ಉಗ್ರದಾಳಿ: ದೇಶದ ಜನರ ಕ್ಷಮೆ ಕೋರಿದ ಶ್ರೀಲಂಕಾ ಪ್ರಧಾನಿ
ಕೊಲಂಬೊ, ಎ. 27: ಈಸ್ಟರ್ ರವಿವಾರ ನಡೆದ ಭಯೋತ್ಪಾದಕ ದಾಳಿಗಳನ್ನು ತಡೆಯಲು ವಿಫಲವಾಗಿರುವುದಕ್ಕಾಗಿ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮೆಸಿಂಘೆ ಶುಕ್ರವಾರ ಜನರ ಕ್ಷಮೆ ಕೋರಿದ್ದಾರೆ.
ಮೂರು ವಿಲಾಸಿ ಹೊಟೇಲ್ಗಳು ಮತ್ತು ನಾಲ್ಕು ಚರ್ಚ್ಗಳಲ್ಲಿ ನಡೆದ ಸರಣಿ ಬಾಂಬ್ ದಾಳಿಯು ಶ್ರೀಲಂಕಾದ ಬೃಹತ್ ಗುಪ್ತಚರ ವೈಫಲ್ಯವನ್ನು ಎತ್ತಿತೋರಿಸಿತ್ತು. ವೈಫಲ್ಯದ ಹೊಣೆಯನ್ನು ಹೊತ್ತು ದೇಶದ ರಕ್ಷಣಾ ಕಾರ್ಯದರ್ಶಿ ಹೇಮಸಿರಿ ಫೆರ್ನಾಂಡೊ ಮತ್ತು ಪೊಲೀಸ್ ಮುಖ್ಯಸ್ಥ ಪುಜಿತ್ ಜಯಸುಂದರ ಈಗಾಗಲೇ ರಾಜೀನಾಮೆ ನೀಡಿದ್ದಾರೆ.
‘‘ನಾವು ಸಾಮೂಹಿಕ ಜವಾಬ್ದಾರಿಯನ್ನು ವಹಿಸುತ್ತೇವೆ ಹಾಗೂ ಭಯೋತ್ಪಾದಕ ದಾಳಿಯಿಂದ ನಮ್ಮ ಜನರನ್ನು ರಕ್ಷಿಸಲು ಆಗದ ನಮ್ಮ ವೈಫಲ್ಯಕ್ಕಾಗಿ ಕ್ಷಮೆ ಕೋರುತ್ತೇವೆ’’ ಎಂಬುದಾಗಿ ವಿಕ್ರಮೆಸಿಂಘೆ ಟ್ವೀಟ್ ಮಾಡಿದ್ದಾರೆ.
‘‘ಅಂತರ್ರಾಷ್ಟ್ರೀಯ ಸಮುದಾಯದ ಬೆಂಬಲದೊಂದಿಗೆ, ನಮ್ಮ ಚರ್ಚ್ಗಳನ್ನು ಪುನರ್ನಿರ್ಮಿಸಲು, ನಮ್ಮ ಆರ್ಥಿಕತೆಗೆ ಪುನಶ್ಚೇತನ ನೀಡಲು ಹಾಗೂ ಭಯೋತ್ಪಾದನೆಯನ್ನು ತಡೆಯಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ನಾವು ಪಣ ತೊಡುತ್ತೇವೆ’’ ಎಂದು ಅವರು ಹೇಳಿದ್ದಾರೆ.