ಆಝಂ ಖಾನ್ ಕ್ಷಮೆ ಯಾಚಿಸಿದರೂ ನಾನು ಕ್ಷಮಿಸುವುದಿಲ್ಲ: ಡೆಪ್ಯುಟಿ ಸ್ಪೀಕರ್ ರಮಾದೇವಿ

ಹೊಸದಿಲ್ಲಿ, ಜು.27: ಸಂಸತ್ತಿನಲ್ಲಿ ತನ್ನನ್ನು ಉದ್ದೇಶಿಸಿ ಆಕ್ಷೇಪಾರ್ಹ ಹೇಳಿಕೆಗಾಗಿ ಎಸ್ಪಿ ನಾಯಕ ಆಝಂ ಖಾನ್ ಅವರು ಕ್ಷಮೆಯನ್ನು ಯಾಚಿಸಿದರೂ ತಾನು ಮಾತ್ರ ಎಂದಿಗೂ ಅವರನ್ನು ಕ್ಷಮಿಸುವುದಿಲ್ಲ ಎಂದು ಬಿಜೆಪಿ ಸಂಸದೆ ಹಾಗೂ ಲೋಕಸಭೆಯ ಡೆಪ್ಯುಟಿ ಸ್ಪೀಕರ್ ರಮಾದೇವಿ ಅವರು ಹೇಳಿದ್ದಾರೆ. ಗುರುವಾರ ಲೋಕಸಭೆಯಲ್ಲಿ ತ್ರಿವಳಿ ತಲಾಕ್ ಮಸೂದೆಯ ಮೇಲಿನ ಚರ್ಚೆ ಸಂದರ್ಭದಲ್ಲಿ ಖಾನ್ ಅವರ ಆಕ್ಷೇಪಾರ್ಹ ಹೇಳಿಕೆಯನ್ನು ಸದಸ್ಯರು ಪಕ್ಷಭೇದ ಮರೆತು ಖಂಡಿಸಿದ್ದರು.
ಇಂತಹ ಹೇಳಿಕೆಯನ್ನು ನೀಡುವ ಮೂಲಕ ಮತ್ತು ತಕ್ಷಣವೇ ಕ್ಷಮೆಯನ್ನು ಕೋರದಿರುವ ಮೂಲಕ ಖಾನ್ ಅವರು ಎರಡು ಬಾರಿ ಪೀಠವನ್ನು ಅವಮಾನಿಸಿದ್ದಾರೆ ಎಂದು ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ ರಮಾದೇವಿ, ಅವರು ಈ ಹೇಳಿಕೆಯನ್ನು ನೀಡಿದಾಗ ತಾನು ಸ್ಪೀಕರ್ ಪೀಠದಲ್ಲಿದ್ದೆ. ಖಾನ್ ಅವರು ನೇರವಾಗಿ ಸದಸ್ಯರತ್ತ ನೋಡುತ್ತ ಮಾತನಾಡುತ್ತಿದ್ದರು ಮತ್ತು ಪೀಠವನ್ನು ಉದ್ದೇಶಿಸಿ ಮಾತನಾಡುವಂತೆ ತಾನು ಅವರಿಗೆ ಸೂಚಿಸಿದ್ದೆ. ಆದರೆ ಅವರು ಇಲ್ಲಿ ಪುನರುಚ್ಚರಿಸಲು ಸಾಧ್ಯವಿಲ್ಲದ ಮಾತುಗಳನ್ನಾಡಿದ್ದರು ಎಂದರು.
ತಾನು ಅವರಿಗೆ ಕಟುವಾಗಿ ಉತ್ತರಿಸುತ್ತಿದ್ದೆ,ಆದರೆ ಆ ಸಂದರ್ಭದಲ್ಲಿ ತಾನಿದ್ದ ಪೀಠದ ಗೌರವವನ್ನು ಕಾಯ್ದುಕೊಳ್ಳಲು ತಾನು ಮಾತನಾಡಿರಲಿಲ್ಲ ಎಂದ ಅವರು,ಪ್ರತಿಯೊಬ್ಬರೂ ತಾಯಿ,ಸೋದರಿ,ಪುತ್ರಿ ಮತ್ತು ಪತ್ನಿಯನ್ನು ಹೊಂದಿದ್ದಾರೆ. ಖಾನ್ ಹೇಳಿಕೆ ಮಹಿಳೆಯರನ್ನು ಮಾತ್ರ ನೋಯಿಸಿಲ್ಲ,ಅದು ಪುರುಷರಿಗೂ ಕಪ್ಪು ಚುಕ್ಕೆಯಾಗಿದೆ ಎಂದು ಕಿಡಿಕಾರಿದರು.
ಖಾನ್ ವಿರುದ್ಧ ಕ್ರಮದ ಬಗ್ಗೆ ನಿರ್ಧರಿಸಲು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಶುಕ್ರವಾರ ಸಂಸದರ ಸಭೆಯೊಂದನ್ನು ಕರೆದಿದ್ದರು. ಸೋಮವಾರ ಸದನದಲ್ಲಿ ಬೇಷರತ್ ಕ್ಷಮೆ ಯಾಚಿಸುವಂತೆ ಖಾನ್ಗೆ ಸೂಚಿಸಲಾಗುವುದು,ಅವರು ವಿಫಲರಾದರೆ ಅವರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸಲಾಗುವುದು ಎನ್ನಲಾಗಿದೆ.
ಖಾನ್ ತನ್ನ ಅಸಭ್ಯ ಹೇಳಿಕೆಯ ಬಗ್ಗೆ ಅಂದೇ ಕ್ಷಮೆ ಯಾಚಿಸಿದ್ದರೆ ತಾನು ಕ್ಷಮಿಸುತ್ತಿದ್ದೆ. ಖಾನ್ ತನಗೆ ಮಾತ್ರ ಮುಜುಗರ ಉಂಟು ಮಾಡಿದ್ದಲ್ಲ,ಅವರು ಇಡೀ ದೇಶದ ಮಹಿಳೆಯರನ್ನು ಅವಮಾನಿಸಿದ್ದಾರೆ. ಅವರ ವಿರುದ್ಧ ಮುಂಬರುವ ಪೀಳಿಗೆಗಳು ನೆನಪಿಡುವಂತಹ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ತಾನು ಸ್ಪೀಕರ್ ಅವರನ್ನು ಕೋರುತ್ತೇನೆ ಎಂದು ರಮಾದೇವಿ ಹೇಳಿದರು.