ದಿಲ್ಲಿಯಲ್ಲಿ 25,000 ಶಾಲಾಮಕ್ಕಳು ಮಾದಕ ದ್ರವ್ಯಗಳಿಗೆ ದಾಸರು
ರಾಜ್ಯಸಭೆಯಲ್ಲಿ ಟಿ.ಸುಬ್ಬರಾಮಿ ರೆಡ್ಡಿ ಕಳವಳ

ಹೊಸದಿಲ್ಲಿ, ಜು.31: ದಿಲ್ಲಿಯಲ್ಲಿ 25,000 ಶಾಲಾಮಕ್ಕಳು ಮಾದಕ ದ್ರವ್ಯ ವ್ಯಸನಿಗಳಾಗಿದ್ದಾರೆ ಮತ್ತು ಈ ಪಿಡುಗಿನ ಬಗ್ಗೆ ಪೊಲೀಸರು ಕುರುಡರಾಗಿದ್ದಾರೆ ಎಂದು ಕಾಂಗ್ರೆಸ್ ಸದಸ್ಯ ಟಿ.ಸುಬ್ಬರಾಮಿ ರೆಡ್ಡಿ ಅವರು ಹೇಳುವುದರೊಂದಿಗೆ ಬುಧವಾರ ರಾಜ್ಯಸಭೆಯಲ್ಲಿ ಮಕ್ಕಳು ಮಾದಕ ದ್ರವ್ಯಗಳ ಜಾಲಕ್ಕೆ ಸಿಲುಕುತ್ತಿರುವ ಬಗ್ಗೆ ಕಳವಳಗಳು ವ್ಯಕ್ತವಾದವು.
ಶೂನ್ಯವೇಳೆಯಲ್ಲಿ ವಿಷಯವನ್ನೆತ್ತಿದ ರೆಡ್ಡಿ,ದಿಲ್ಲಿಯಲ್ಲಿ ಮಾತ್ರವಲ್ಲ,ಇಡೀ ಉತ್ತರ ಭಾರತದಲ್ಲಿ ಮಾದಕ ದ್ರವ್ಯಗಳು ಸುಲಭವಾಗಿ ಲಭಿಸುತ್ತಿವೆ ಮತ್ತು ಅಮಾಯಕ ಮಕ್ಕಳ ಬದುಕನ್ನು ನಾಶಮಾಡುತ್ತವೆ. ಶೇ.83ರಷ್ಟು ಮಾದಕ ದ್ರವ್ಯ ವ್ಯಸನಿಗಳು ವಿದ್ಯಾವಂತರಾಗಿದ್ದಾರೆ,ಆದರೆ ಮಾದಕ ದ್ರವ್ಯ ಮಾಫಿಯಾಗಳ ಒತ್ತಡದಿಂದಾಗಿ ಈ ಪಿಡುಗನ್ನು ನಿಯಂತ್ರಿಸಲು ರಾಜ್ಯ ಸರಕಾರಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಇತ್ತೀಚಿಗೆ ರಾಜಸ್ಥಾನ, ಪಂಜಾಬ್, ಹರ್ಯಾಣ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ಮುಖ್ಯಮಂತ್ರಿಗಳು ಈ ವಿಷಯದ ಕುರಿತು ಚರ್ಚಿಸಿದ್ದಾರೆ ಎಂದ ಅವರು,ಪಾಕಿಸ್ತಾನ ಮತ್ತು ನೈಜೀರಿಯಾಗಳಂತಹ ದೇಶಗಳ ಮೂಲಕ ಭಾರತಕ್ಕೆ ಮಾದಕ ದ್ರವ್ಯ ಕಳ್ಳಸಾಗಾಣಿಕೆಯಾಗುತ್ತಿರುವುದು ಗಂಭೀರ ಕಳವಳಕ್ಕೆ ಕಾರಣವಾಗಿದೆ. ಈ ಪಿಡುಗನ್ನು ಹತ್ತಿಕ್ಕಲು ಎನ್ಐಎಯಂತಹ ವಿವಿಧ ಸಂಸ್ಥೆಗಳ ನಡುವೆ ಸಮನ್ವಯ ಅಗತ್ಯವಾಗಿದೆ ಎಂದರು.
ದೇಶದಲ್ಲಿ ಮಾದಕ ದ್ರವ್ಯ ಪಿಡುಗನ್ನು ತಡೆಯಬೇಕೆಂದು ಹಲವಾರು ಸದಸ್ಯರೂ ಆಗ್ರಹಿಸಿದರು.
►ಕಾನೂನು ಬಾಹಿರ ಅಂಗಾಂಗ ಮಾರಾಟ
ಕಾನೂನು ಬಾಹಿರ ಅಂಗಾಂಗ ಮಾರಾಟದ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಭಾಕರ ರೆಡ್ಡಿ ವೇಮಿರೆಡ್ಡಿ ಅವರು,ಮೂತ್ರಪಿಂಡ,ಯಕೃತ್ತು ಮತ್ತು ಹೃದಯಗಳಂತಹ ಅಂಗಾಂಗಗಳ ಲಭ್ಯತೆಯೊಂದಿಗೆ ಭಾರತವು ಅಂಗಾಂಗ ವ್ಯಾಪಾರದ ಬೃಹತ್ ರಾಷ್ಟ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂದರು.
ಈ ಅಕ್ರಮದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ ಅವರು,ಇದರಲ್ಲಿ ಭಾಗಿಯಾಗುವ ವೈದ್ಯರ ವಿರುದ್ಧವೂ ಕಠಿಣ ಕ್ರಮಗಳನ್ನು ಜರುಗಿಸಬೇಕು ಎಂದರು.
ಅಕ್ರಮ ಅಂಗಾಂಗ ಮಾರಾಟ ದಂಧೆಯಲ್ಲಿ ಭಾಗಿಯಾಗಿರುವ ಜನರಿಗೆ ಮರಣ ದಂಡನೆಗೆ ಆಗ್ರಹಿಸಿದ ಅವರು,ಇಂತಹ ದಂಧೆಯನ್ನು ತಡೆಯಲು ಮಸೂದೆಯೊಂದನ್ನು ತರಬೇಕು ಎಂದರು.