ಜರ್ಮನಿಯಲ್ಲಿ ಬೀಫ್ ವಿರೋಧಿಸಿದ ಉತ್ತರ ಭಾರತೀಯರಿಗೆ ಅಲ್ಲಿನ ಪೊಲೀಸರು ಹೇಳಿದ್ದೇನು ?
ಹೊಸದಿಲ್ಲಿ, ಸೆ.3: ಜರ್ಮನಿಯ ಭಾರತೀಯ ಕಾನ್ಸುಲೇಟ್ ಆಯೋಜಿಸುವ ಇಂಡಿಯನ್ ಫೆಸ್ಟ್ನಲ್ಲಿ ಕೇರಳ ಸಮಾಜಂ ಬೀಫ್ ಖಾದ್ಯಗಳನ್ನು ತಯಾರಿಸಿದೆ ಎಂದು ತಿಳಿದು ಅದರ ವಿರುದ್ಧ ಕೆಲ ಉತ್ತರ ಭಾರತೀಯರು ಪ್ರತಿಭಟನೆ ನಡೆಸಿದ್ದಾರೆ.
ಈ ಆಹಾರ ಉತ್ಸವದ ಮೆನುವಿನಲ್ಲಿ ಪರೋಟ ಹಾಗೂ ಬೀಫ್ ನಮೂದಿಸಿರುವುದನ್ನು ಕಂಡು ಉತ್ತರ ಭಾರತೀಯರಿಗೆ ಆಕ್ರೋಶ ಮೂಡಿದ್ದು ಆಹಾರೋತ್ಸವದಲ್ಲಿದ್ದ ಬೀಫ್ ಸ್ಟಾಲ್ ಮುಚ್ಚಬೇಕೆಂದು ಅವರು ಪಟ್ಟು ಹಿಡಿದಿದ್ದರು. ಕೊನೆಗೆ ಅನಿವಾರ್ಯವಾಗಿ ಕೇರಳ ಸಮಾಜಂನ ಸ್ಟಾಲ್ ಮುಚ್ಚುವಂತೆ ಸೂಚಿಸಲಾಯಿತು.
ಇದನ್ನರಿತ ಹಲವಾರು ಮಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಸ್ಥಳಕ್ಕಾಗಮಿಸಿದ ಪೊಲೀಸರು ಜರ್ಮನಿಯಲ್ಲಿ ಯಾರಿಗೂ ಏನನ್ನೂ ತಿನ್ನುವುದರ ವಿರುದ್ಧ ನಿರ್ಬಂಧ ಹೇರಲಾಗುವುದಿಲ್ಲ, ಬೀಫ್ ಸೇವನೆ ವಿರುದ್ಧ ಪ್ರತಿಭಟಿಸಲು ಇದು ನಿಮ್ಮ ದೇಶವಲ್ಲ ಎಂದು ಪ್ರತಿಭಟನಾಕಾರರ ಮುಖಕ್ಕೆ ಹೊಡೆದ ಹಾಗೆ ಹೇಳಿದ ನಂತರ ಪ್ರತಿಭಟನಾಕಾರರು ಸ್ಥಳದಿಂದ ತೆರಳಿದರು.
ಘಟನೆಯ ನಂತರ ಜರ್ಮನಿಯ ಮಲಯಾಳಿ ಸಮುದಾಯ ಉತ್ತರ ಭಾರತೀಯರನ್ನು ಕಟುವಾಗಿ ಟೀಕಿಸಿದೆಯಲ್ಲದೆ ಹಲವಾರು ಮಂದಿ ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬಗ್ಗೆ ಹೇಳಿಕೊಂಡು ತಮ್ಮ ಆಹಾರದ ಆಯ್ಕೆಯ ಮೇಲೆ ಅತಿಕ್ರಮಣ ಮಾಡಲಾಗಿದೆ ಎಂದು ಆರೋಪಿಸಿದರು.