ಹೆಬ್ರಿಯಲ್ಲಿ ನೂತನ ನಾಡಕಚೇರಿ ಉದ್ಘಾಟನೆ

ಉಡುಪಿ : ಹೆಬ್ರಿಯು ತಾಲೂಕು ಆಗಿ ತಾಲೂಕು ಕಚೇರಿಗೆ ಸುಸಜ್ಜಿತ ಕಟ್ಟಡವಾಗಿದೆ. ನಾಡಾ ಕಚೇರಿ ಅಟಲ್ ಜನಸ್ನೇಹಿ ಕೇಂದ್ರ ಇಲ್ಲದೆ ಜನತೆಯ ಕಚೇರಿಯ ಕೆಲಸಗಳಿಗೆ ಸಮಸ್ಯೆಯಾಗಿತ್ತು. ಇದೀಗ ನೂತನ ತಾಲೂಕು ಕಚೇರಿಯ ಲೋಕಾರ್ಪಣೆಯ ವೇಳೆಗೆ ಅಟಲ್ ಜನಸ್ನೇಹಿ ಕೇಂದ್ರ ಆರಂಭವಾಗಿರುವುದು ಅತ್ಯಂತ ಖುಷಿ ನೀಡಿದೆ. ಜನರ ಸೇವೆಗೆ ನಾವು ಸದಾ ಸಿದ್ಧ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಸೋಮವಾರ ಹೆಬ್ರಿ ತಾಲೂಕು ಕಚೇರಿಯಲ್ಲಿ ನೂತನವಾಗಿ ಆರಂಭಗೊಂಡ ಅಟಲ್ ಜನಸ್ನೇಹಿ ಕೇಂದ್ರವನ್ನು ಲೋಕಾರ್ಪಣೆಗೊಳಿಸಿ ಸಚಿವರು ಮಾತನಾಡುತಿದ್ದರು.
ಹೆಬ್ರಿ ತಾಲೂಕು ಆಡಳಿತಕ್ಕೆ ಸಂಬಂಧಿಸಿದ ಬಹುತೇಕ ಕೆಲಸಗಳು, ಮೂಲ ಸೌಕರ್ಯಗಳನ್ನು ಈಗಾಗಲೆ ಪೂರೈಸಲಾಗಿದೆ. ಮುಂದೆ ತಾಲೂಕು ಪಂಚಾಯಿತಿಗೆ ಸುಸಜ್ಜಿತ ಕಚೇರಿ ಕಟ್ಟಡ ನಿರ್ಮಾಣ ಸಹಿತ ಅಭಿವೃದ್ಧಿ ಕೆಲಸ ವನ್ನು ಅತೀ ಶೀಘ್ರವೇ ಮಾಡಲಾಗುತ್ತದೆ ಎಂದರು.
ಜನತೆಗೆ ತೀವ್ರ ಸಮಸ್ಯೆಯಾಗಿರುವ ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಇತ್ಯರ್ಥ ಪಡಿಸುತ್ತಿದ್ದು, ರಾಜ್ಯದಲ್ಲಿ ೬.೫೦ ಲಕ್ಷ ಹೆಕ್ಟೇರ್ ಜಮೀನನ್ನು ಡೀಮ್ಡ್ ಫಾರೆಸ್ಟ್ನಿಂದ ವಿರಹಿತಗೊಳಿಸಲಾಗುತ್ತಿದೆ. ಇದರಿಂದ ಜನತೆಗೆ ಹಕ್ಕು ಪತ್ರ ನೀಡುವುದು ಮತ್ತು ಸರ್ಕಾರಿ ವ್ಯವಸ್ಥೆಗಳಿಗೆ ಜಮೀನು ಕಾಯ್ದಿರಿಸುವ ಕಾರ್ಯ ಶೀಘ್ರವಾಗಿ ನಡೆಯಲಿದೆ ಎಂದರು.
ಹೆಬ್ರಿ ತಾಲೂಕಿನಲ್ಲಿ ಜನತೆ ಕಂದಾಯ ಸೇವೆಗಳನ್ನು ಪಡೆಯಲು ಕುಂದಾಪುರ ಮತ್ತು ಅಜೆಕಾರಿಗೆ ಹೋಗ ಬೇಕಿತ್ತು. ಇನ್ನು ಮುಂದೆ ಕಂದಾಯ ಇಲಾಖೆಯ ಸೇವೆಗಳು ತಾಲೂಕಿನ ೧೬ ಗ್ರಾಮಗಳ ಜನತೆಗೆ ಇಲ್ಲಿಯೇ ದೊರೆತು ಕೆಲಸಕ್ಕೆ ವೇಗ ದೊರೆಯಲಿದೆ ಎಂದು ತಹಶೀಲ್ದಾರ್ ಪುರಂದರ್ ತಿಳಿಸಿದರು.
ಹೆಬ್ರಿ ತಾಲೂಕು ರಚನಾ ಹೋರಾಟ ಸಮಿತಿಯ ಅಧ್ಯಕ್ಷ ಎಚ್. ಭಾಸ್ಕರ್ ಜೋಯಿಸ್ ಮತ್ತು ಕರಬೆಟ್ಟು ಸಂಜೀವ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಹೆಬ್ರಿ ಗ್ರಾಪಂ ಅಧ್ಯಕ್ಷೆ ಮಾಲತಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕೆ.ಜಿ, ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಲವರಿಗೆ ಪಿಂಚಣಿ ಯೋಜನೆ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು. ಪ್ರಕಾಶ್ ಪೂಜಾರಿ ಸ್ವಾಗತಿಸಿ, ನಿರೂಪಿಸಿದರು.