ಮಾನವ ಸಂಕುಲಕ್ಕೆ ಕಾದಿದೆ ಮತ್ತೊಂದು ಅಪಾಯ: ವಿಜ್ಞಾನಿಗಳ ಎಚ್ಚರಿಕೆ
ಸಾಂದರ್ಭಿಕ ಚಿತ್ರ
ಫ್ರಾನ್ಸ್, ಆ.25: ದೀರ್ಘಕಾಲದಿಂದ ಸುಪ್ತಾವಸ್ಥೆಯಲ್ಲಿದ್ದ ವೈರಾಣುಗಳು ಹವಾಮಾನ ಬದಲಾವಣೆಯಿಂದಾಗಿ ಮತ್ತೆ ಜೀವವಾಗಿವೆಯೆಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಸೋಂಕುರೋಗಗಳ ಹರಡುವಿಕೆಗೆ ಹವಾಮಾನ ಬದಲಾವಣೆಯು ಚಾಲಕ ಶಕ್ತಿಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸೊಳ್ಳೆಗಳ ಮೂಲಕ ಹರಡುವ ಮಲೇರಿಯಾ, ಡೆಂಗ್ ವೈರಾಣುಗಳು ಅಥವಾ ಸೈಬಿರಿಯದಲ್ಲಿ ಕಾಣಿಸಿಕೊಂಡಿರುವ ಇತಿಹಾಸ ಪೂರ್ವದ ವೈರಾಣುಗಳು ಮತ್ತು ಯುರೋಪ್ನಲ್ಲಿ ಝಿಕಾ ವೈರಾಣು ಸಕ್ರಿಯವಾಗಲು ಜಾಗತಿಕ ತಾಪಮಾನ ಕಾರಣವೆಂದು ಅವರು ತಿಳಿಸಿದ್ದಾರೆ.
ಜಗತ್ತಿನಾದ್ಯಂತ 7.60 ಲಕ್ಷಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿರುವ ಕೋವಿಡ್-19 ಸಾಂಕ್ರಾಮಿಕ ರೋಗದ ವೈರಾಣು ಕಾಡು ಬಾವಲಿಯಿಂದಲೇ ಬಂದಿರುವುದು ಬಹುತೇಕ ಖಚಿತವಾಗಿದೆಯೆಂದು ಅವರು ಹೇಳಿದ್ದಾರೆ. ಜಗತ್ತಿನೆಲ್ಲೆಡೆ ಮಾನವನ ಅತಿಕ್ರಮದಿಂದಾಗಿ ಅರಣ್ಯ ಪ್ರದೇಶಗಳು ವಿರಳವಾಗುತ್ತಿರುವುರಿಂದ ಅತ್ಯಂತ ಅಪಾಯಕಾರಿಯಾದ ವೈರಾಣುಗಳು ರೂಪಾಂತರಗೊಂಡು, ಮಾನವಕುಲಕ್ಕೆ ಅಪಾಯಕಾರಿಯಾಗಿ ಪರಿಣಮಿಸಲಿವೆಯೆಂದು ಈ ಬಗ್ಗೆ ಅಧ್ಯಯನ ನಡೆಸಿರುವ ಸ್ವೀಡನ್ನ ಯೂಮಿಯಾ ವಿಶ್ವವಿದ್ಯಾನಿಲಯದ ಕ್ಲಿನಿಕಲ್ ಸೂಕ್ಷ್ಮಜೀವವಿಜ್ಞಾನದ ಸಂಶೋಧಕ ಬ್ರಿಗಿಟಾ ಎನೆನ್ಗಾರ್ಡ್ ತಿಳಿಸಿದ್ದಾರೆ.
“ನಮ್ಮ ಅಜ್ಞಾನವೇ ನಮ್ಮ ಅತಿ ದೊಡ್ಡ ಶತ್ರುವಾಗಿದೆ.” ಈ ಪ್ರಕೃತಿಯು ಅತ್ಯಂತ ಸೂಕ್ಷಜೀವಿಗಳಿಂದ ತುಂಬಿಕೊಂಡಿದೆಯೆಂದು ಅವರು ತಿಳಿಸಿದ್ದಾರೆ. ‘‘ರಶ್ಯ, ಕೆನಡ ಹಾಗೂ ಅಲಾಸ್ಕಗಳಲ್ಲಿ ಪೆರ್ಮಾಫ್ರೋಸ್ಟ್ ಎಂಬ ಹವಾಮಾನ ಬದಲಾವಣೆಯಿಂದಾಗಿ ಕೈಗಾರೀಕರಣದ ಮುಂಚೆ ಇದ್ದುದಕ್ಕಿಂತ ಮೂರು ಪಟ್ಟು ಅಧಿಕ ಇಂಗಾಲ ಪ್ರಕೃತಿಗೆ ಬಿಡುಗಡೆಯಾಗುತ್ತಿದೆಯೆಂದು ಅವರು ಹೇಳಿದ್ದಾರೆ.
“ಮಾನವಸಂಕುಲದ ಭವಿಷ್ಯ ನಿಜಕ್ಕೂ ಭಯಾನಕವಾಗಿದೆ. ನಾವು ಕೂಡಾ ಪ್ರಾಣಿಗಳೇ ಆಗಿದ್ದೇವೆ. ನಾವು ನಮ್ಮ ಗಡಿಗಳನ್ನು ವಿಸ್ತರಿಸಿಕೊಂಡಿರುವುದೇ ನಮಗೆ ಮಾರಕವಾಗುತ್ತಿದೆ’’ ಎಂದು ಬ್ರಿಗೆಟ್ಟಾ ಇವೆನ್ಗಾರ್ಡ್ ತಿಳಿಸಿದ್ದಾರೆ.