ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣ: ದಿಲ್ಲಿ ನ್ಯಾಯಾಲಯದಿಂದ ಪಿ.ಚಿದಂಬರಂ,ಕಾರ್ತಿಗೆ ನಿರೀಕ್ಷಣಾ ಜಾಮೀನು ಮಂಜೂರು

ಹೊಸದಿಲ್ಲಿ,ಸೆ.5: ಇಲ್ಲಿಯ ವಿಶೇಷ ನ್ಯಾಯಾಲಯವು ಏರ್ಸೆಲ್-ಮ್ಯಾಕ್ಸಿಸ್ಗೆ ಸಂಬಂಧಿಸಿದ ಎರಡೂ ಪ್ರಕರಣಗಳಲ್ಲಿ ಮಾಜಿ ವಿತ್ತಸಚಿವ ಪಿ.ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಗುರುವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಈ.ಡಿ.) ಈ ವಿಷಯದಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದವು.
ತಂದೆ-ಮಗನನ್ನು ಬಂಧಿಸಿದರೆ ಒಂದು ಲ.ರೂ.ಗಳ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಭದ್ರತೆಯನ್ನು ಪಡೆದುಕೊಂಡು ಬಿಡುಗಡೆಗೊಳಿಸುವಂತೆ ಸೂಚಿಸಿದ ವಿಶೇಷ ನ್ಯಾಯಾಧೀಶ ಒ.ಪಿ.ಸೈನಿ ಅವರು,ತನಿಖೆಗೆ ಸಹಕರಿಸುವಂತೆ ಅವರಿಗೆ ತಿಳಿಸಿದರು.
ಇದಕ್ಕೂ ಮುನ್ನ ಸಿಬಿಐ ಮತ್ತು ಈ.ಡಿ.ಮಧ್ಯಾಹ್ನ ಎರಡು ಗಂಟೆಗೆ ನಿಗದಿಯಾಗಿರುವ ಆದೇಶವನ್ನು ಮುಂದೂಡುವಂತೆ ಮಾಡಿಕೊಂಡಿದ್ದ ಕೋರಿಕೆಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು.
ಬೇರೊಂದು ಪ್ರಕರಣದಲ್ಲಿ ಚಿದಂಬರಂ ಅವರ ಜಾಮೀನು ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿರುವುದನ್ನು ಪರಿಗಣಿಸುವಂತೆ ಸಿಬಿಐ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಾಗರಾಜ ಅವರು ಕೋರಿಕೊಂಡರು. ಆದರೆ ದೂರು ದಾಖಲಾದಾಗಿನಿಂದಲೂ ಇನ್ನಷ್ಟು ತನಿಖೆಯ ನೆಪದಲ್ಲಿ ಸಿಬಿಐ ಮತ್ತು ಈ.ಡಿ.ದಿನಾಂಕಗಳ ಮೇಲೆ ದಿನಾಂಕಗಳನ್ನು ಕೋರುತ್ತಲೇ ಇವೆ ಎಂದು ಹೇಳಿದ ನ್ಯಾಯಾಲಯವು,ತನಿಖಾ ಸಂಸ್ಥೆಗಳ ಬಳಿ ಎಲ್ಲ ಸಾಕ್ಷಾಧಾರಗಳು ಇದ್ದರೂ ವಿಚಾರಣೆಯಲ್ಲಿ ವಿಳಂಬವಾಗಿದೆ ಎಂದು ತಿಳಿಸಿತು.
ಚಿದಂಬರಂದ್ವಯರು ಈಗ ಅಧಿಕಾರದಲ್ಲಿಲ್ಲ,ಹೀಗಾಗಿ ಅವರು ಮತ್ತೆ ಇಂತಹುದೇ ಅಪರಾಧವನ್ನು ಮಾಡುವ ಸಾಧ್ಯತೆಯಿಲ್ಲ ಎಂದ ನ್ಯಾಯಾಲಯವು,ಅಕ್ರಮ ಹಣ ವಹಿವಾಟಿನ ಮೊತ್ತ ಕೇವಲ 1.13 ಕೋ.ರೂ. ಗಳಾಗಿರುವುದರಿಂದ ಅವರ ವಿರುದ್ಧದ ಆರೋಪಗಳು ಗಂಭೀರವಲ್ಲ ಎಂದು ತಿಳಿಸಿತು.