ಶ್ರೀಲಂಕಾ: ತಮಿಳರ ಗಂಟಲು ಸೀಳಿ ಕೊಂದಿದ್ದ ಸೇನಾಧಿಕಾರಿಗೆ ಕ್ಷಮೆ
ಕೊಲಂಬೊ, ಮಾ. 27: ಶ್ರೀಲಂಕಾದ ರಕ್ತಸಿಕ್ತ ಆಂತರಿಕ ಯುದ್ಧದ ಅವಧಿಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ ತಮಿಳು ನಾಗರಿಕರ ಗಂಟಲು ಸೀಳಿ ಕೊಂದು, ಬಳಿಕ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಸೇನಾಧಿಕಾರಿಯೊಬ್ಬನಿಗೆ ದೇಶದ ಅಧ್ಯಕ್ಷ ಗೋತಬಯ ರಾಜಪಕ್ಸ ಗುರುವಾರ ಕ್ಷಮಾದಾನ ನೀಡಿ ಬಿಡುಗಡೆಗೊಳಿಸಿದ್ದಾರೆ.
2000 ಡಿಸೆಂಬರ್ನಲ್ಲಿ ನಡೆಸಿದ ಹತ್ಯಾಕಾಂಡಕ್ಕಾಗಿ ಸುನಿಲ್ ರತ್ನಾಯಕೆ ಗಲ್ಲು ಶಿಕ್ಷೆಗೆ ಗುರಿಯಾಗಿದ್ದನು. ಸಂಘರ್ಷದ ಅವಧಿಯಲ್ಲಿ ನಡೆಸಿದ ದೌರ್ಜನ್ಯಗಳಿಗೆ ಉತ್ತರದಾಯಿತ್ವವನ್ನು ನಿಗದಿಪಡಿಸುವ ಶ್ರೀಲಂಕಾದ ಹಿಂದಿನ ಸರಕಾರದ ದಿಟ್ಟ ಕ್ರಮದಿಂದಾಗಿ ಸೇನಾಧಿಕಾರಿಗೆ ಗಲ್ಲುಶಿಕ್ಷೆಯಾಗಿತ್ತು.
ಐದು ವರ್ಷದ ಮಗು ಮತ್ತು ಮೂವರು ಹದಿಹರಯದವರು ಸೇರಿದಂತೆ ಅಲ್ಪಸಂಖ್ಯಾತ ತಮಿಳು ಸಮುದಾಯದ 8 ಮಂದಿಯನ್ನು ಕೊಂದಿರುವ ಪ್ರಕರಣದಲ್ಲಿ ಸೇನಾಧಿಕಾರಿ ವಿರುದ್ಧದ ಆರೋಪ ನ್ಯಾಯಾಲಯವೊಂದರಲ್ಲಿ ಸಾಬೀತಾಗಿತ್ತು. ಕಳೆದ ವರ್ಷ ಸೇನಾಧಿಕಾರಿಯ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಅವಿರೋಧವಾಗಿ ತಿರಸ್ಕರಿಸಿತು ಹಾಗೂ ಮರಣದಂಡನೆಯನ್ನು ಎತ್ತಿ ಹಿಡಿಯಿತು.
Next Story