ಇ-ಫಾರ್ಮಸಿ ಲೋಪಗಳನ್ನು ಸರಿಪಡಿಸಲು ಒತ್ತಾಯ: ಕೊಡಗಿನಲ್ಲಿ ಔಷಧಿ ಅಂಗಡಿಗಳು ಬಂದ್
ಮಡಿಕೇರಿ ಸೆ.28 : ಔಷಧಿಗಳ ವಿತರಣಾ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಇ-ಫಾರ್ಮಸಿ ವ್ಯವಸ್ಥೆಯಲ್ಲಿ ಕಂಡು ಬಂದಿರುವ ಲೋಪಗಳನ್ನು ಸರಿಪಡಿಸುವಂತೆ ಆಗ್ರಹಿಸಿ ದೇಶವ್ಯಾಪಿ ನಡೆದ ಔಷಧಿ ವ್ಯಾಪಾರಿಗಳ ಬಂದ್ ಮುಷ್ಕರಕ್ಕೆ ಕೊಡಗು ಜಿಲ್ಲೆಯಲ್ಲೂ ಬೆಂಬಲ ವ್ಯಕ್ತವಾಯಿತು.
ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ ತನ್ನ ಬೆಂಬಲವನ್ನು ವ್ಯಕ್ತಪಡಿಸಿ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಸರಕಾರದ ಗಮನ ಸೆಳೆಯಿತು.
ಜಿಲ್ಲೆಯಲ್ಲಿರುವ ಸುಮಾರು 120 ಔಷಧಿ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು.
ಜಿಲ್ಲಾಡಳಿತದ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ ಸಂಘದ ಜಿಲ್ಲಾ ಪ್ರಮುಖರು ಇ-ಫಾರ್ಮಸಿ ಎಂಬ ವಿತರಣಾ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಗ್ರಾಹಕರ ಹಿತಾಸಕ್ತಿಯನ್ನು ನಿರ್ಲಕ್ಷಿಲಾಗಿದೆ ಎಂದು ಆರೋಪಿಸಿದರು.
ಹೊಸ ನೀತಿಯ ಬಗ್ಗೆ ಗ್ರಾಹಕರಿಗೆ ವಾಸ್ತವಾಂಶ ತಿಳಿಸಬೇಕಾದ ಮಹತ್ವದ ಹೊಣೆಗಾರಿಕೆ ಔಷಧಿ ವ್ಯಾಪಾರಸ್ಥರ ಮೇಲಿರುವುದರಿಂದ ಮುಷ್ಕರ ನಡೆಸಲಾಗಿದೆ ಎಂದರು. ನಕಲಿ ಹಾಗೂ ಮಾದಕ ಔಷಧಗಳ ವ್ಯಾಪಾರ ಇತಿಮಿತಿಯಿಲ್ಲದಂತೆ ನಡೆಯಲು ನೂತನ ವ್ಯವಸ್ಥೆ ರಹದಾರಿಯಾಗಿದ್ದು, ಬೇರೆ ಔಷಧದ ಹೆಸರಿನಲ್ಲಿ ಮಾದಕ ಜೌಷಧ ವಿತರಣೆಯಾದಲ್ಲಿ ಯುವ ಪೀಳಿಗೆ ಬಲಿಪಶುಗಳಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಇ-ಫಾರ್ಮಸಿ ವ್ಯವಸ್ಥೆ ರೋಗಿಯ ಆರೋಗ್ಯದ ಬಗ್ಗೆ, ವಿತರಣೆ ಆಗಬೇಕಾದ ಔಷಧದ ಗುಣಮಟ್ಟದ ಪರಿಶೀಲನೆಗೆ ಒತ್ತು ನೀಡದೆ ಗ್ರಾಹಕರ ಜೀವನದ ಜೊತೆ ಆಟವಾಡುವ ಪ್ರಕ್ರಿಯೆಯಾಗಿದೆ. ವಿತರಕ ಯಾರು ಎಂಬುವುದನ್ನೇ ಅರಿಯದೇ, ಔಷಧಿಯ ವಿಷಯವನ್ನೇ ತಿಳಿಯದವರು ಇ-ಫಾರ್ಮಸಿ ವ್ಯವಸ್ಥೆಯಡಿ ಔಷಧಿಗಳನ್ನು ಎಲ್ಲಿಂದಲೋ ವಿತರಣೆ ಮಾಡಿದಲ್ಲಿ ಗ್ರಾಹಕನ ಆರೋಗ್ಯ ಸಂಪೂರ್ಣ ಹದಗೆಡುವ ಸಾಧ್ಯತೆ ಹೆಚ್ಚಿದೆ.
ಡಾಕ್ಟರ್ ರ ಔಷಧ ಚೀಟಿಯನ್ನು ಇ-ಫಾರ್ಮಸಿ ಪೋರ್ಟಲ್ಗೆ ತಾವೇ ತುಂಬಬೇಕಾಗಿದ್ದು, ತಮಗೆ ತಲುಪಬಹುದಾದ ಔಷಧವು, ತಮಗೆ ವೈದ್ಯರ ಸಲಹೆಯಂತೆಯೇ ದೊರೆಯುವುದೆಂಬ ಖಾತ್ರಿ ಇಲ್ಲ. ಔಷಧವನ್ನು ಸ್ವ ಹಸ್ತದಿಂದ ತಲುಪಿಸಬೇಕಾದ ನಿಯಮ ಇ-ಫಾರ್ಮಸಿಗೆ ಅನ್ವಯವಾಗಿಲ್ಲ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟರು.
ಸಂಘದ ಖಜಾಂಚಿ ಪ್ರಸಾದ್ ಗೌಡ, ಜಂಟಿ ಕಾರ್ಯದರ್ಶಿ ಬಿ.ಸಿ.ತಿಲಕ್, ಮಾಜಿ ಕಾರ್ಯದರ್ಶಿ ವಸಂತ್ ಕುಮಾರ್ ಹಾಗೂ ಮತ್ತಿತರ ಪ್ರಮುಖರು ಮನವಿ ನೀಡುವ ಸಂದರ್ಭ ಹಾಜರಿದ್ದರು.