ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯರ ಸಾಧನೆ; ರಕ್ತದ ಗುಂಪು ಹೊಂದಾಣಿಕೆಯಿಲ್ಲದ ಮೂತ್ರಪಿಂಡದ ಯಶಸ್ವಿ ಕಸಿ

ಉಡುಪಿ, ಫೆ.3: ಮೂತ್ರಪಿಂಡದ ವೈಫಲ್ಯವನ್ನು ಹೊಂದಿದ್ದ ಮತ್ತು ಕಳೆದ ಆರು ತಿಂಗಳಿಂದ ಹಿಮೋಡಯಾಲಿ ಸಿಸ್ನಲ್ಲಿರುವ ಮಗುವಿಗೆ ಮೊಟ್ಟ ಮೊದಲ ಬಾರಿಗೆ ರಕ್ತದ ಗುಂಪು ಎಬಿಒ- ಹೊಂದಾಣಿಕೆಯಾಗದ ಮೂತ್ರಪಿಂಡ ಕಸಿ ಮಾಡುವಲ್ಲಿ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾೇಜಿನ ವೈದ್ಯರು ಯಶಸ್ವಿಯಾಗಿದ್ದಾರೆ.
ಶಿವಮೊಗ್ಗದ ಒ ಪಾಸಿಟಿವ್ ರಕ್ತದ ಗುಂಪಿನ 14 ವರ್ಷದ ಬಾಲಕನಿಗೆ 3 ವರ್ಷಗಳ ಹಿಂದೆ ಕಿಡ್ನಿ ವೈಫಲ್ಯವಾಗಿರುವುದು ಪತ್ತೆಯಾಗಿತ್ತು. ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯು ಮುಂದಿನ ಎರಡು ವರ್ಷಗಳಲ್ಲಿ ಇನ್ನಷ್ಟು ಉಲ್ಬಣ ಗೊಂಡಿತ್ತು. ಇದರ ಪರಿಣಾಮ ಬಾಲಕನ ದೈಹಿಕ ಬೆಳವಣಿಗೆ ಮತ್ತು ಚಟುವಟಿಕೆ ಕಡಿಮೆಯಾಗತೊಡಗಿತ್ತು. ಹೆಚ್ಚಿನ ಆರೈಕೆಗಾಗಿ ಮಗುವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಮೂತ್ರಪಿಂಡ ವಿಭಾಗಕ್ಕೆ ಶಿಫಾರಸು ಮಾಡಲಾಗಿತ್ತು.
ಮಗುವಿನ ವೌಲ್ಯಮಾಪನದ ಬಳಿಕ ಲಭ್ಯವಿರುವ ಚಿಕಿತ್ಸಾ ಆಯ್ಕೆಗಳ ಬಗ್ಗೆ ಕುಟುಂಬಕ್ಕೆ ಸಲಹೆ ನೀಡಲಾಯಿತು. ಕುಟುಂಬವು ಸಂಭಾವ್ಯ ಮೂತ್ರಪಿಂಡ ದಾನಿ ಮತ್ತು ರಕ್ತದ ಹೊಂದಾಣಿಕೆಯ ಗುಂಪಿನಂತೆ ತಂದೆಯ ಮೂ್ರಪಿಂಡ ಕಸಿಯನ್ನು ಆಯ್ಕೆ ಮಾಡಿತ್ತು. ಆದರೂ ಪರೀಕ್ಷೆಯ ವೇಳೆ ಮಗುವಿನ ತಂದೆಗೂ ಮಧುಮೇಹ ಇರುವುದು ಪತ್ತೆಯಾಯಿತು. ಇದರಿಂದ ಆತನ ಕಿಡ್ನಿಯನ್ನು ಅಳವಡಿಸಲು ಸಾಧ್ಯವಿರಲಿಲ್ಲ.
ಬಿ ಪಾಸಿಟಿವ್ ರಕ್ತದ ಗುಂಪು ಹೊಂದಿದ್ದ ತಾಯಿ ಮೂತ್ರಪಿಂಡ ದಾನಕ್ಕೆ ಮುಂದೆ ಬಂದರು. ಇದರಿಂದ ಎ ಬಿ ಒ -ಹೊಂದಾಣಿಕೆಯಿಲ್ಲದ ಮೂತ್ರಪಿಂಡ ವನ್ನು ಕಸಿಗೆ ಆಯ್ಕೆ ಮಾಡಿಕೊಳ್ಳಲಾಯಿತು. ಅಂತಹ ಕಸಿಗೆ ಪ್ಲಾಸ್ಮಾ ಫೆರೆಸಿಸ್ ಮೂಲಕ ಮಗುವಿನ ರಕ್ತದಿಂದ ಪೂರ್ವನಿರ್ಧರಿತ ಪ್ರತಿಕಾಯಗಳನ್ನು ತೆಗೆದು ಹಾಕುವುದು ಮತ್ತು ಕಸಿ ಮಾಡುವ ಮೊದಲು ಹೆಚ್ಚುವರಿ ಇಮ್ಯುನೊಸಪ್ರೆಶನ್ ಔಷಧಿಗಳ ಬಳಕೆ ಅಗತ್ಯವಿರುತ್ತೆ.
ಅಗತ್ಯ ನೀತಿ ನಿಯಮಗಳನ್ನು ಪೂರ್ಣ ಗೊಳಿಸಿದ ನಂತರ, ಮಗುವಿಗೆ ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಅರುಣ್ ಚಾವ್ಲಾ ಮತ್ತವರ ತಂಡ ಹಾಗೂ ಟ್ರಾನ್ಸ್ಫ್ಯೂಷನ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ. ಶಮೀ ಶಾಸ್ತ್ರಿ ಮತ್ತವರ ತಂಡದ ಸಹಕಾರದೊಂದಿಗೆ ಕಳೆದ ಜ.4ರಂದು ಎಬಿಒ- ಹೊಂದಾಣಿಕೆಯಿಲ್ಲದ ಮೂತ್ರಪಿಂಡ ಕಸಿ ಮಾಡಲಾಯಿತು. 10ನೇ ದಿನದ ಬಳಿಕ ಮಗುವಿನ ಕಿಡ್ನಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರಿಂದ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಶಿವಮೊಗ್ಗದ ಈ ಕುಟುಂಬ ಬಾಲಕನ ಅರೋಗ್ಯ ಫಲಿತಾಂಶದಿಂದ ಅತ್ಯಂತ ತೃಪ್ತವಾಗಿದೆ. ಏಕೆಂದರೆ ತಾಯಿ-ಮಗ ಜೋಡಿ ಸಂಪೂರ್ಣ ಆರೋಗ್ಯದೊಂದಿಗೆ ನಿಯಮಿತವಾದ ಅನುಸರಣಾ ಭೇಟಿಗೆ ಆಸ್ಪತ್ರೆಗೆ ಬರುತ್ತಿದೆ. ಮೂತ್ರಪಿಂಡ ಕಸಿಯ ವೆಚ್ಚವನ್ನು ರಾಜ್ಯ ಮತ್ತು ಕೇಂದ್ರ ಸರಕಾರದ ನಿಧಿಯಿಂದ ಭರಿಸಲಾಯಿತು. ಇದರಿಂದ ಕುಟುಂಬದ ಆರ್ಥಿಕ ಹೊರೆ ಗಣನೀಯವಾಗಿ ಕಡಿಮೆಯಾಯಿತು.
ಕಳೆದ ಕೆಲವು ವರ್ಷಗಳಿಂದ ಮಕ್ಕಳಲ್ಲಿ ಮೂತ್ರಪಿಂಡದ ಕಾಯಿಲೆ ಮತ್ತು ವೈಫಲ್ಯದ ಸಂಭವ ಹೆಚ್ಚುತ್ತಿದೆ. ಮೂತ್ರಪಿಂಡದ ಕಾಯಿಲೆ ಇರುವ ಮಕ್ಕಳಿಗೆ ಆರಂಭಿಕ ಗುರುತಿಸುವಿಕೆ, ಸಮಯೋಚಿತ ಚಿಕಿತ್ಸೆ ಮತ್ತು ದೀರ್ಘಾವಧಿಯ ಆರೈಕೆಯ ಅಗತ್ಯವಿರುತ್ತದೆ. ಮೂತ್ರಪಿಂಡ ವೈಫಲ್ಯದ ರೋಗಿಗಳಿಗೆ ಡಯಾಲಿಸಿಸ್ ಮತ್ತು ಮೂತ್ರಪಿಂಡ ಕಸಿ ಮಾತ್ರ ಜೀವ ಉಳಿಸುವ ಕ್ರಮ ಗಳಾಗಿವೆ ಎಂದು ಮೂತ್ರಪಿಂಡ ವಿಭಾಗದ ಮುಖ್ಯಸ್ಥ ಡಾ. ಶಂಕರ್ ಪ್ರಸಾದ್ ಎನ್. ತಿಳಿಸಿದರು.ಅಗಾಧವಾದ ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿರುವ ಮಕ್ಕಳಲ್ಲಿ ಮೂತ್ರಪಿಂಡ ಕಸಿ, ಡಯಾಲಿಸಿಸ್ಗಿಂತ ಉತ್ತಮ ಆಯ್ಕೆಯಾಗಿದೆ ಮತ್ತು ಉತ್ತಮ ಗುಣಮಟ್ಟದ ಜೀವನವನ್ನು ಒದಗಿಸುತ್ತದೆ ಎಂದೂ ಅವರು ಹೇಳಿದರು.
ಮೂತ್ರಪಿಂಡ ಕಸಿಗೆ ಇರುವ ಪ್ರಮುಖ ಅಡಚಣೆ ಸೂಕ್ತವಾದ ದಾನಿಯನ್ನು ಕಂಡುಹಿಡಿಯುವುದು. ರಕ್ತದ ಗುಂಪಿನ ಅಸಾಮರಸ್ಯವು ಜೀವಂತ ಮೂತ್ರಪಿಂಡ ದಾನಕ್ಕೆ ಪ್ರಮುಖ ತಡೆಗೋಡೆಯಾಗಿದೆ. ಇದನ್ನು ಇತ್ತೀಚೆಗೆ ಪರಿಣಾಮಕಾರಿ ಯಾಗಿ ನಿವಾರಿಸಲಾಗಿದೆ.ಮಕ್ಕಳಲ್ಲಿ, ಎಬಿಒ ಹೊಂದಾಣಿಕೆಯಾಗದ ಕಸಿ ಮಾಡುವಿಕೆ, ಅಂದರೆ ರಕ್ತದ ಗುಂಪುಗಳು ಹೊಂದಿಕೆಯಾಗದಿದ್ದಾಗ, ಮೂತ್ರಪಿಂಡ ಕಸಿಗೆ ಸಾಕಷ್ಟು ತರಬೇತಿ ಮತ್ತು ಪರಿಣತಿಯ ಅಗತ್ಯವಿರುತ್ತದೆ ಎಂದು ಮಕ್ಕಳ ಮೂತ್ರಪಿಂಡ ವಿಭಾಗದ ತಜ್ಞ ಡಾ. ದರ್ಶನ್ ರಂಗಸ್ವಾಮಿ ಅಭಿಪ್ರಾಯ ಪಡುತ್ತಾರೆ.
ಎಲ್ಲಾ ವಯಸ್ಸಿನ ಮಕ್ಕಳಿಗೆ ಡಯಾಲಿಸಿಸ್, ಮೂತ್ರಪಿಂಡದ ಬಯಾಪ್ಸಿ ಮತ್ತು ಕಿಡ್ನಿ ಕಸಿ ಸೌಲಭ್ಯವು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಲಭ್ಯವಿದ್ದು ಕರಾವಳಿ ಮತ್ತು ಮಧ್ಯ ಕರ್ನಾಟಕದ ರೋಗಿಗಳಿಗೆ ಅಗತ್ಯವಿರುವ ಎಲ್ಲಾ ಚಿಕಿತ್ಸೆ ಯನ್ನು ಒದಗಿಸುತ್ತಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಹೇಳಿದ್ದಾರೆ.