ಸ್ವಂತ ಹೆಲಿಕಾಪ್ಟರ್ನಲ್ಲಿ ಗರ್ಭಿಣಿಯನ್ನು ಕರೆದೊಯ್ದು ಮಾನವೀಯತೆ ಮೆರೆದ ರಾಜ್ಯಪಾಲರು
ಬಿ.ಡಿ.ಮಿಶ್ರಾ
ಇಟಾನಗರ, ನ. 30: ತುರ್ತು ವೈದ್ಯಕೀಯ ಆರೈಕೆ ಅಗತ್ಯವಿದ್ದ ಗರ್ಭಿಣಿಯನ್ನು ತಮ್ಮ ಸ್ವಂತ ಹೆಲಿಕಾಪ್ಟರ್ನಲ್ಲಿ ಇವಾಂಗ್ನಿಂದ ಇಟಾನಗರವರೆಗೆ ಕರೆತಂದು ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ ಅರುಣಾಚಲ ಪ್ರದೇಶ ರಾಜ್ಯಪಾಲ ನಿವೃತ್ತ ಬ್ರಿಗೇಡಿಯರ್ ಬಿ.ಡಿ.ಮಿಶ್ರಾ ಮಾನವೀಯತೆ ಮೆರೆದಿದ್ದಾರೆ.
ಈ ಹೆಲಿಕಾಪ್ಟರ್ ತೇಜ್ಪುರದಲ್ಲಿ ಇಂಧನ ತುಂಬಿಸಿಕೊಂಡ ಬಳಿಕ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯಪಾಲರು, ವಾಯುಪಡೆ ಹೆಲಿಕಾಪ್ಟರ್ಗೆ ಮನವಿ ಮಾಡಿಕೊಂಡು, ಗರ್ಭಿಣಿ ಮಹಿಳೆ ಮತ್ತು ಆಕೆಯ ಪತಿ ಮೊದಲು ರಾಜಧಾನಿಗೆ ತಲುಪುವಂತೆ ವ್ಯವಸ್ಥೆ ಮಾಡಿದರು. ಬಳಿಕ ಅವರು ಮತ್ತೊಂದು ವಿಮಾನದಲ್ಲಿ ಪ್ರಯಾಣ ಬೆಳೆಸಿದರು.
ಇಷ್ಟು ಮಾತ್ರವಲ್ಲದೇ ಮಿಶ್ರಾ ಅವರು, ರಾಜಭವನ ಹೆಲಿಪ್ಯಾಡ್ನಿಂದ ಪ್ರಸೂತಿತಜ್ಞರನ್ನೊಳಗೊಂಡ ಆ್ಯಂಬುಲೆನ್ಸ್ ವಾಹನವನ್ನೂ ವ್ಯವಸ್ಥೆ ಮಾಡಿ, ಮಹಿಳೆ ಆಸ್ಪತ್ರೆಗೆ ತಲುಪಲು ವಿಳಂಬವಾಗದಂತೆ ನೋಡಿಕೊಂಡರು. ಬಳಿಕ ಇಟಾನಗರದ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಯಿತು.
ತವಾಂಗ್ ಪಟ್ಟಣದಿಂದ ಇಟಾನಗರಕ್ಕೆ 200 ಕಿಲೋಮೀಟರ್ ದೂರವಿದ್ದು, ಬೆಟ್ಟಗುಡ್ಡ ಹಾಗೂ ಕಣಿವೆ ಪ್ರದೇಶದ ರಸ್ತೆಯನ್ನು ಕ್ರಮಿಸಲು 15 ಗಂಟೆಗಳು ಬೇಕಾಗುತ್ತವೆ. ಆದರೆ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸಿದ್ದರಿಂದ ಮಹಿಳೆ ಎರಡು ಗಂಟೆಯ ಒಳಗಾಗಿ ಆಸ್ಪತ್ರೆಗೆ ತಲುಪುವುದು ಸಾಧ್ಯವಾಯಿತು. ತವಾಂಗ್ನಲ್ಲಿ ಬುಧವಾರ ರಾಜ್ಯಪಾಲರು ಭಾಗವಹಿಸಿದ್ದ ಸಮಾರಂಭವೊಂದರಲ್ಲಿ ಮುಖ್ಯಮಂತ್ರಿ ಪೇಮಾ ಖಂಡು ಮತ್ತು ಸ್ಥಳೀಯ ಶಾಸಕರು ಚರ್ಚಿಸುತ್ತಿದ್ದಾಗ ಈ ವಿಷಯ ರಾಜ್ಯಪಾಲರ ಗಮನಕ್ಕೆ ಬಂತು. ಮಹಿಳೆಯೊಬ್ಬರು ಚಿಂತಾಜನಕ ಸ್ಥಿತಿಯಲ್ಲಿದ್ದು, ಮುಂದಿನ ಮೂರು ದಿನಗಳ ವರೆಗೆ ತವಾಂಗ್ ಮತ್ತು ಗುವಾಹತಿ ಮಧ್ಯೆ ಹೆಲಿಕಾಪ್ಟರ್ ಸೇವೆ ಇಲ್ಲ ಎಂದು ಶಾಸಕರು ಮಾಹಿತಿ ನೀಡಿದ್ದರು. ಆಗ ರಾಜ್ಯಪಾಲರು ತಮ್ಮ ಇಬ್ಬರು ಅಧಿಕಾರಿಗಳ ಜತೆ ತಮ್ಮ ಹೆಲಿಕಾಪ್ಟರ್ನಲ್ಲಿ ಮಹಿಳೆ ಹಾಗೂ ಆಕೆಯ ಪತಿಯ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದರು.
ಕೊನೆಗೆ ಮಹಿಳೆ ಹಾಗೂ ನವಜಾತ ಶಿಶುವಿಗೆ ಯಾವುದೇ ಅಪಾಯವಿಲ್ಲದೇ ಸುರಕ್ಷಿತ ಹೆರಿಗೆಯಾದ ಸುದ್ದಿ ತಿಳಿದಾಗ ರಾಜ್ಯಪಾಲರು ದಂಪತಿ ಹಾಗೂ ಮಗುವಿಗೆ ಶುಭ ಹಾರೈಸಿದರು.