ಬಾಯಿಮಾತಿಗಷ್ಟೆ ಮಹಿಳಾ ಸಬಲೀಕರಣ: ಬೇಡವಾದ ರಾಜಕೀಯ ಪ್ರಾತಿನಿಧ್ಯ
ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾಗಿ 26 ವರ್ಷಗಳೇ ಆದವು. ಆದರೆ ಹಾಗೆಯೇ ಬಾಕಿಯಾಗಿದೆ. ಮಹಿಳೆಯರಿಗೆ ಸಿಗುವ ರಾಜಕೀಯ ಪ್ರಾತಿನಿಧ್ಯವೂ ಕಡಿಮೆಯಾಗುತ್ತಲೇ ಇದೆ. ಸಂಸತ್ತಿನಲ್ಲಿ ಬಹುಮತವಿರುವ ಪಕ್ಷಕ್ಕೂ ಈ ಮಸೂದೆಗೆ ಅನುಮೋದನೆ ಪಡೆಯುವ ಮನಸ್ಸಿದ್ದ ಹಾಗಿಲ್ಲ. ಮೀಸಲಾತಿ ಮಸೂದೆ ಬಗ್ಗೆ ಒತ್ತಾಯಗಳು ಕೇಳಿಬರುತ್ತಲೇ ಇವೆ. ಆದರೆ ಅದಕ್ಕೊಂದು ಒಗ್ಗಟ್ಟಿನ ಸ್ವರೂಪ ಕೂಡ ಇಲ್ಲ.
ಮಹಿಳೆಯರಿಗೆ ವಿಧಾನಸಭೆ ಸ್ಥಾನಗಳು ಮತ್ತು ಹುದ್ದೆಗಳ ಮೀಸಲಾತಿ ಕುರಿತ ಖಾಸಗಿ ಮಸೂದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಮೊನ್ನೆ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ ಸ್ಪೀಕರ್ ಅವರಿಗೆ ಸಲ್ಲಿಸಿದರು. ವಿಧಾನಸಭೆಯಲ್ಲಿ ಶೇ.33 ಮಹಿಳಾ ಮೀಸಲಾತಿ ಹಾಗೂ ನೌಕರರು, ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವವರು ಸೇರಿದಂತೆ ಎಲ್ಲ ಸರಕಾರಿ ಉದ್ಯೋಗಗಳು, ಗುತ್ತಿಗೆಗಳು, ಸಮಿತಿಗಳು, ಆಯೋಗಗಳಂಥ ನಾಮನಿರ್ದೇಶಿತ ಹುದ್ದೆ ಗಳಲ್ಲಿ ಶೇ. 40 ಮೀಸಲಾತಿ ನೀಡಬೇಕೆಂಬುದು ಆ ಮಸೂದೆಯಲ್ಲಿ ಮಾಡಲಾಗಿರುವ ಒತ್ತಾಯ. ಭಾರತವು 66 ಕೋಟಿ ಮಹಿಳಾ ಜನಸಂಖ್ಯೆ ಯನ್ನು ಹೊಂದಿದ್ದರೂ, ಶೇ. 10.5 ಸಂಸದರು ಮತ್ತು ಶೇ.8ರಷ್ಟು ಶಾಸಕರು ಮಾತ್ರ ಮಹಿಳೆಯರಾಗಿದ್ದಾರೆ. ಕರ್ನಾಟಕ ವಿಧಾನಸಭೆಯಲ್ಲಿ ಒಟ್ಟು ಶಾಸಕರ ಪೈಕಿ ಶೇ.4ರಷ್ಟು ಮಾತ್ರ ಮಹಿಳೆಯರಿದ್ದಾರೆ ಎಂಬುದರ ಕಡೆ ಅವರು ಈ ವೇಳೆ ಗಮನ ಸೆಳೆದರು. ನಮ್ಮ ರಾಜ್ಯವು ಅತಿ ಕಡಿಮೆ ಮಹಿಳಾ ಪ್ರಾತಿನಿಧ್ಯವನ್ನು ಹೊಂದಿರುವುದರಿಂದ, ಪಕ್ಷಭೇದವಿಲ್ಲದೆ ಈ ಕಾನೂನನ್ನು ಅಂಗೀಕರಿಸುವುದು ಅತ್ಯಗತ್ಯ ಎಂದೂ ಅವರು ಒತ್ತಾಯಿಸಿದರು.
ಮಹಿಳಾ ಪ್ರಾತಿನಿಧ್ಯ ಹೆಚ್ಚಬೇಕೆಂಬುದು ಮಾತಿನಲ್ಲಿ ಮಾತ್ರವೇ ಉಳಿದಿದೆ ಎಂಬುದಕ್ಕೆ ಈಚಿನ ಚುನಾವಣೆಯಲ್ಲಿ ಮಹಿಳೆಯರಿಗೆ ಸಿಕ್ಕಿರುವ ಪ್ರಾತಿನಿಧ್ಯವೂ ಮತ್ತೊಮ್ಮೆ ಸಾಕ್ಷಿಯಾಗಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಗಳಲ್ಲಿ ಚುನಾಯಿತ ರಾದ ಮಹಿಳೆಯರ ಸಂಖ್ಯೆಯನ್ನು ನೋಡಿಕೊಂಡರೆ ಭ್ರಮನಿರಸನ ವಾಗುವಂತಿದೆ. ಗುಜರಾತ್ನ 182 ಸದಸ್ಯರ ವಿಧಾನಸಭೆಯಲ್ಲಿ ಕೇವಲ ಶೇ.8ರಷ್ಟು ಮಹಿಳಾ ಶಾಸಕರು ಆಯ್ಕೆಯಾಗಿದ್ದಾರೆ. ಇನ್ನು ಒಟ್ಟು ಮತದಾರರ ಅರ್ಧದಷ್ಟು ಮಹಿಳೆಯರೇ ಇರುವ ಹಿಮಾಚಲ ಪ್ರದೇಶದಲ್ಲಿ 67 ಪುರುಷರು ಮತ್ತು ಒಬ್ಬ ಮಹಿಳೆ ಮಾತ್ರ ಆಯ್ಕೆಯಾಗಿ ದ್ದಾರೆ. ಎಲ್ಲಾ ರಾಜ್ಯಗಳ ಅಸೆಂಬ್ಲಿಗಳಲ್ಲಿ ಮಹಿಳೆಯರ ರಾಷ್ಟ್ರೀಯ ಸರಾಸರಿ ಶೇ. 8ರಷ್ಟು ಮಾತ್ರ. ಇದು ತೀರಾ ನಿರಾಶಾದಾಯಕ ಸ್ಥಿತಿಯನ್ನೇ ಸೂಚಿಸುತ್ತದೆ. ಲೋಕಸಭೆಯಲ್ಲಿಯೂ ಸ್ಥಿತಿ ಉತ್ತಮವೇನಿಲ್ಲ. ಕೇವಲ ಶೇ. 14.9ರಷ್ಟು ಮಹಿಳೆಯರು ಸಂಸತ್ತಿಗೆ ಆಯ್ಕೆಯಾಗಿದ್ದಾರೆ.
2020ರಲ್ಲಿ ಬಿಡುಗಡೆಯಾದ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಅಈ್ಕ)
ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ಘೆಉ) ವರದಿಯ ಪ್ರಕಾರ, ಕೇಂದ್ರ ಮತ್ತು ರಾಜ್ಯ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿರುವ 50,000ಕ್ಕೂ ಹೆಚ್ಚು ಅಭ್ಯರ್ಥಿಗಳಲ್ಲಿ ಮಹಿಳೆಯರ ಪಾಲು ಹತ್ತನೇ ಒಂದು ಭಾಗಕ್ಕಿಂತ ಕಡಿಮೆ. ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ಇನ್ನೂ ಒಂದು ವಿಚಾರವಿದೆ. ಮಹಿಳಾ ಪ್ರಾತಿನಿಧ್ಯವೆಂದರೆ ಕೇವಲ ಚುನಾವಣೆಯಲ್ಲಿ ಸ್ಪರ್ಧಿಸುವುದು ಮಾತ್ರವಲ್ಲ. ಎಷ್ಟು ಮಹಿಳಾ ಅಭ್ಯರ್ಥಿಗಳ ಆಯ್ಕೆಯಾ ಗುತ್ತದೆ ಎಂಬುದು ಮುಖ್ಯ. 17ನೇ ಲೋಕಸಭೆ ಚುನಾವಣೆಯನ್ನು ತೆಗೆದುಕೊಂಡರೆ, ಚುನಾವಣೆಗೆ ಸ್ಪರ್ಧಿಸಿದ್ದ ಒಟ್ಟು 726 ಮಹಿಳಾ ಅಭ್ಯರ್ಥಿಗಳ ಪೈಕಿ 575 ಮಹಿಳಾ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಗೆಲುವು ಸಾಧಿಸುವಲ್ಲಿ ತಳಮಟ್ಟದಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಅನುಕೂಲಕರ ವಾತಾವರಣ ಇಲ್ಲದಿರುವುದನ್ನು ಇದು ಸೂಚಿಸುತ್ತದೆ.
ಅಂತರ್ ಸಂಸದೀಯ ಒಕ್ಕೂಟದ ಇತ್ತೀಚಿನ ವರದಿಯ ಪ್ರಕಾರ ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯದಲ್ಲಿ ಭಾರತವು 193 ದೇಶಗಳಲ್ಲಿ 144ನೇ ಸ್ಥಾನದಲ್ಲಿದೆ. ನೆರೆಯ ದೇಶಗಳಿಗೆ ಹೋಲಿಸಿಕೊಂಡರೆ, ಭಾರತವು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನೇಪಾಳಕ್ಕಿಂತ ಹಿಂದಿದೆ. 73ನೇ ಮತ್ತು 74ನೇ ಸಾಂವಿಧಾನಿಕ ತಿದ್ದುಪಡಿಗಳ ನಂತರ, ಸ್ಥಳೀಯ ಸರಕಾರಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವು ಸ್ವಲ್ಪಹೆಚ್ಚಿತೆಂಬುದೇನೋ ನಿಜ. ಅದೇ ರೀತಿ ಶಾಸಕಾಂಗ ಮತ್ತು ಸಂಸತ್ತಿನಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸಲು, ಮಹಿಳೆಯರಿಗೆ ಕನಿಷ್ಠ ಶೇ. 33 ಮೀಸಲಾತಿಯನ್ನು ಕಡ್ಡಾಯಗೊಳಿಸುವ ಕಾನೂನು ತಕ್ಷಣದ ಅಗತ್ಯವಾಗಿದೆ. ಕಳೆದ 25 ವರ್ಷಗಳಿಂದ ಬಾಕಿಯಾಗಿರುವ ಮಹಿಳಾ ಮೀಸಲಾತಿ ಮಸೂದೆಗೆ ಮುಕ್ತಿ ಸಿಕ್ಕಿಲ್ಲ. ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಾದರೂ ಅದಕ್ಕೆ ಅನುಮೋದನೆ ಸಿಕ್ಕೀತು ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಮಹಿಳಾ ಮೀಸಲಾತಿ ಮಸೂದೆಯನ್ನು ದೇವೇಗೌಡರು 1996ರಲ್ಲಿ ಮೊದಲು ಮಂಡಿಸಿದರು. ಮಸೂದೆಯು ಲೋಕಸಭೆಯಲ್ಲಿ ಅನುಮೋದನೆ ಪಡೆಯಲು ವಿಫಲವಾದ ನಂತರ, ಅದನ್ನು ಗೀತಾ ಮುಖರ್ಜಿ ಅವರ ಅಧ್ಯಕ್ಷತೆಯ ಜಂಟಿ ಸಂಸದೀಯ ಸಮಿತಿಗೆ ಉಲ್ಲೇಖಿಸಲಾಯಿತು, ಅದು ಡಿಸೆಂಬರ್ 1996ರಲ್ಲಿ ತನ್ನ ವರದಿಯನ್ನು ಮಂಡಿಸಿತು. ಆದಾಗ್ಯೂ, ಲೋಕಸಭೆಯ ವಿಸರ್ಜನೆಯೊಂದಿಗೆ ಮಸೂದೆಯು ಹಾಗೆಯೇ ಉಳಿದುಹೋಯಿತು. ವಾಜಪೇಯಿಯವರ ಎನ್ಡಿಎ ಸರಕಾರವು 1998ರಲ್ಲಿ 12ನೇ ಲೋಕಸಭೆಯಲ್ಲಿ ಮಸೂದೆಯನ್ನು ಮರುಪರಿಚಯಿಸಿತು. ಆದರೂ ಮತ್ತೊಮ್ಮೆ, ಅದು ಬೆಂಬಲವನ್ನು ಪಡೆಯುವಲ್ಲಿ ವಿಫಲವಾಯಿತು. 1999ರಲ್ಲಿ, ಎನ್ಡಿಎ ಸರಕಾರವು 13ನೇ ಲೋಕಸಭೆಯಲ್ಲಿ ಅದನ್ನು ಪುನಃ ಮಂಡಿಸಿತು. ತರುವಾಯ 2003ರಲ್ಲಿ ಸಂಸತ್ತಿನಲ್ಲಿ ಎರಡು ಬಾರಿ ಮಸೂದೆಯನ್ನು ಮಂಡಿಸಲಾಯಿತು. 2004ರಲ್ಲಿ ಯುಪಿಎ ಸರಕಾರವು ಇದನ್ನು ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ಸೇರಿಸಿತು. ಯುಪಿಎ ಸರಕಾರವು ವಿಧಾನ ಸಭೆಗಳಲ್ಲಿ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಗಾಗಿ ಶಾಸನವನ್ನು ರಚಿಸಲು ತನ್ನ ಬದ್ಧತೆಯನ್ನು ಸಾರಿತು.
2008ರಲ್ಲಿ, ಸರಕಾರವು ರಾಜ್ಯಸಭೆಯಲ್ಲಿ ಮಸೂದೆಯನ್ನು ಮಂಡಿಸಿತು, ಆದ್ದರಿಂದ ಅದು ಮತ್ತೆ ಲೋಪವಾಗುವುದಿಲ್ಲ. ಕಾನೂನು ಮತ್ತು ನ್ಯಾಯದ ಸಂಸದೀಯ ಸ್ಥಾಯಿ ಸಮಿತಿಯು ಡಿಸೆಂಬರ್ 2009ರಲ್ಲಿ ಮಸೂದೆಯನ್ನು ಅಂಗೀಕರಿಸಲು ಶಿಫಾರಸು ಮಾಡಿತು. ಫೆಬ್ರವರಿ 2010ರಲ್ಲಿ ಕೇಂದ್ರ ಸಚಿವ ಸಂಪುಟವು ಅದನ್ನು ಅಂಗೀಕರಿಸಿತು. 2010ರ ಮಾರ್ಚ್ 9ರಂದು ರಾಜ್ಯಸಭೆಯಲ್ಲಿ ಮಸೂದೆಯನ್ನು ಭಾರೀ ಚರ್ಚೆಯ ಬಳಿಕ ಅಂಗೀಕರಿಸಲಾಯಿತು. ಇತಿಹಾಸ ಸೃಷ್ಟಿಯಾಯಿತು. ನಂತರ ಮಸೂದೆಯು ಲೋಕಸಭೆಗೆ ತಲುಪಿತು, ಅಲ್ಲಿ ಅದು ಅಂಗೀಕಾರವಾಗಲಿಲ್ಲ. ಬಳಿಕ ಲೋಕಸಭೆ ವಿಸರ್ಜನೆಗೊಂಡಿತು. ಆದರೆ, ರಾಜ್ಯಸಭೆ ಎಂದೂ ವಿಸರ್ಜನೆಯಾಗುವುದಿಲ್ಲವಾದ್ದರಿಂದ ಅಲ್ಲಿ ಅಂಗೀಕಾರಗೊಂಡಿರುವ ಮಸೂದೆ ಜೀವಂತ ಎಂಬುದು ಪರಿಣತರ ವಾದ. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಇದನ್ನು ಇತ್ತೀಚೆಗೆ ಪ್ರತಿಪಾದಿಸಿದರು.
ಈ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾದುದು ಆರ್ಜೆಡಿ ಮತ್ತು ಸಮಾಜವಾದಿ ಪಕ್ಷಗಳಿಂದ. ಮಹಿಳಾ ಮೀಸಲಾತಿಯೊಳಗೆ ಹಿಂದುಳಿದ ವರ್ಗದ ಮಹಿಳೆಯರಿಗೆ ಒಳ ಮೀಸಲಾತಿ ಇರಬೇಕೆಂಬುದು ಇವುಗಳ ಒತ್ತಾಯ. ಎಲ್ಜೆಪಿ ಪಕ್ಷದ ಚಿರಾಗ್ ಪಾಸ್ವಾನ್, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ರಂತಹ ನಾಯಕರು ಮಹಿಳಾ ಮೀಸಲಾತಿ ಮಸೂದೆ ಪರ ದನಿ ಎತ್ತುತ್ತಲೇ ಬಂದಿದ್ದಾರೆ. ಕಾಂಗ್ರೆಸ್ ಕೂಡ ಮೀಸಲಾತಿ ಮಸೂದೆ ಜಾರಿಗಾಗಿ ಒತ್ತಾಯಿಸುತ್ತಲೇ ಇದೆ. ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಹಿಳೆಯರಿಗೆ ಶೇ. 40ರ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಹೇಳಿದರು. ರಾಜ್ಯದಲ್ಲಿ ಕೂಡ ಕಾಂಗ್ರೆಸ್ ಬರುವ ಚುನಾವಣೆಯಲ್ಲಿ ಅನುಸರಿಸುವುದೇ ಎಂಬುದು ಕುತೂಹಲದ ಸಂಗತಿ. ತೃಣಮೂಲ ಕಾಂಗ್ರೆಸ್, ಸಂಯುಕ್ತ ಜನತಾದಳ, ಶಿರೋಮಣಿ ಅಕಾಲಿ ದಳ ಕೂಡ ಈ ಬಾರಿ ಅಧಿವೇಶನದಲ್ಲಿ ಮಸೂದೆ ಮರುಮಂಡನೆಗೆ ಒತ್ತಾಯಿಸಿದವು.
ಇಲ್ಲಿಯವರೆಗೆ ಭಾರತದಲ್ಲಿ ಕೇವಲ ಎರಡು ಪ್ರಾದೇಶಿಕ ರಾಜಕೀಯ ಪಕ್ಷಗಳು - ಒಡಿಶಾದ ಬಿಜು ಜನತಾ ದಳ (ಬಿಜೆಡಿ) ಮತ್ತು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಾತ್ರ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಥಾನಗಳನ್ನು ಮೀಸಲಿಟ್ಟಿವೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಟಿಎಂಸಿ ಮತ್ತು ಬಿಜೆಡಿ ಕ್ರಮವಾಗಿ ಶೇ.40 ಮತ್ತು ಶೇ.33 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಕುತೂಹಲಕಾರಿ ವಿಚಾರವೆಂದರೆ, ಟಿಎಂಸಿಯ ಮಹಿಳಾ ಅಭ್ಯರ್ಥಿಗಳ ಶೇಕಡಾ 65ರಷ್ಟು ಗೆದ್ದಿದ್ದಾರೆ. ಇದೇ ವೇಳೆ ಪುರುಷರ ಗೆಲುವಿನ ಪ್ರಮಾಣ ಶೇ.44ರಷ್ಟು. ಅಂದರೆ 17 ಮಹಿಳಾ ಅಭ್ಯರ್ಥಿಗಳಿಗೆ 11 ಮಂದಿ ಗೆದ್ದರೆ ಪುರುಷರಲ್ಲಿ 25 ಅಭ್ಯರ್ಥಿಗಳಿಗೆ 11 ಮಂದಿ ಗೆದ್ದಿದ್ದರು. ಹಾಗೆಯೇ ಬಿಜೆಡಿಯಲ್ಲಿ ಮಹಿಳಾ ಅಭ್ಯರ್ಥಿಗಳಶೇ. 86ರಷ್ಟು ಗೆದ್ದಿದ್ದಾರೆ. ಪುರುಷರಲ್ಲಿ ಈ ಪ್ರಮಾಣ ಶೇ.43ರಷ್ಟು. ಅಂದರೆ 7 ಮಹಿಳಾ ಅಭ್ಯರ್ಥಿಗಳಲ್ಲಿ 6 ಮಂದಿ ಗೆದ್ದರೆ, ಪುರುಷರಲ್ಲಿ 14 ಅಭ್ಯರ್ಥಿಗಳಿಗೆ 6 ಮಂದಿ ಗೆದ್ದಿದ್ದಾರೆ. ಒಡಿಶಾ 1991ರಲ್ಲಿ ಎಲ್ಲಾ ಸರಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ. 30 ಮೀಸಲಾತಿ ಘೋಷಿಸಿರು ವುದಷ್ಟೇ ಅಲ್ಲದೆ, ಪಂಚಾಯತ್ ರಾಜ್ನಲ್ಲಿ ಈಗ ಶೇ. 50ಕ್ಕೆ ಹೆಚ್ಚಿಸಲ್ಪಟ್ಟ ಶೇ. 33ರ ಮೀಸಲಾತಿಯನ್ನು ಘೋಷಿಸಿದ್ದ ಮೊದಲ ರಾಜ್ಯವೂಹೌದು. ಆದಾಗ್ಯೂ, ಎರಡೂ ಪಕ್ಷಗಳ ಈ ಮಹತ್ವದ ಹೆಜ್ಜೆ ರಾಷ್ಟ್ರೀಯ ಪಕ್ಷಗಳನ್ನು ಪ್ರೇರೇಪಿಸುವಲ್ಲಿ ವಿಫಲವಾಗಿದೆ. ವಾಸ್ತವವಾಗಿ, ಸಾರ್ವಜನಿಕ ಹುದ್ದೆಗಳಿಗೆ ಪುರುಷ ರಷ್ಟೇ ಪ್ರಮಾಣದಲ್ಲಿ ಮಹಿಳೆಯರುಆಯ್ಕೆಯಾಗದಿರಲು ಕಾರಣ, ಅವರು ರಾಜಕೀಯವಾಗಿ ಅಸಮರ್ಥರು ಎಂದಲ್ಲ. ಈಚಿನ ವರ್ಷಗಳಲ್ಲಿ ಮಹಿಳೆಯರ ಮತಗಳ ಪಾಲು ಗಣನೀಯವಾಗಿ ಹೆಚ್ಚಿದೆಯಾದರೂ, ಪ್ರಾತಿನಿಧ್ಯದ ವಿಚಾರ ಬಂದಾಗ ಮಹಿಳೆಯರ ಸಂಖ್ಯೆ ಹೆಚ್ಚಿಲ್ಲ.
ಜಾತಿ ಪ್ರಾತಿನಿಧ್ಯವನ್ನು ಕೂಡ ಮಹಿಳಾ ಮೀಸಲಾತಿಯಲ್ಲಿ ಗಣನೆಗೆ ತೆಗೆದುಕೊಳ್ಳಬೇಕು ಎಂದು ಪ್ರತಿಪಾದಿಸಲಾಗುತ್ತದೆ. ಮಹಿಳಾ ಮೀಸಲಾತಿಯ ಯಾವುದೇ ಕ್ರಮವು ಸಾಂವಿಧಾನಿಕ ತತ್ವಗಳನ್ನು ಒಳಗೊಂಡಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಿಳೆಯರಿಗೆ ನ್ಯಾಯಯುತ ಪ್ರಾತಿನಿಧ್ಯ ಸಿಗುವಂತಾಗುವುದಕ್ಕೆ ಕೂಡ ಮಹಿಳಾ ಮೀಸಲಾತಿಯು ಕೋಟಾವನ್ನು ಹೊಂದಿರಬೇಕು ಎಂಬ ವಾದಗಳಿಗೆ ಮಹತ್ವವಿದೆ.
ವ್ಯವಸ್ಥಿತ ಅಸಮಾನತೆ ಮತ್ತು ಅಡೆತಡೆಗಳಿಂದಾಗಿ ಮಹಿಳೆಯರು ರಾಜಕೀಯ ಪ್ರಾತಿನಿಧ್ಯದಿಂದ ವಂಚಿತರಾಗುತ್ತಿದ್ದಾರೆ. ಲಿಂಗ ಕೋಟಾವಿಲ್ಲದೆ, ಮಹಿಳಾ ಪ್ರಾತಿನಿಧ್ಯವು ಪ್ರಜಾಪ್ರಭುತ್ವದಲ್ಲಿ ಸಾಧ್ಯವಿಲ್ಲ. ಈ ವಾಸ್ತವವನ್ನು ಅರ್ಥಮಾಡಿಕೊಂಡು, ಎಲ್ಲಾ ವಿಧಾನ ಸಭೆಗಳಲ್ಲಿ, ಪರಿಷತ್ತುಗಳಲ್ಲಿ ಮಹಿಳಾ ಮೀಸಲಾತಿಗೆ ಒತ್ತಾಯಿಸುವ ಖಾಸಗಿ ಸದಸ್ಯರ ಮಸೂದೆಯನ್ನು ಪರಿಚಯಿಸುವುದು, ಅಂಚಿನಲ್ಲಿರುವ ಸಮುದಾಯಗಳಿಂದ ಬರುವ ಮಹಿಳೆಯರಿಗೆ ಅದರೊಳಗೆ ಮೀಸಲಾತಿ ಸ್ಥಾನಗಳನ್ನು ನೀಡುವುದು ಅಗತ್ಯವಿದೆ. ಅಂಗೀ ಕಾರವಾದರೆ, ಕನಿಷ್ಠ ಶೇ. 33 ಮಹಿಳಾ ಪ್ರಾತಿನಿಧ್ಯ ಸಾಧ್ಯವಾಗುತ್ತದೆ.
ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿಯು ಹೆಚ್ಚಿನ ರಾಜಕೀಯ ಪಕ್ಷಗಳು ಚರ್ಚಿಸಿದ ಮತ್ತು ಒಪ್ಪಿಕೊಂಡಿರುವ ಒಂದು ವಿಚಾರ ವಾಗಿದೆ. ಈಗ ಅದನ್ನು ಕಾರ್ಯರೂಪಕ್ಕೆ ತರುವ ಸಮಯ ಬಂದಿದೆ. ಅದು ಅವಶ್ಯವಾಗಿ ಆಗಬೇಕು.
ಮಹಿಳೆಯರನ್ನು ಅವಮಾನಿಸುವ ಮನುಸ್ಮತಿಯನ್ನು ಸುಟ್ಟು ಹಾಕಿದ್ದ ಅಂಬೇಡ್ಕರ್ ಮಹಿಳೆಯರು ಸಮಾನವಾಗಿ ಬದುಕುವಂತಾ ಗುವ ಹಕ್ಕುಗಳನ್ನು ಸಂವಿಧಾನದಲ್ಲಿ ಒದಗಿಸಿದರು. ಶಿಕ್ಷಣದಂಥ ಹಕ್ಕುಗಳ ಜೊತೆಗೇ ಮತದಾನದ ಹಕ್ಕನ್ನೂ ಒದಗಿಸಿದರು. ಸಂವಿಧಾನದ 15ನೇ ವಿಧಿಯು ಲಿಂಗದ ಆಧಾರದಲ್ಲಿ ತಾರತಮ್ಯ ಮಾಡುವಂತಿಲ್ಲ ಎಂಬುದನ್ನು ಹೇಳುತ್ತದೆ. ಅದಾಗಿ ದಶಕಗಳೇ ಕಳೆದರೂ, ‘ಆಝಾದಿ ಕಾ ಅಮೃತ್ ಮಹೋತ್ಸವ್’ ಆದ ಮೇಲೂ ಮಹಿಳೆ ಎರಡನೇ ದರ್ಜೆಯವಳಾಗಿಯೇ ಇರುವಂತಾಗಿರುವುದಕ್ಕೆ ಆನಂತರದ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ. ಯುಪಿಎ ಹಲವು ಪಕ್ಷಗಳ ಒಕ್ಕೂಟವಾಗಿದ್ದರಿಂದ ಮಹಿಳಾ ಮೀಸಲಾತಿ ಮಸೂದೆ ವಿಚಾರವಾಗಿ ಒಮ್ಮತ ಮೂಡದೆ ಅಂಗೀಕಾರ ಸಾಧ್ಯವಾಗಲಿಲ್ಲ. ಆದರೆ ಈಗ ಸಾಕಷ್ಟು ಪ್ರಾಬಲ್ಯ ಹೊಂದಿರುವ ಬಿಜೆಪಿ ಮನಸ್ಸು ಮಾಡಿದರೆ ಮಸೂದೆಗೆ ಅನುಮೋದನೆ ಪಡೆಯುವುದು ದೊಡ್ಡ ಮಾತಲ್ಲ. ಆದರೆ ಬಹುಶಃ ಅದಕ್ಕೆ ಅದು ಬೇಕಿಲ್ಲ. ಬಾಯಲ್ಲಿ ಮಾತ್ರ ಮಹಿಳಾ ಸಬಲೀಕರಣದ ಮಾತನ್ನಾಡುವ ಬಿಜೆಪಿಯದ್ದು ಕಡೆಗೂ ಮನುಸ್ಮತಿ ಮನಸ್ಥಿತಿಯೇ. ಇಲ್ಲವಾದರೆ ಮಹಿಳಾ ಸಬಲೀಕರಣದ ಭಾಗವಾಗಿಯೇ ಮಹಿಳಾ ಮೀಸಲಾತಿ ಮಸೂದೆಯನ್ನು ಮರುಮಂಡನೆ ಮಾಡುವ ನಿಲುವನ್ನು ಅದು ತೋರಿಸಬೇಕಿತ್ತು. ಇನ್ನೊಂದೆಡೆ ಮಹಿಳಾ ಮಸೂದೆ ಪರವಾದ ಹೋರಾಟಗಳಿಗೂ ಬಲವಿಲ್ಲ. ಬಿಡಿಬಿಡಿ ಧ್ವನಿಗಳು ಕೇಳಿಸುತ್ತಿವೆಯೇ ಹೊರತು ಒಂದೇ ಸ್ವರದಲ್ಲಿ ಅದಕ್ಕಾಗಿ ನಿಲ್ಲುವ ಒಗ್ಗೂಡುವಿಕೆ ಇಲ್ಲವಾಗಿದೆ. ಜಾತಿ ಮೀಸಲಾತಿ, ಆರ್ಥಿವಾಗಿ ದುರ್ಬಲರಾಗಿರುವವರ ಮೀಸಲಾತಿ ಬಗ್ಗೆಯೆಲ್ಲ ಚರ್ಚೆಯಾಗುತ್ತಿರುವಾಗ, ಅಂಥ ಮೀಸಲಾತಿ ಜಾರಿಯಾಗುತ್ತಿರುವಾಗ, ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕಾರ ಮಾಡುವ ದೃಢತೆಯೊಂದು ರಾಜಕೀಯ ಪಕ್ಷಗಳಿಗೆ ಇಲ್ಲವಾಗಿದೆ ಎಂಬುದೇ ವಿಪರ್ಯಾಸ.