ದೇವನೂರು ಪೆನ್ನಿಗೆ ನಿವೃತ್ತಿ ಕೊಟ್ಟು ಮೈಕ್ ಮುಂದೆ ನಿಂತಿದ್ದಾರೆ: ಪ್ರತಾಪ್ ಸಿಂಹ

ಪ್ರತಾಪ್ ಸಿಂಹ
ಉಡುಪಿ, ಮೇ 28: ಸಮಾಜ ಮತ್ತು ಕನ್ನಡ ಪಠ್ಯ ಪರಿಷ್ಕರಣೆ ಮಾಡಿದ್ದೇವೆ. ಆ ಬಗ್ಗೆ ಡಿಕೆಶಿ, ಸಿದ್ದರಾಮಯ್ಯ, ಬರಗೂರು ರಾಮಚಂದ್ರಪ್ಪ, ದೇವನೂರು ಮಹಾದೇವ ಇಲ್ಲಸಲ್ಲದ ಊಹಾ ಪೋಹ ಸೃಷ್ಟಿ ಮಾಡಿ ಹಬ್ಬಿಸಿದ್ದಾರೆ. ದೇವನೂರು ಪೆನ್ನಿಗೆ ನಿವೃತ್ತಿ ಕೊಟ್ಟು ಮೈಕ್ ಮುಂದೆ ನಿಂತಿದ್ದಾರೆ ಎಂದು ಸಂಸದ ಪ್ರತಾಪ್ಸಿಂಹ ಟೀಕಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಸಚಿವರು ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಬಹಿರಂಗ ಚರ್ಚೆ ಆಹ್ವಾನ ನೀಡಿದ್ದಾರೆ. ಖುಲ್ಲಂ ಖುಲ್ಲ ಚರ್ಚೆ ಮಾಡೋಣ ಎಂದು ಕರೆ ನೀಡಿದರೂ, ಚರ್ಚೆಯಿಂದ ಯಾಕೆ ಪಲಾಯನ ಮಾಡಿತ್ತಿದ್ದೀರಿ? ಅನುಮಾನ ಸೃಷ್ಟಿ ಮಾಡುವುದು, ಊಹಾಪೋಹ ಹಬ್ಬಿಸುವುದು ಇವರ ಉದ್ದೇಶ. ಅನಗತ್ಯ ತಕರಾರು ಎತ್ತುವವರು ವಿಚಾರ ನಪುಂಸಕರು. ಇವರಲ್ಲಿ ವಿಚಾರ ಇಲ್ಲ ಬರೀ ಉಗುಳು ಮಾತ್ರ ಎಂದು ದೂರಿದರು.
ವಿಚಾರ ನಪುಂಸಕತೆ ಇರುವುದರಿಂದ ಬರವಣಿಗೆ ಬಿಟ್ಟು ಎಷ್ಟೋ ವರ್ಷಗಳಾಯಿತು. ಇವರು ಮೈಕ್ ಮುಂದೆ ನಿಲ್ಲುವ ಮೈಕಾಸುರರಾಗಿದ್ದಾರೆ. ವಿಚಾರ ನಪುಂಸಕತೆ ಇಲ್ಲದಿದ್ದರೆ ಬಹಿರಂಗವಾಗಿ ಚರ್ಚೆಗೆ ಬನ್ನಿ. ಭಗತ್ ಸಿಂಗ್ ಪಠ್ಯ ಕೈಬಿಟ್ಟಿದ್ದಕ್ಕೆ ಸಾಕ್ಷ್ಯ ತೋರಿಸಿ. ನಾರಾಯಣಗುರು ಪಠ್ಯವನ್ನು ಸಮಾಜದಿಂದ ಕನ್ನಡ ಪಾಠಕ್ಕೆ ವರ್ಗಾಯಿಸಲಾಗಿದೆ. ಏಳನೇ ತರಗತಿಯ ಪಠ್ಯದಲ್ಲೂ ನಾರಾಯಣ ಗುರುಗಳ ಪಾಠ ಇದೆ ಎಂದು ಅವರು ತಿಳಿಸಿದರು.
ದೇವನೂರು ಮಹಾದೇವ 2014, 2019ರಲ್ಲಿ ಮೈಸೂರಿನಲ್ಲಿ ನನ್ನ ವಿರುದ್ಧ ಪ್ರಚಾರ ಮಾಡಿದ್ದಾರೆ. ದೇವನೂರು ಮಹಾದೇವ ಅವರ ಬಗ್ಗೆ ವೈಯಕ್ತಿಕವಾಗಿ ಅಪಾರ ಗೌರವವಿದೆ. ಕುಸುಮಬಾಲೆ ಎಂಬ ಅದ್ಭುತ ಕೃತಿಯನ್ನು ಬರೆದವರು. ಕಾಂಗ್ರೆಸ್ ಪ್ರಚಾರ ಊಹಾಪೋಹಗಳನ್ನು ಬಿಟ್ಟು ಹಿಂದಿನ ಮಹಾದೇವರಾಗಿ, ಮತ್ತೆ ಕೈಗೆತ್ತಿಕೊಂಡು ಒಂದು ಅದ್ಭುತ ಕೃತಿಯನ್ನು ರಚನೆ ಮಾಡಲಿ. ನಾವು ಕೂಡ ದೇವನೂರನ್ನು ಇಷ್ಟಪಡುತ್ತೇವೆ ಗೌರವಿಸುತ್ತೇವೆ ಎಂದು ಅವರು ದೂರಿದರು.
ನಾಡಗೀತೆಗೆ ರೋಹಿತ್ ಚಕ್ರತೀರ್ಥ ಅಪಮಾನ ಮಾಡಿದ್ದಾರೆ ಎಂಬ ವಿಚಾರವನ್ನು ನಾನು ಕೂಡ ಗಮನಿಸಿದ್ದೇನೆ. ವಾಟ್ಸಾಪ್ನಲ್ಲಿ ಬಂದ ಸಂದೇಶವನ್ನು ಅವರು ಫೇಸ್ಬುಕ್ನಲ್ಲಿ ಹಾಕಿದ್ದರು. ಅದನ್ನು ಯಾರೋ ವ್ಯಂಗ್ಯ ಮಾಡಿದ್ದರು ಅದು ತಪ್ಪು. ಅದನ್ನು ರೋಹಿತ್ ಚಕ್ರತೀರ್ಥ ರಚನೆ ಮಾಡಿದ್ದಲ್ಲ. ಈ ಕುರಿತು ಕೇಸು ದಾಖಲಾಗಿ, ಬಿ ರಿಪೋರ್ಟ್ ಕೂಡ ಆಗಿದೆ. ಅನಗತ್ಯವಾಗಿ ಒಬ್ಬ ವ್ಯಕ್ತಿಯನ್ನು ಟಾರ್ಗೆಟ್ ಮಾಡಲಾಗುತ್ತಿದೆ. ರೋಹಿತ್ ರನ್ನು ತುಳಿಯುವ, ತೇಜೋವಧೆ ಮಾಡುವ ಪ್ರಯತ್ನ ನಡೆಯುತ್ತಿದೆ. ವೈಯಕ್ತಿಕವಾಗಿ ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದು ಅವರು ತಿಳಿಸಿದರು.
ಸಿದ್ದರಾಮಯ್ಯ ಆರೆಸ್ಸೆಸ್ ಮೂಲ ಹುಡುಕುವ ಮೊದಲು ಸೋನಿಯಾ ಗಾಂಧಿ ಮೂಲ ಹುಡುಕಲಿ. ಕರ್ನಾಟಕದ ಜನತೆಗೆ ಇದನ್ನು ಮೊದಲು ತಿಳಿಸಿ. ಆಮೇಲೆ ಬೇರೆಯವರ ಬಗ್ಗೆ ಪ್ರಶ್ನೆ ಮಾಡಿ ಎಂದು ಅವರು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.