ಪವನ್ ಖೇರ ಸಹಿತ ಪ್ರಮುಖ ನಾಯಕರಿಗೆ ರಾಜ್ಯಸಭೆ ಟಿಕೆಟ್ ನಿರಾಕರಿಸಿದ ಕಾಂಗ್ರೆಸ್: ಭುಗಿಲೆದ್ದ ಅಸಮಾಧಾನ

ಪವನ್ ಖೇರ, Photo:ANI
ಹೊಸದಿಲ್ಲಿ: ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಪಕ್ಷದ ವಕ್ತಾರ ಪವನ್ ಖೇರಾ ಸೇರಿದಂತೆ ಪ್ರಮುಖ ನಾಯಕರನ್ನು ಕೈಬಿಟ್ಟಿರುವ ಕಾಂಗ್ರೆಸ್ ನಾಯಕತ್ವ ಟೀಕೆಗೆ ಗುರಿಯಾಗಿದೆ ಎಂದು NDTV ವರದಿ ಮಾಡಿದೆ.
ಟಿವಿ ಚರ್ಚೆಗಳು ಹಾಗೂ ಮಾಧ್ಯಮ ಸಂವಾದಗಳಲ್ಲಿ ಪಕ್ಷದ ರಕ್ಷಣೆಗೆ ನಿಲ್ಲುವಲ್ಲಿ ಹೆಸರುವಾಸಿಯಾಗಿರುವ ಖೇರಾ, ಮೇಲ್ಮನೆಗೆ ಕಾಂಗ್ರೆಸ್ ತನ್ನ 10 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ ಹಿಂದಿಯಲ್ಲಿ ಟ್ವೀಟಿಸಿ ತನ್ನ ನಿರಾಶೆಯನ್ನು ವ್ಯಕ್ತಪಡಿಸಿದರು.
"ಬಹುಶಹ ನನ್ನ ತಪಸ್ಸಿನಲ್ಲಿ ಏನೋ ಕಡಿಮೆಯಾಗಿದೆ" ಎಂದು ಖೇರಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಛತ್ತೀಸ್ಗಢದಿಂದ ರಾಜೀವ್ ಶುಕ್ಲಾ ಹಾಗೂ ರಂಜೀತ್ ರಂಜನ್, ಹರ್ಯಾಣದಿಂದ ಅಜಯ್ ಮಾಕನ್, ಕರ್ನಾಟಕದಿಂದ ಜೈರಾಮ್ ರಮೇಶ್, ಮಧ್ಯಪ್ರದೇಶದಿಂದ ವಿವೇಕ್ ತಂಖಾ, ಮಹಾರಾಷ್ಟ್ರದಿಂದ ಇಮ್ರಾನ್ ಪ್ರತಾಪ್ಘರ್ಹಿ, ರಾಜಸ್ಥಾನದಿಂದ ರಣದೀಪ್ ಸಿಂಗ್ ಸುರ್ಜೆವಾಲಾ, ಮುಕುಲ್ ವಾಸ್ನಿಕ್ ಹಾಗೂ ಪ್ರಮೋದ್ ತಿವಾರಿ, ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರನ್ನು ತಮಿಳುನಾಡಿನಿಂದ ಕಣಕ್ಕಿಳಿಸಿದೆ.
ಪಕ್ಷವು ತನ್ನ ರಾಜಸ್ಥಾನದ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿ ಟೀಕೆಗೆ ಒಳಗಾಗಿದೆ. ಅಲ್ಲಿ ಆ ರಾಜ್ಯದವರಿಗೆ ಅವಕಾಶ ನೀಡಿಲ್ಲ.
ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್ ಹಾಗೂ ಆನಂದ್ ಶರ್ಮಾ ಅವರಿಗೆ ಅವಕಾಶ ನೀಡದಿದ್ದಕ್ಕಾಗಿ ಪಕ್ಷವನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಲಾಗಿದೆ.
ಕವಿ-ರಾಜಕಾರಣಿ ಇಮ್ರಾನ್ ಪ್ರತಾಪ್ಘರ್ಹಿ ಅವರನ್ನು ಆಯ್ಕೆ ಮಾಡಿದ ಪಕ್ಷದ ಕ್ರಮವೂ ಟೀಕೆಗೆ ಗುರಿಯಾಯಿತು. ಪಕ್ಷದ ನಾಯಕಿ ಹಾಗೂ ಜನಪ್ರಿಯ ನಟಿ ನಗ್ಮಾ ಅವರು ಖೇರಾ ಅವರ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು "ಇಮ್ರಾನ್ ಭಾಯ್ ಮುಂದೆ ನಮ್ಮ 18 ವರ್ಷಗಳ ತಪಸ್ಸು ಕೂಡ ಕಡಿಮೆಯಾಯಿತು" ಎಂದು ಬರೆದಿದ್ದಾರೆ.
ಕಾಂಗ್ರೆಸ್ನ ಮುಂಬೈ ಘಟಕದ ಉಪಾಧ್ಯಕ್ಷೆಯಾಗಿರುವ ನಗ್ಮಾ, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 2003 ರಲ್ಲಿ ಕಾಂಗ್ರೆಸ್ಗೆ ಸೇರಿದಾಗ ರಾಜ್ಯಸಭೆಯಲ್ಲಿ "ವೈಯಕ್ತಿಕವಾಗಿ ಅವಕಾಶ ಕಲ್ಪಿಸಲು" ಬದ್ಧರಾಗಿದ್ದರು ಎಂದು ಹೇಳಿದರು.
ಬಿಜೆಪಿಯ ರಾಜಸ್ಥಾನ ಘಟಕದ ಮುಖ್ಯಸ್ಥ ಸತೀಶ್ ಪೂನಿಯಾ ಅವರು ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. "ಕಾಂಗ್ರೆಸ್ನ ಚಿಂತನ ಶಿಬಿರ ರಾಜಸ್ಥಾನದಲ್ಲಿ ನಡೆದಿದೆ. ಈಗ ಈ ಚಿಂತನೆಯ ಮತ್ತೊಂದು ಸಾಧನೆಯನ್ನು ನೋಡಿ. ಸ್ಥಳೀಯ ಅಭ್ಯರ್ಥಿಗಳ ಕೋಟಾವನ್ನು ಗಮನಿಸಿ....'ಸ್ಥಳೀಯರು' ಇಲ್ಲದೆ 'ಧ್ವನಿ' ಎತ್ತುವವರು ಯಾರು..?" ಎಂದು ಟ್ವೀಟ್ ಮಾಡಿದ್ದಾರೆ.
‘शायद मेरी तपस्या में कुछ कमी रह गई’
— Pawan Khera (@Pawankhera) May 29, 2022
‘मुझे पहचान कांग्रेस ने दी है’
— Pawan Khera (@Pawankhera) May 30, 2022
मैं अपनी इस बात से सहमत भी हूँ और इस पर अडिग भी हूँ। https://t.co/zbc6LNwy5n
SoniaJi our Congress president had personally committed to accommodating me in RS in 2003/04 whn I joined Congressparty on her behest we weren’t in power thn.Since then it’s been 18Yrs they dint find an opportunity Mr Imran is accommodated in RS frm Maha I ask am I less deserving
— Nagma (@nagma_morarji) May 30, 2022