ಲಷ್ಕರೆ ತಯ್ಯಿಬದ ಇಬ್ಬರು ಉಗ್ರರ ಬಂಧನ: ಸೇನೆ

ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್ (ANI)
ಶ್ರೀನಗರ, ಸೆ. 4: ಭಯೋತ್ಪಾದಕ ಸಂಘಟನೆ ಲಷ್ಕರೆ ತಯ್ಬಿಬಕ್ಕೆ ಸೇರಿದ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ಆಗಸ್ಟ್ 21ರಂದು ಬಂಧಿಸಲಾಗಿದೆ ಎಂದು ಚಿನಾರ್ ಕಾರ್ಪ್ಸ್ನ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್ ಬುಧವಾರ ಹೇಳಿದ್ದಾರೆ.
ಶ್ರೀನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಧಿಲ್ಲೋನ್, ಜಮ್ಮು ಹಾಗೂ ಕಾಶ್ಮೀರದಲ್ಲಿ ಮುಖ್ಯವಾಗಿ ಆಗಸ್ಟ್ 5ರ ಬಳಿಕ ಶಾಂತಿ ಹಾಗೂ ಸೌಹಾರ್ದ ಕದಡಲು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳಲು ನಾವು ಬಯಸುತ್ತೇವೆ ಎಂದರು.
ಪಾಕಿಸ್ತಾನ ಅತ್ಯಧಿಕ ಭಯೋತ್ಪಾದಕರು ಕಾಶ್ಮೀರಕ್ಕೆ ನುಸುಳುವಂತೆ ಉತ್ತೇಜನ ನೀಡುತ್ತಿದೆ ಎಂದು ಅವರು ತಿಳಿಸಿದರು.
‘‘ಆಗಸ್ಟ್ 21ರಂದು ಪಾಕಿಸ್ತಾನ ನಡೆಸಿದ ಇಂತಹ ಒಂದು ಪ್ರಯತ್ನದ ಸಂದರ್ಭ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ನಾವು ಸೆರೆ ಹಿಡಿದೆವು. ಲಷ್ಕರೆ ತಯ್ಯಿಬ ಭಯೋತ್ಪಾದಕ ಸಂಘಟನೆಗೆ ಸೇರಿದ ಈ ಇಬ್ಬರು ಭಯೋತ್ಪಾದಕರನ್ನು ಭಾರತೀಯ ಸೇನೆ ಸೆರೆ ಹಿಡಿಯಿತು’’ ಎಂದು ಅವರು ತಿಳಿಸಿದ್ದಾರೆ.
Next Story