ಈ.ಡಿ. ಕಚೇರಿ ಭೇಟಿ ಮುಂದೂಡಿದ ಶರದ್ ಪವಾರ್

ಮುಂಬೈ, ಸೆ.27: ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ನ ಹಗರಣದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಈ.ಡಿ.)ಕಚೇರಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಎನ್ಸಿಪಿ)ಅಧ್ಯಕ್ಷ ಶರದ್ ಪವಾರ್ ಮುಂದೂಡಿದ್ದಾರೆ.
ಮುಂಬೈ ಪೊಲೀಸ್ ಆಯುಕ್ತ ಸಂಜಯ್ ಬಾರ್ವೆ ಕಾನೂನು ಸುವ್ಯವಸ್ಥೆಯ ಹಿನ್ನೆಲೆಯಲ್ಲಿ ತಾವು ಈ.ಡಿ. ಕಚೇರಿ ಇರುವ ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್ಗೆ ತೆರಳದಂತೆ ಪವಾರ್ರನ್ನು ವಿನಂತಿಸಿಕೊಂಡರು. ಎನ್ಸಿಪಿ ಕಚೇರಿ ಕೂಡ ಇದೇ ಪ್ರದೇಶದಲ್ಲಿರುವ ಕಾರಣ ಎನ್ಸಿಪಿ ಬೆಂಬಲಿಗರು ಶರದ್ಪವಾರ್ ಭೇಟಿಯ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುವ ಸಾಧ್ಯತೆಯಿತ್ತು.
ತಾವು ನಮ್ಮ ಕಚೇರಿಗೆ ಬರುವ ಅಗತ್ಯವಿಲ್ಲ ಎಂದು ಈ.ಡಿ.ಅಧಿಕಾರಿಗಳು ಶರದ್ ಪವಾರ್ಗೆ ಮಾಹಿತಿ ನೀಡಿದ್ದಾರೆ.
"ವಿಪಕ್ಷ ನಾಯಕರುಗಳ ಘನತೆ ಹಾಳು ಮಾಡಲು ಈ.ಡಿ. ತನ್ನ ವಿರುದ್ಧ ಕ್ರಮ ಕೈಗೊಳ್ಳಲು ಉದ್ದೇಶಿಸಿದೆ. ಶಿವಸೇನೆ ಸಹಿತ ನನಗೆ ಬೆಂಬಲ ವ್ಯಕ್ತಪಡಿಸಿರುವ ಎಲ್ಲ ಪಕ್ಷಗಳಿಗೂ ನಾನು ಧನ್ಯವಾದ ಹೇಳುವೆ. ನನಗೆ ಕರೆ ಮಾಡಿ ಧೈರ್ಯ ತುಂಬಿರುವ ಕಾಂಗ್ರೆಸ್ ನಾಯಕರುಗಳಾದ ರಾಹುಲ್ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರಿಗೂ ಕೃತಜ್ಞತೆ ಸಲ್ಲಿಸುವೆ. ನಾನು ಪ್ರವಾಹಪೀಡಿತ ಪುಣೆ ಹಾಗೂ ಬಾರಮಿತಿಗೆ ಪ್ರವಾಸ ಕೈಗೊಳ್ಳುತ್ತೇನೆ'' ಎಂದು ಶರದ್ ಪವಾರ್ ಸುದ್ದಿಗಾರರಿಗೆ ತಿಳಿಸಿದರು.