ದ.ಕ.ಜಿಲ್ಲೆ: ಉಕ್ರೇನ್ನಿಂದ ತವರೂರಿಗೆ ಮರಳಿದ 7 ವೈದ್ಯಕೀಯ ವಿದ್ಯಾರ್ಥಿಗಳು
ಇನ್ನೂ 11 ಮಂದಿಯ ಕರೆತರಲು ಮುಂದುವರಿದ ಪ್ರಯತ್ನ

ಮಂಗಳೂರು, ಮಾ.5: ಯುದ್ಧಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ದ.ಕ.ಜಿಲ್ಲೆಯ 18 ಮಂದಿ ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ 7 ಮಂದಿ ತವರೂರಿಗೆ ಮರಳಿದ್ದು, ಇನ್ನೂ 11 ಮಂದಿಯನ್ನು ಕರೆತರಲು ಪ್ರಯತ್ನ ಮುಂದುವರಿದಿದೆ ಎಂದು ದ.ಕ.ಜಿಲ್ಲಾಧಿಕಾರಿಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಭಾರತ ಸರಕಾರದ ‘ಆಪರೇಷನ್ ಗಂಗಾ’ ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ತಾಲೂಕಿನ ಹೀನಾ ಫಾತಿಮಾ, ಮಂಗಳೂರು ತಾಲೂಕಿನ ಜೆ. ಅನುಷಾ ಭಟ್, ಅಂಶಿತಾ ರೆಶಾಲ್ ಪದ್ಮಶಾಲಿ, ಲಕ್ಷಿತಾ ಪುರುಷೋತ್ತಮ್, ಪೂಜಾ ಮಲ್ಲಪ್ಪ ಐತಾಳ್, ಮೂಡುಬಿದಿರೆ ತಾಲೂಕಿನ ಪ್ರಣವ್ ಕುಮಾರ್ ಎಸ್. ಮತ್ತು ಪ್ರೀತಿ ಪೂಜಾರಿ ತವರೂರು ತಲುಪಿದ್ದಾರೆ.
ಈ ಮಧ್ಯೆ ತತ್ಕಾಲ ಪಾಸ್ಪೋರ್ಟ್ನಲ್ಲಿ ಅನೈನಾ ಅನ್ನಾ ಏರ್ಲಿಫ್ಟ್ ಆಗಿದ್ದು, ಶನಿವಾರ ದೆಹಲಿ ತಲುಪಿದ್ದಾರೆ. ಈಕೆ ಉಕ್ರೇನ್ನ ಖಾರ್ಕೀವ್ನಿಂದ ಪೋಲೆಂಡ್ ತಲುಪಿದ್ದು ಅಲ್ಲಿಂದ ಶನಿವಾರ ಏರ್ಲಿಫ್ಟ್ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಕ್ಲೇಟನ್ ಮತ್ತು ಅಹ್ಮದ್ ಸಾದ್ ಅರ್ಷದ್ ಸ್ಲೊವಾಕಿಯಾದಿಂದ ಏರ್ಲಿಫ್ಟ್ಗೊಂಡಿದ್ದಾರೆ. ಉಳಿದವರು ರೊಮೇನಿಯಾ, ಹಂಗೇರಿ ಶೆಲ್ಟರ್ಗಳಿಂದ ಏರ್ಲಿಫ್ಟ್ಗೆ ಸನ್ನದ್ಧರಾಗಿದ್ದಾರೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ