಇದಕ್ಕೆ ಇಲ್ಲಿನ ಸ್ಥಾಪಿತ ಹಿತಾಸಕ್ತಿಗಳೇ ಕಾರಣ ಎಂದ ಅವರು, ಮುಂದಿನ ಮೀನುಗಾರಿಕಾ ಋತುವಿನೊಳಗೆ ಬೆಳಕಿನ ಮೀನುಗಾರಿಕೆಗೆ ನೀಡಿರುವ ನಿಷೇಧವನ್ನು ಹಿಂತೆಗೆಯ ದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಗುರುದಾಸ ಬಂಗೇರ, ಉಪಾಧ್ಯಕ್ಷ ರಾದ ನಾಗರಾಜ್ ಸುವರ್ಣ, ಚಂದ್ರ ಸಾಲ್ಯಾನ್, ಕೋಶಾಧಿಕಾರಿ ರಾಮ ಸುವರ್ಣ, ಪ್ರಧಾನ ಕಾರ್ಯದರ್ಶಿ ಕೃಷ್ಣಯ್ಯ ಸುವರ್ಣ, ಹರೀಶ್ಚಂದ್ರ ಮೆಂಡನ್, ಸುಧಾಕರ್ ತಿಂಗಳಾಯ, ಸಂತೋಷ್ ಸಾಲ್ಯಾನ್, ನವೀನ್ ಕೋಟ್ಯಾನ್ ಉಪಸ್ಥಿತರಿದ್ದರು.