ಅತಿವೃಷ್ಟಿ ಹಾನಿಗೆ ತುರ್ತು ಪರಿಹಾರ ನೀಡಿ: ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ

ಉಡುಪಿ, ಜು.14:ಪ್ರತಿವರ್ಷ ಮಳೆಯಿಂದ ಆಗುವ ಹಾನಿ ಒಂದೇ ಪ್ರದೇಶ ದಲ್ಲಿ ಸಂಭವಿಸುವ ಸಾಧ್ಯತೆ ಸರ್ವೆಸಾಮಾನ್ಯವಾಗಿದ್ದು, ಇವುಗಳಿಗೆ ಶಾಶ್ವತ ಪರಿಹಾರ ಒದಗಿಸುವ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಣಿಪಾಲದ ಜಿಲ್ಲಾಪಂಚಾಯತ್ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಇತ್ತೀಚಿನ ವ್ಯಾಪಕ ಮಳೆಹಾನಿಗೆ ಸಂಬಂಧಿಸಿದಂತೆ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಇತರೆ ಅಧಿಕಾರಿ ಗಳೊಂದಿಗೆ ಬುಧವಾರ ಮಳೆಹಾನಿ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಪ್ರತಿವರ್ಷ ಪ್ರವಾಹ ಹಾಗೂ ಕಡಲಕೊರೆತಕ್ಕೆ ಒಳಪಡುವ ಪ್ರದೇಶಗಳಲ್ಲಿ ಶಾಶ್ವತ ಪ್ರವಾಹ ನಿರ್ವಹಣಾ ಕಾರ್ಯಪಡೆ ಸಮಿತಿಗಳನ್ನು ರಚಿಸಿಕೊಂಡು ಪ್ರವಾಹ ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವಂತೆ ತಿಳಿಸಿದ ಅವರು, ಇದಕ್ಕಾಗಿ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದರು.
ಈ ವರ್ಷದ ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ರೈತರು ಹಾಗೂ ಬಡ ಜನರಿಗೆ ಪರಿಹಾರ ಸೌಲಭ್ಯಗಳನ್ನು ಸಂಬಂಧಿಸಿದ ಇಲಾಖೆಗಳು ಶೀಘ್ರವಾಗಿ ತಲುಪಿಸಲು ಕಾರ್ಯಪ್ರವೃತ್ತರಾಗಬೇಕು. ಸಂತ್ರಸ್ಥರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ವಿಪತ್ತು ಪರಿಹಾರ ಮೊತ್ತವನ್ನು ಒಟ್ಟುಗೂಡಿಸಿಪರಿಹಾರ ನೀಡಬೇಕು. ಮನೆ ಕಳೆದುಕೊಂಡು ಕಾಳಜಿಕೇಂದ್ರದಲ್ಲಿ ಇರುವ ನಿರಾಶ್ರಿತರು ಅಲ್ಲಿ ಇರುವವರೆಗೂ ಸರಕಾರದ ನಿಯಮಾವಳಿಯಂತೆ ದೈನಂದಿನ ಅಗತ್ಯತೆಗಳನ್ನು ಒದಗಿಸಬೇಕು. ಆಹಾರದ ಜೊತೆಗೆ ಮೊಟ್ಟೆಯನ್ನು ನೀಡಬೇಕು. ನಿರಾಶ್ರಿತರು ಒಂದೊಮ್ಮೆ ಕಾಳಜಿ ಕೇಂದ್ರಗಳಿಗೆ ಹೋಗದೇ ತಮ್ಮ ಸಂಬಂಧಿಗಳ ಮನೆಯಲ್ಲಿದ್ದರೂ ಸಹ ಆಹಾರದ ಕಿಟ್ ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಮುಖ್ಯಮಂತ್ರಿಗಳಿಂದ ಆಕ್ಷೇಪ: ಸಾಮಾನ್ಯವಾಗಿ ಮಳೆಯಿಂದಾಗಿ ಮನೆಹಾನಿ, ಗುಡ್ಡ ಕುಸಿತ, ಮೂಲಭೂತ ಸೌಕರ್ಯಗಳ ಹಾನಿ ಉಂಟಾಗುತ್ತವೆ. ಇವುಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳಬೇಕು ಎಂದ ಅವರು, ಕಳೆದ 3 ವರ್ಷಗಳಿಂದ ಮಳೆಯಿಂದಾಗಿ ಮನೆ ಕಳೆದುಕೊಂಡವವರಿಗೆ ಹೊಸ ವಸತಿ ನಿರ್ಮಾಣಕ್ಕೆ ರಾಜೀವ್ಗಾಂಧೀ ವಸತಿ ನಿಗಮದ ವತಿಯಿಂದ ನೀಡುವ ಸೌಲಭ್ಯ ಸಮರ್ಪಕವಾಗಿ ಅನುಷ್ಠಾನವಾಗದಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಗ್ರಾಪಂಗಳ ಪಿಡಿಓಗಳು ಹಾಗೂ ಕಿರಿಯ ಇಂಜಿನಿಯರ್ಗಳು ನಿಗದಿತ ಕಾಲಾವಧಿಯೊಳಗೆ ಸರಿಯಾದ ವರದಿಗಳನ್ನು ನೀಡದೇ ಇರುವುದು ಇದಕ್ಕೆ ಕಾರಣ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಎಚ್ಚರವಹಿಸಬೇಕು. ಗ್ರಾಮೀಣಾಭಿವೃಧ್ದಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ನಿಗಾವಹಿಸುವಂತೆ ಸೂಚನೆಗಳನ್ನು ನೀಡಿದರು.
ಗದ್ದೆಗಳಲ್ಲಿ ನೀರು ತುಂಬಿಕೊಂಡು ಹಾನಿಗೊಳಗಾಗಿರುವ ಬೆಳೆ ಹಾನಿ ಸಮೀಕ್ಷೆಯನ್ನು ಮುಂದಿನ 2 ದಿನಗಳ ಒಳಗೆ ಹಾಗೂ ತೋಟಗಾರಿಕಾ ಬೆಳೆಗಳ ಹಾನಿಯನ್ನು 10 ದಿನಗಳ ಒಳಗೆ ಅಂದಾಜಿಸಿ ಪರಿಹಾರ ನೀಡುವ ಕೆಲಸವಾಗ ಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಮಳೆಗಾಳಿಯಿಂದ ವಿದ್ಯುತ್ಕಂಬಗಳು, ಟ್ರಾನ್ಸ್ಫಾರ್ಮರ್ಗಳು, ವಿದ್ಯುತ್ ಲೈನ್ಗಳು ಹಾಳಾಗುವುದು ನಿರೀಕ್ಷಿತವಾಗಿದ್ದು, ಇವುಗಳ ದಾಸ್ತಾನು ಇಟ್ಟುಕೊಂಡು ಪುನರ್ ನಿರ್ಮಾಣ ಕಾಮಗಾರಿಗಳನ್ನು ಆದ್ಯತೆಯ ಮೇಲೆ 2 ದಿನಗಳ ಒಳಗೆ ಕೈಗೊಂಡು, ವಿದ್ಯುಚ್ಛಕ್ತಿ ಸೌಲಭ್ಯಗಳನ್ನು ಪೂರ್ಣಪ್ರಮಾಣದಲ್ಲಿ ಒದಗಿ ಸುವಂತೆ ಮೆಸ್ಕಾಂ ಆಧಿಕಾರಿಗಳಿಗೆ ಸೂಚಿಸಿದರು.
ಕೃತಕ ನೆರೆ ತಪ್ಪಿಸಿ: ಪಶ್ಚಿಮ ಘಟ್ಟಗಳಿಂದ ನೀರು ರಭಸವಾಗಿ ನದಿಗಳಲ್ಲಿ ಹರಿದು ಬರುವಾಗ ಮರದ ದಿಮ್ಮಿಗಳನ್ನು ಹೊತ್ತು ತಂದು ಕಿಂಡಿ ಅಣೆಕಟ್ಟುಗಳಿಗೆ ಅಡ್ಡಲಾಗಿ ನಿಂತು ನದಿ ನೀರು ಸರಾಗವಾಗಿ ಹರಿದು ಹೋಗದೇ ಕೃತಕ ನೆರೆಗಳು ಉಂಟಾಗಿ ಹತ್ತಿರದ ಗ್ರಾಮಗಳಿಗೆ ಮತ್ತು ರೈತರ ಹೊಲ ಗದ್ದೆಗಳಿಗೆ ತೊಂದರೆ ಉಂಟು ಮಾಡುತ್ತಿವೆ. ಮುಂದೆ ಹೀಗಾಗದಂತೆ ಅರಣ್ಯ ಇಲಾಖೆ ಅದಿಕಾರಿಗಳು ಎಚ್ಚರವಹಿಸಬೇಕೆಂದು ಸೂಚನೆ ನೀಡಿದರು.
ತುರ್ತು ಸಂದರ್ಭದಲ್ಲಿ ಜನಸಾಮಾನ್ಯರ ರಕ್ಷಣೆಗೆ ಸ್ಪಂದಿಸುವ ಸ್ವಯಂ ಸೇವಕರಿಗೆ ಅಪದಮಿತ್ರ ಯೋಜನೆಯಡಿ ತರಬೇತಿ ಒದಗಿಸಿ,ಸುರಕ್ಷಾ ಸಾಧನಗಳ ಕಿಟ್ಗಳನ್ನು ವಿತರಿಸಬೇಕು ಎಂದ ಸಿಎಂ ಬೊಮ್ಮಾಯಿ, ಅವರ ಸುರಕ್ಷತೆಗೆ 5 ಲಕ್ಷದವರೆಗೆ ಜೀವವಿಮಾ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ಜಲವಲಯಗಳ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಮನೆಗಳನ್ನು ನಿರ್ಮಾಣ ಮಾಡಿ ಹಾನಿಗೊಳಗಾದ ಸಂದರ್ಭದಲ್ಲಿ ಪರಿಹಾರ ಒದಗಿಸಲು ಸಾಧ್ಯವಿಲ್ಲ ಎಂದು ಉನ್ನತ ನ್ಯಾಯಾಲಯದ ಆದೇಶಗಳು ಸ್ಪಷ್ಟಪಡಿಸಿವೆ. ಜಲವಲಯಗಳ ವ್ಯಾಪ್ತಿಯನ್ನು ಗುರುತಿಸುವ ಸಂದರ್ಭದಲ್ಲಿ ಜನಸಾಮಾನ್ಯರಿಗೆ ತೊಂದರೆ ಯಾಗದ ರೀತಿಯಲ್ಲಿ ನಿಗದಿಪಡಿಸಲಾಗುವುದು ಎಂದರು.
ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರ ವಸತಿಗಳು ಮಳೆಯಿಂದ ಹಾನಿಗೊ ಳಗಾದಲ್ಲಿ ಅವರಿಗೆ ಪರಿಹಾರ ಒದಗಿಸಬೇಕೆಂಬ ಆದೇಶವನ್ನು ಈಗಾಗಲೇ ಹೊರಡಿಸಲಾಗಿದೆ. ಇದನ್ನು ಅಧಿಕಾರಿಗಳು ಪಾಲನೆ ಮಾಡಬೇಕು ಎಂದರು.
ಕಡಲು ಕೊರೆತ: ಕರಾವಳಿ ಜಿಲ್ಲೆಗಳಲ್ಲಿ ಕಡಲ ಕೊರೆತಗಳು ಪ್ರತೀ ಮಳೆಗಾಲ ದಲ್ಲಿಯೂ ಉಂಟಾಗುವುದು ಸಾಮಾನ್ಯವಾಗಿದ್ದು, ಇದರ ಶಾಶ್ವತ ಪರಿಹಾರಕ್ಕೆ ಯೋಜನೆಗಳನ್ನು ರೂಪಿಸುವುದು ಅವಶ್ಯವಾಗಿದೆ. ಈ ಕಾರ್ಯಕ್ಕೆ ಸರಕಾರ ಬದ್ದವಾಗಿದ್ದು ತಜ್ಞರ ಸಲಹೆಯನ್ನು ಆಧರಿಸಿ ಇತರೆ ಮೂಲಗಳಿಂದ ಅನುದಾನ ಪಡೆದು ಅನುಷ್ಠಾನಗೊಳಿಸಲಾಗುವುದು. ಅಲ್ಲದೇ ಹಾಲಿ ಕೈಗೊಂಡಿರುವ ತಾತ್ಕಾಲಿಕ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ಸಭೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್, ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರಕನ್ನಡ ಜಿಲ್ಲೆಗಳ ಶಾಸಕರುಗಳು, ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಪಂಗಳ ಮುಖ್ಯ ಕಾರ್ಯ ನಿರ್ವಹ ಣಾಧಿಕಾರಿಗಳು, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.
